ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶಿರಸಿಯ ಸ್ಕೋಡ್ವೆಸ್ ಸಂಸ್ಥೆ ಬಾಲ ಆರೋಗ್ಯ ಮೇಳ ನಡೆಸಿದೆ. ಅದರ ಅಂಗವಾಗಿ ಮಕ್ಕಳಿಗೆ ಆಟ, ಓಟ,ದ ಸ್ಪರ್ಧೆಯನ್ನು ಮಾಡಿದೆ.
ಶಿರಸಿ ನಗರದ ಎಮ್ ಇ ಎಸ್ ಪ್ರೌಢಶಾಲೆಯಲ್ಲಿ ಸ್ಕೊಡ್ವೆಸ್ ಸಂಸ್ಥೆ ಹಾಗೂ ಗುಜರಾತ್ ದೇಸಾಯಿ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಬಾಲ ಆರೋಗ್ಯ ಮೇಳವನ್ನು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಿ ಚಿ ಬೋರಲಿಂಗಯ್ಯ ಅವರು ಉದ್ಘಾಟಿಸಿದ್ದಾರೆ. `ಆರೋಗ್ಯವಂತ ಮಕ್ಕಳೇ ಉತ್ತಮ ಸಮಾಜದ ಆಸ್ತಿ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ಅತೀ ಹೆಚ್ಚು ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಸೃಜನಶೀಲ ವ್ಯಕ್ತಿತ್ವ ಕ್ಷೀಣಿಸುತ್ತಿದೆ. ಮಕ್ಕಳು ಗಂಭೀರವಾದ ಮನೋದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಒತ್ತಡವಿಲ್ಲದ ಶಿಕ್ಷಣ ಮಾನಸಿಕ, ದೈಹಿಕ ಸದೃಢತೆಗೆ ಅಗತ್ಯವಿರುವ ಕ್ರೀಡೆ ಹಾಗೂ ಸಕಾಲದಲ್ಲಿ ಅಗತ್ಯವಿರುವ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ’ ಎಂದವರು ಹೇಳಿದ್ದಾರೆ.
ಎಂ ಇ ಎಸ್ ಶಾಲೆಯ ಮುಖ್ಯೋಪಾಧ್ಯಾಪಕಿ ಜ್ಯೋತಿ ಪೆಡ್ನೆಕರ್, ಸ್ಕೊಡ್ವೇಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ನಾರಾಯಣ ಹೆಗಡೆ ಹಾಗೂ ವೈದ್ಯಾಧಿಕಾರಿ ಡಾ ರಿತಿಕ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಸ್ಕೊಡ್ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ ಅವರು ಅಧ್ಯಕ್ಷತೆವಹಿಸಿದ್ದು, ಮಕ್ಕಳ ಜೊತೆ ಅವರು ಬೆರೆತರು.
ಆರೋಗ್ಯ ಮೇಳದಲ್ಲಿ ಎಂ ಇ ಎಸ್ ಶಾಲೆಯ ವಿದ್ಯಾರ್ಥಿಗಳ ಜೊತೆ ತೇಲಂಗ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಾಸಕರ ಮಾದರಿ ಶಾಲೆ ನಂ 3 ಶಾಲೆಯ ವಿದ್ಯಾರ್ಥಿಗಳು ಸೇರಿ 700ಕ್ಕೂ ಅಧಿಕ ಜನ ಭಾಗವಹಿಸಿದ್ದರು. ಆರೋಗ್ಯ ಮೇಳದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ವಿವಿಧ ಕ್ರೀಡಾ ಸ್ಫರ್ಧೆಗಳು ಮನಸೆಳೆದವು. ಶಾಲಾ ವಿದ್ಯಾರ್ಥಿಗಳಿಗೆ ನುರಿತ ವೈದ್ಯರಿಂದ ಹಿಮೋಗ್ಲೋಬಿನ್ ಪರೀಕ್ಷೆ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ನಡೆಯಿತು.