ಬೆಂಗಳೂರು-ಗೋಕರ್ಣ ಮಾರ್ಗದ ಸೀಬರ್ಡ ಬಸ್ಸಿನಲ್ಲಿದ್ದ ಕುಮಟಾದ ವಿಜಯ ಭಂಡಾರಿ ಅವರ ಫೋನು ಸ್ವಿಚ್ ಆಫ್ ಆಗಿದೆ. ಬಸ್ಸು ಅಪಘಾತದ ನಂತರ ವಿಜಯ ಭಂಡಾರಿ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ, ಇದೀಗ ಅವರು ಸುರಕ್ಷಿತವಾಗಿ ಊರು ತಲುಪಿದ್ದಾರೆ.
ಬುಧವಾರ ರಾತ್ರಿ ಬೆಂಗಳೂರಿನಿoದ ಹೊರಟ ಬಸ್ಸು ಚಿತ್ರದುರ್ಗದಲ್ಲಿ ಅಪಘಾತಕ್ಕೀಡಾಗಿದ್ದು, ಈ ಬಸ್ಸಿನಲ್ಲಿ ಕುಮಟಾದ ವಿಜಯ ಭಂಡಾರಿ ಅವರು ಪ್ರಯಾಣಿಸುತ್ತಿದ್ದರು. ವಿಜಯ ಭಂಡಾರಿ ಅವರು ಮೆಜೆಸ್ಟಿಕ್ ನ ಆನಂದರಾವ್ ಸರ್ಕಲ್ ಬಳಿಯ ಸೀಬರ್ಡ ಕಚೇರಿಯಿಂದಲೇ ಬಸ್ಸು ಹತ್ತಿದ್ದರು. ಕುಮಟಾಗೆ ಬರುವುದಕ್ಕಾಗಿ ಅವರು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಅವರಿದ್ದ ಬಸ್ಸಿಗೆ ಗುರುವಾರ ನಸುಕಿನಲ್ಲಿ ಟ್ಯಾಂಕರ್ ಗುದ್ದಿದೆ. ಪರಿಣಾಮ ಬಸ್ಸಿಗೆ ಬೆಂಕಿ ಬಿದ್ದಿದ್ದು, ಅದಾದ ನಂತರ ವಿಜಯ ಭಂಡಾರಿ ಅವರು ಕಣ್ಮರೆಯಾಗಿದ್ದರು.
ಬಸ್ಸು ದುರಂತದಲ್ಲಿ ಅನೇಕರ ಮೊಬೈಲ್ ಸುಟ್ಟಿದೆ. ಹೀಗಾಗಿ ವಿಜಯ ಭಂಡಾರಿ ಅವರ ಮೊಬೈಲ್ ಸಹ ಸುಟ್ಟಿರುವ ಅನುಮಾನಗಳಿವೆ. ವಿಜಯ ಭಂಡಾರಿ ಅವರ ಮೊಬೈಲ್’ಗೆ ಫೋನ್ ಮಾಡಿದರೆ `ನೀವು ಸಂಪರ್ಕಿಸಲು ಬಯಸುತ್ತಿರುವ ವ್ಯಕ್ತಿಯೂ ಸಿಗುತ್ತಿಲ್ಲ’ ಎಂದು ತೆಲಗು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮಾಹಿತಿ ಬರುತ್ತಿದೆ. ಪದೇ ಪದೇ ಪ್ರಯತ್ನಿಸಿದಾಗ `ಸ್ವಿಚ್ ಆಫ್’ ಸಂದೇಶ ಬರುತ್ತಿದೆ. ವಿಜಯ ಭಂಡಾರಿ ಅವರು ತಮ್ಮದೇ ಮೊಬೈಲ್ ಸಂಖ್ಯೆ ನೀಡಿ ಆನೈನ್ ಮೂಲಕ ಬಸ್ ಟಿಕೆಟ್ ಬುಕ್ ಮಾಡಿದ್ದರು.
ವಿಜಯ ಭಂಡಾರಿ ಅವರು ಬಸ್ಸಿನ ಕಿಟಕಿಯ ಗಾಜು ಒಡೆದು ಜೀವ ಉಳಿಸಿಕೊಂಡಿದ್ದಾರೆ. ನಂತರ ಖಾಸಗಿ ವಾಹನದ ಮೂಲಕ ಅವರು ಊರು ತಲುಪಿದ್ದಾರೆ. ವಿಜಯ ಭಂಡಾರಿ ಅವರ ಕೈ ಸುಟ್ಟಿದ್ದು, ಚಿಕಿತ್ಸೆ ಪಡೆದಿದ್ದಾರೆ.