ಮೂರು ಲಕ್ಷ ಕರಪತ್ರ ಹಿಡಿದು 132 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾನೂನು ಕುರಿತು ಸಭೆ ನಡೆಸುವ ಅರಣ್ಯ ಹಕ್ಕು ಹೋರಾಟದ ಇನ್ನೊಂದು ಆಯಾಮ ಶುರುವಾಗಿದೆ. ಭಟ್ಕಳ ಹಾಗೂ ಹೊನ್ನಾವರದಲ್ಲಿ ಈ ದಿನ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಜಾಥಾ ನಡೆಸಿದ್ದಾರೆ.
`ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಸಾಗುವಳಿ ಹಕ್ಕಿಗೆ ಮೂರು ತಲೆಮಾರಿನ ನಿರ್ದಿಷ್ಟ ವಯಕ್ತಿಕ ದಾಖಲೆಗೆ ಒತ್ತಾಯಿಸತಕ್ಕದ್ದಲ್ಲ. ಇಂತಹ ಪ್ರಕ್ರಿಯೆ ಕಾನೂನಿಗೆ ವ್ಯತಿರಿಕ್ತವಾಗಿದೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಪುನರುಚ್ಚರಿಸಿದ್ದಾರೆ. ವಿವಿಧ ಹಂತದ ಅಧಿಕಾರಿಗಳಿಗೆ ಸಹ ಅವರು ಕರ ಪತ್ರ ವಿತರಿಸಿ ಕಾನೂನಿನ ಬಗ್ಗೆ ಮಾಹಿತಿ ನೀಡಿದ್ದಾರೆ.
`ಮಂಜೂರಿ ಪ್ರಕ್ರಿಯೆಯಲ್ಲಿ ದಾಖಲೆಗಳಿಗೆ ಆಗ್ರಹಿಸಿ ಅರ್ಜಿಗಳನ್ನು ತಿರಸ್ಕರಿಸುವುದು ಸಮಂಜಸವಲ್ಲ. ಮೂರು ತಲೆಮಾರಿನ ಸಾಗುವಳಿ ಕ್ಷೇತ್ರದಲ್ಲಿನ ಜನವಸತಿ ಪ್ರದೇಶವೆಂದು ಪುಷ್ಠೀಕರಿಸುವುದು ಅವಶ್ಯ’ ಎಂದು ಕೇಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಆದೇಶದಲ್ಲಿ ತಿಳಿಸಿರುವ ಬಗ್ಗೆ ಅವರು ವಿವರಿಸಿದ್ದಾರೆ. `ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿ ಪರಿಶೀಲಿಸಲಾಗಿರುವುದರಿಂದ ರಾಜ್ಯದಲ್ಲಿ ಶೇ.88.90 ಅರ್ಜಿಗಳು ಹಾಗೂ ಜಿಲ್ಲೆಯಲ್ಲಿ ಶೇ 83.50 ಅರ್ಜಿ ತಿರಸ್ಕರಿಸ್ಪಟ್ಟಿದೆ’ ಎಂಬ ವಿಷಯವನ್ನು ಅವರು ತಿಳಿಸಿದ್ದಾರೆ.
ಸಂಘಟನೆಯ ಜಿಲ್ಲಾ ಸಂಚಾಲಕ ಪಾಂಡುರAಗ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನರ್ವ ಸಂಚಾಯಕ ದೇವರಾಜ ಗೊಂಡ ವಂದಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ, ರಪೀಕ್ , ನವೀನ್ ಜೈನ್, ಈಶ್ವರ ನಾಯ್ಕ ಹಾಡವಳ್ಳಿ, ಚಂದ್ರ ನಾಯ್ಕ ಬೈರೋಳೆ,ರತ್ನ ನಾಯ್ಕ ರಾಘವೇಂದ್ರ ಮರಾಠಿ, ವಿಮಲಾ ಮೋಗೇರ, ಕವಿತಾ ಮಂಜುನಾಥ ಗೋಂಡ, ನಾಗಮ್ಮ ಮೋಗೇರ, ದತ್ತ ನಾಯ್ಕ ಹಸವಳ್ಳಿ, ಸಬೀರ್, ಮೋಯೈದ್ದೀನ್, ನತ್ತಾರ, ಜಮಾವೀರ್ ಜಾಬೀರ್ ಸಭೆಯಲ್ಲಿದ್ದರು.