ಉತ್ತರ ಕನ್ನಡ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರನ್ನು ಸೇರಿ ಮೂವರು ಅಧಿಕಾರಿಗಳ ವರ್ಗಾವಣೆಗೆ ಜನಶಕ್ತಿ ವೇದಿಕೆಯವರು ಆಗ್ರಹಿಸಿದ್ದಾರೆ. `ಡೀಸಿ ಲಕ್ಷ್ಮೀಪ್ರಿಯಾ ಅವರು ತುಂಬಾ ಒಳ್ಳೆಯವರಾಗಿದ್ದು, ಅವರ ಸೌಮ್ಯ ಸ್ವಭಾವದಿಂದಾಗಿ ಸಾರ್ವಜನಿಕ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಅವರಿಗೆ ಅಧೀನ ಅಧಿಕಾರಿಗಳ ಮೇಲೆ ಹಿಡಿತವಿಲ್ಲದ ಕಾರಣ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೂ ಆ ಬಗ್ಗೆ ತನಿಖೆ ನಡೆದಿಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ.
ಇದರೊಂದಿಗೆ ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದ ನಿರ್ದೇಶಕಿ ಡಾ ಪೂರ್ಣಿಮಾ, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಜಾನ್ ಮಿಸ್ಕತ್ ಅವರ ವರ್ಗಾವಣೆಗಾಗಿಯೂ ಮಾಧವ ನಾಯಕ ಅವರು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರ ಮೊರೆ ಹೋಗಿದ್ದಾರೆ. ಆರ್ಟಿಓ ಅಧಿಕಾರಿ ಜಾನ್ ಮಿಸ್ಕತ್ ಅವರ ಭ್ರಷ್ಟಾಚಾರ ಹಾಗೂ ಕಿಮ್ಸ್ ನಿರ್ದೇಶಕಿ ಡಾ ಪೂರ್ಣಿಮಾ ಅವರ ಕರ್ತವ್ಯಲೋಪ, ಬೇಜವಬ್ದಾರಿ ವರ್ತನೆಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ.
`ಕಾರವಾರದ ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಕೇರಿಯಲ್ಲಿ ಸಣ್ಣ ನೀರಾವರಿ ಇಲಾಕೆ 1.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಸಲು ನಿರ್ಧರಿಸಿದ್ದು, ಕಾಮಗಾರಿ ಪೂರ್ವದಲ್ಲಿಯೇ ಗುತ್ತಿಗೆದಾರರಿಗೆ 93 ಲಕ್ಷ ರೂ ಪಾವತಿಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಐದು ತಿಂಗಳಾದರೂ ತನಿಖೆ ನಡೆದಿಲ್ಲ. ಅವರ ಸೌಮ್ಯ ಸ್ವಭಾವ ಹಾಗೂ ಒಳ್ಳೆಯತನವೇ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಅನಗತ್ಯ ವಿಳಂಬ ನೀತಿಯಿಂದ ಜನ ಬೇಸತ್ತಿದ್ದಾರೆ. ಆರ್ ವಿ ದೇಶಪಾಂಡೆ ಅವರು ಉಸ್ತುವಾರಿ ಸಚಿವರಾಗಿದ್ದಾಗ ಇದ್ದ ಹಿಡಿತ ಈಗಿಲ್ಲ. ಹೀಗಾಗಿ ಕೆಲಸ ಮಾಡದ ಅಧಿಕಾರಿಗಳ ವರ್ಗಾವಣೆ ಅನಿವಾರ್ಯ’ ಎಂದು ಮಾಧವ ನಾಯಕ ಅವರು ಪ್ರತಿಪಾದಿಸಿದ್ದಾರೆ.
`ಡಾ ಪೂರ್ಣಿಮಾ ಅವರು ಕಿಮ್ಸ್ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ನಂತರ ಅಲ್ಲಿನ ಆಡಳಿತ ವ್ಯವಸ್ಥೆ ಹದಗೆಟ್ಟಿದೆ. ಆಡಳಿತ ಅನುಭವ ಕೊರತೆಯಿಂದ ಕಾಲೇಜು ಬಡವಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ನಿರ್ದೇಶಕರಿಗೆ ಹಿಡಿತವಿಲ್ಲ. ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುವ ವೈದ್ಯರು ಸಹ ನಿರ್ದೇಶಕರ ಮಾತು ಕೇಳುತ್ತಿಲ್ಲ. ಹೀಗಾಗಿ ಅನೇಕ ಸಾವು-ನೋವು ಸಂಭವಿಸುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿಗಲೇ ತಡರಾತ್ರಿ ಗೋವಾಗೆ ಹೋಗಿ ಬರುವಾಗ ಅಪಘಾತದಲ್ಲಿ ಸಾವನಪ್ಪಿದ್ದಾರೆ’ ಎನ್ನುವುದರ ಬಗ್ಗೆ ಮಾಧವ ನಾಯಕ ಅವರು ವಿವರಿಸಿದ್ದಾರೆ.
ಇನ್ನೂ ಕಾರವಾರದ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿರುವ ಜಾನ್ ಮಿಸ್ಕತ್ ಅವರು ಅತ್ಯಂತ ಬೇಜವಬ್ದಾರಿಯಿಂದ ವರ್ತಿಸುತ್ತಾರೆ. ಕಚೇರಿಗೆ ಸರಿಯಾಗಿ ಬರುವುದಿಲ್ಲ. ಬಂದರೂ ಕಾಸು ಕೊಡದೇ ಕೆಲಸ ಮಾಡುವುದಿಲ್ಲ. ಕಚೇರಿಯಲ್ಲಿದ್ದ ಸಾರ್ವಜನಿಕ ದಾಖಲೆಗಳು ಕಣ್ಮರೆಯಾಗಿದ್ದರೂ ಕ್ರಮ ಜರುಗಿಸಿಲ್ಲ’ ಎಂದವರು ಆಕ್ರೋಶವ್ಯಕ್ತಪಡಿಸಿದರು. ಈ ಎಲ್ಲಾ ಹಿನ್ನಲೆ ಈ ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.