ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಅನೇಕ ನಾಯಕರ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘ ಗರಂ ಆಗಿದೆ. ಜೊತೆಗೆ ಅರಣ್ಯ ಹಕ್ಕು ಹೆಸರಿನಲ್ಲಿ ಜನರ ದಾರಿ ತಪ್ಪಿಸುವವರ ಬಂಡವಾಳ ಬಯಲು ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.
`ಅನೇಕ ನಾಯಕರು ಅಧಿಕಾರದಲ್ಲಿರುವಾಗ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಕಂದಾಯ ಮಂತ್ರಿ ಆಗಿದ್ದಾಗಲೂ ಹಕ್ಕು ಪತ್ರ ದೊರೆಯಲಿಲ್ಲ. ಆರ್ ವಿ ದೇಶಪಾಂಡೆ ಅವರು ಮಂತ್ರಿಯಾದಾಗಲೂ ಹಕ್ಕು ಪತ್ರ ಸಿಕ್ಕಿಲ್ಲ. ಈಗ ಎಚ್ ಕೆ ಪಾಟೀಲ್ ಅವರು ಕಾನೂನು ಮಂತ್ರಿಯಾದರೂ ಸಮಸ್ಯೆ ಆಲಿಸುತ್ತಿಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶಾಂತಾರಾಮ ನಾಯಕ ಅವರು ಅಸಮಧಾನವ್ಯಕ್ತಪಡಿಸಿದ್ದಾರೆ.
ಅಂಕೋಲಾದ ಬಾಳೆಗುಳಿಯಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಮಾತನಾಡಿದ ಅವರು `ಕಾನೂನು ಜಾರಿಯಾಗಿ 20 ವರ್ಷ ಆದರೂ ರೈತರಿಗೆ ಭೂಮಿ ಸಿಕ್ಕಿಲ್ಲ. ಮೂರು ತಲೆಮಾರಿನ ದಾಖಲೆ ಇಲ್ಲ ಎಂದು ಹೇಳಿ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. ಕೆಲವರು ನಾಯಕರ ಹೆಸರು ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ. ಅರಣ್ಯ ಸಾಗುವಳಿದಾರರಿಗೆ ಕಾನೂನು ತಿಳುವಳಿಕೆ ಎಂದು ಕೆಲವರು ನೈಜ ಪ್ರಶ್ನೆಯನ್ನು ಮರೆ ಮಾಚುತ್ತಿದ್ದಾರೆ. ತಮ್ಮ ರಾಜಕೀಯ ಹಾಗೂ ಸ್ವಾರ್ಥಕ್ಕಾಗಿ ಮುಗ್ದ ಜನರ ದಾರಿ ತಪ್ಪಿಸುವವರ ನೈಜ ಬಣ್ಣ ಬಯಲು ಮಾಡಲು ರೈತ ಸಂಘ ಹಿಂಜರಿಯುವುದಿಲ್ಲ’ ಎಂದು ಶಾಂತಾರಾಮ ನಾಯಕ ಅವರು ಹೇಳಿದ್ದಾರೆ.
`ಚಳಿಗಾಲದ ಅಧಿವೇಶನದಲ್ಲಿ ಅರಣ್ಯ ಹಕ್ಕು ಸಮಸ್ಯೆ ಬಗೆಹರಿಯಬೇಕು. ಅರಣ್ಯ ಭೂಮಿ ಹಕ್ಕು ಕೊಡಲು ಮೂರು ತಲೆಮಾರಿನ ದಾಖಲೆ ಕೇಳುವುದರಿಂದ ಸಮಸ್ಯೆ ಆಗಿದ್ದು, ಅದಕ್ಕೆ ತಿದ್ದುಪಡಿ ಮಾಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರೈತರ ಪರ ಧ್ವನಿ ಎತ್ತಬೇಕಿದೆ’ ಎಂದವರು ಒತ್ತಾಯಿಸಿದ್ದಾರೆ. `ಮುಂದಿನ ಮೂರು ತಿಂಗಳಿನಲ್ಲಿ ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ರೈತ ಸಮ್ಮೇಳನ ನಡೆಯಲಿದೆ’ ಎಂದವರು ಹೇಳಿದ್ದಾರೆ. ಸಂಘಟನೆ ತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ವೆಂಕಟರಮಣ ಗೌಡ ಹಾಗೂ ಮಾದೇವ ಗೌಡ ಕಾರ್ಯಕ್ರಮ ನಿರ್ವಹಿಸಿದರು.