ಕಾರವಾರದ ಆರ್ ಟಿ ಓ ಕಚೇರಿಯಲ್ಲಿನ ಕಡತಗಳು ಕಾಣೆಯಾಗಿವೆ. ಮುಖ್ಯ ದಾಖಲೆಗಳು ಅಲ್ಲಿನ ಅಧಿಕಾರಿಗಳ ಕೈಗೆ ಸಿಗುತ್ತಿಲ್ಲ. ಇದರಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯೇ ಕಡತ ಕಳ್ಳತನವಾದ ಅನುಮಾನ ಶುರುವಾಗಿದೆ. ಕಡತ ಕಾಣೆಯಾಗಿದ್ದರೂ ಅಧಿಕಾರಿಗಳು ದೂರು ದಾಖಲಿಸದೇ ಇರುವುದು ಇನ್ನಷ್ಟು ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಪ್ರಶ್ನಿಸಿದರೂ ಅಧಿಕಾರಿಗಳು ಸರಿಯಾಗಿ ಮಾತನಾಡುತ್ತಿಲ್ಲ. ಸಮಸ್ಯೆಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ.
ಕಡತ ಕಣ್ಮರೆಯ ವಿಷಯ ಅರಿತು ಶುಕ್ರವಾರ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಸ್ಥಳ ಭೇಟಿ ಮಾಡಿದರು. ಮಾಧವ ನಾಯಕ ಅವರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬಾದರು. ವಿವಿಧ ಸೇವೆಗಳಿಗೆ ಅರ್ಜಿ ಸಲ್ಲಿಸಿದವರ ಅರ್ಜಿ ಜೊತೆ ಅವರ ವೈಯಕ್ತಿಕ ಕಡತಗಳು ಕಾಣೆಯಾಗಿದ್ದರಿಂದ ಅದರ ದುರುಪಯೋಗದ ಅನುಮಾನವೂ ಜನರನ್ನು ಕಾಡುತ್ತಿದೆ. `ಸಾರಿಗೆ ಇಲಾಖೆ ಕಚೇರಿಯಲ್ಲಿ ದುಡ್ಡಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ ಎಂಬ ಆರೋಪವಿದೆ. ಈ ನಡುವೆ ಕಡತ ಕಾಣೆಯಾಗಿರುವುದು ಅಧಿಕಾರಿಗಳ ಬೇಜವಬ್ದಾರಿಗೆ ಉದಾಹರಣೆ’ ಎಂದು ಮಾಧವ ನಾಯಕ ಅವರು ಗುಡುಗಿದರು. `ಕಡತ ಕಾಣೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ. ಭಾನುವಾರ ವಿವಿಧ ಅಧಿಕಾರಿಗಳನ್ನು ಕರೆಯಿಸಿ ಕಡತಗಳ ಹುಡುಕಾಟ ನಡೆಸಲಾಗುತ್ತದೆ. ಅದಾಗಿಯೂ ಸಿಗದಿದ್ದರೆ ಪೊಲೀಸ್ ದೂರು ನೀಡುವೆ’ ಎಂದು ಆರ್ ಟಿ ಓ ಜಾನ್ ಮಿಸ್ಕಿನ್ ಪ್ರತಿಕ್ರಿಯಿಸಿದರು.
ಕಡತ ಕಳ್ಳತನದ ಬಗ್ಗೆ ಮಾಧವ ನಾಯಕ ಪ್ರಶ್ನಿಸಿದ್ದೇನು? ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..