ಭಾರತೀಯ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಸಿಮ್ರಾನ್ ತಂಬೋಲಿ ಅವರಿಗೆ ನ್ಯಾಯಾಲಯ 2 ಸಾವಿರ ರೂ ದಂಡ ವಿಧಿಸಿದೆ.
2023ರ ಸೆಪ್ಟೆಂಬರ್ 28ರಂದು ಎಲ್ಲಡೆ ಈದ್ ಮಿಲಾದ್ ಆಚರಣೆ ನಡೆಯುತ್ತಿತ್ತು. ಯಲ್ಲಾಪುರದಲ್ಲಿಯೂ ಈದ್ ಮಿಲಾದ್ ಹಬ್ಬದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಸಾವಿರ ಸಂಖ್ಯೆಯಲ್ಲಿ ಜನ ಸೇರಿದ್ದ ಈ ಮೆರವಣಿಗೆಯಲ್ಲಿ ಕೇಸರಿ, ಬಿಳಿ, ಹಸಿರಿನ ಧ್ವಜ ಕಾಣಿಸಿತು. ಆದರೆ, ಆ ಧ್ವಜದಲ್ಲಿ ಅಶೋಕ ಚಕ್ರದ ಬದಲು ಅರ್ದ ಚಂದ್ರಾಕೃತಿ ಹಾಗೂ ಅದರೊಳಗೆ 3 ನಕ್ಷತ್ರಗಳ ಚಿತ್ರವನ್ನು ಬಿಡಿಸಲಾಗಿತ್ತು.
ಯಲ್ಲಾಪುರದ ಶಾರದಾಗಲ್ಲಿಯಸಿಮ್ರಾನ್ ತಂಬೋಲಿ (30 ವರ್ಷ) ಅವರು ಆ ಧ್ವಜ ಹಿಡಿದಿದ್ದರು. ಆ ಧ್ವಜವನ್ನು ಎತ್ತರಕ್ಕೆ ಹಿಡಿದು ಹಾರಿಸಿದ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದರು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿದರು. ಆಗಿನ ಪಿಐ ರಂಗನಾಥ ನೀಲಮ್ಮನವರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯವೂ ಸಿಮ್ರಾನ್ ತಂಬೋಲಿ ಅವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದನ್ನು ಖಚಿತಪಡಿಸಿಕೊಂಡಿತು.
ಸರ್ಕಾರಿ ಅಭಿಯೋಜಕಿ ಝೀನತಭಾನು ಇಬ್ರಾಹಿಂಸಾಬ್ ಅವರು ರಾಷ್ಟ್ರಧ್ವಜಕ್ಕೆ ಆದ ಅಪಮಾನದ ಬಗ್ಗೆ ನ್ಯಾಯಾಧೀಶರ ಗಮನಸೆಳೆದರು. ಮಾಡಿದ ತಪ್ಪಿಗೆ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಅವರು ವಾದಿಸಿದರು. ಅವರ ವಾದ ಮನ್ನಿಸಿದ ನ್ಯಾಯಾಧೀಶೆ ಅನಿತಾಕುಮಾರಿ ಎಸ್ ಅವರು ಆರೋಪಿ ಸಿಮ್ರಾನ್ ತಂಬೋಲಿ ಅವರಿಗೆ 2 ಸಾವಿರ ರೂ ದಂಡ ವಿಧಿಸಿದರು.