ರಾಜಕಾರಣಿಗಳ ದೊಡ್ಡ ದೊಡ್ಡ ಅರಣ್ಯ ಅತಿಕ್ರಮಣದ ಬಗ್ಗೆ ಅರಿವಿದ್ದರೂ ಮೌನವಾಗಿರುವ ಅರಣ್ಯ ಇಲಾಖೆ ಜೀವನೋಪಾಯಕ್ಕಾಗಿ ಅಡಿಕೆ ಬೆಳೆದವರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಫಸಲು ಕೊಡಲು ಸಿದ್ಧವಾಗಿದ್ದ ಅಡಿಕೆ ಮರವನ್ನು ಅರಣ್ಯಾಧಿಕಾರಿಗಳು ಕಡಿದು ನಾಶ ಮಾಡಿದ್ದಾರೆ.
ಸಿದ್ದಾಪುರದ ಬಿಳಗಿ ಬಳಿ 35ಕ್ಕೂ ಅಧಿಕ ಅರಣ್ಯ ಸಿಬ್ಬಂದಿ ಅಡಿಕೆ ತೋಟಕ್ಕೆ ನುಗ್ಗಿದ್ದಾರೆ. ಗಣೇಶ ವೆಂಕಟ್ರಮಣ ಹೆಗಡೆ ಗೊಳಿಕೈ ಅವರು ಮಗುವಿನಂತೆ ಬೆಳೆಸಿದ್ದ ಅಡಿಕೆ ಮರಗಳಿಗೆ ಅರಣ್ಯ ಸಿಬ್ಬಂದಿ ಕೊಡಲಿ ಏಟು ಕೊಟ್ಟಿದ್ದಾರೆ. ಸುಮಾರು ಒಂದು ಎಕರೆ ಪ್ರದೇಶದ ಅಡಿಕೆ ಮರಗಳನ್ನು ಅರಣ್ಯ ಇಲಾಖೆಯವರು ಕಡಿದಿದ್ದಾರೆ. ಗಣೇಶ ಹೆಗಡೆ ಅವರು 1998ರಿಂದಲೂ ಅದೇ ಜಾಗದಲ್ಲಿ ತೋಟ ಮಾಡಿಕೊಂಡಿದ್ದರು. 35 ವರ್ಷಗಳ ಹಿಂದಿನ ಮರವನ್ನು ಬಿಡದೇ ಸಿಬ್ಬಂದಿ ನಾಶ ಮಾಡಿದರು. ಕ್ಯಾದಗಿ ಅರಣ್ಯ ವಲಯದಲ್ಲಿ ಅಡಿಕೆ ಮರ ಇರುವುದಕ್ಕಾಗಿ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದು, ಫಲ ನೀಡುತ್ತಿದ್ದ ಮರಗಳು ನೆಲಕ್ಕೆ ಉರುಳಿದವು.
`ಅಜ್ಜನ ಕಾಲದಿಂಲೂ ಆ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಬರಲಾಗುತ್ತಿದೆ. 98ರ ಅವಧಿಯಲ್ಲಿ ಅಡಿಕೆ ನಾಟಿ ಮಾಡಿದ್ದು, ಅದನ್ನು ನಾಶ ಮಾಡಿದ್ದಾರೆ’ ಎಂದು ಕುಟುಂಬದವರು ಅಳಲು ತೋಡಿಕೊಂಡರು. `ಗಿಡ ನೆಡಬೇಕಾದ ಅರಣ್ಯ ಇಲಾಖೆಯವರು ಆ ಜಾಗಕ್ಕೆ ಬೇಲಿ ಹಾಕಬಹುದಿತ್ತು. ಆದರೆ, ಗಿಡಗಳನ್ನು ನಾಶ ಮಾಡಿದ್ದು ಸರಿ ಅಲ್ಲ’ ಎಂದು ಜನ ಆಕ್ರೋಶವ್ಯಕ್ತಪಡಿಸಿದರು.
ಹೋರಾಟಗಾರರ ಆಕ್ರೋಶ:
ಅನಾಧಿಕಾಲದಿಂದಲೂ ಸಾಗುವಳಿ ಮಾಡುತ್ತಿದ್ದ ಕ್ಷೇತ್ರದಲ್ಲಿನ ಅಡಿಕೆ ಗಿಡ ಕಡಿದ ವಿಷಯ ಅರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಆತಂಕವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ರೈತರ ಅಳಲು ಆಲಿಸಿದ ಅವರು `ಗಿಡ ಕಟಾವು ಪ್ರಕ್ರಿಯೆಯಿಂದ ಕಾನೂನು ಉಲ್ಲಂಘನೆ ಆಗಿದೆ’ ಎಂದಿದ್ದಾರೆ. `1998ರಲ್ಲಿ ಅರಣ್ಯವಾಸಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಜಿಪಿಎಸ್ ಸರ್ವೆ ಮೂಲಕ ಅತಿಕ್ರಮಣ ದೃಢಪಡಿಸಿಕೊಂಡಿದ್ದು, ಹೆಗಡೆ ಅವರು ಅತಿಕ್ರಮಣಕ್ಕೆ ಅರ್ಜಿ ಸಲ್ಲಿಸಿದ್ದು ದಾಖಲೆಯಿದೆ. ಹೀಗಿರುವಾಗ ಜಂಟಿ ಸರ್ವೇ ನಡೆಸದೇ ಒಕ್ಕಲೆಬ್ಬಿಸುವ ವಿಧಾನ ಅನುಸರಿಸಿದ್ದು ಸರಿಯಲ್ಲ’ ಎಂದಿದ್ದಾರೆ.
ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಚಂದ್ರ ಶಾನಭಾಗ ಬಂಡಲ್, ರಾಘು ಕವಂಚೂರು, ದಿನೇಶ ನಾಯ್ಕ ಬೇಡ್ಕಣಿ, ಬಾಬು ಮರಾಠಿ, ಯಶವಂತ ನಾಯ್ಕ ಬಂಡಲ್, ಜಗದೀಶ ಶಿರಳಗಿ, ಸಂಕೇತ ನಾಯ್ಕ, ತಿಮ್ಮಪ್ಪ ನಾಯ್ಕ, ಸುಧಾಕರ್ ಮಡಿವಾಳ, ಶೇಖರ್ ನಾಯ್ಕ, ವಾಸು ನಾಯ್ಕ ಹಂಜಗಿ, ಲಕ್ಷಣ ನಾಯ್ಕ ಇತರರು ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪವ್ಯಕ್ತಪಡಿಸಿದ್ದಾರೆ.