ಕಾರವಾರ ಕಾರಾಗೃಹದಲ್ಲಿ ಮತ್ತೆ ಮೊಬೈಲ್ ಸಿಕ್ಕಿದೆ. ಜೊತೆಗೆ ಜಿಯೋ ಸಿಮ್ ಅಲ್ಲಿ ಸದ್ದು ಮಾಡಿದೆ!
ಡಿಸೆಂಬರ್ 14ರ ಸಂಜೆ ಜೈಲಿನ ಅಧೀಕ್ಷಕ ಮಲ್ಲಿಕಾರ್ಜುನ ಕೊಣ್ಣೂರು ಅವರು ದಿಢೀರ್ ತಪಾಸಣೆ ನಡೆಸಿದಾಗ ಬಗೆ ಬಗೆಯ ಏಳು ಮೊಬೈಲ್ ಜೊತೆ ಸೊಪ್ಪಿನ ಪುಡಿಗಳು ಪತ್ತೆಯಾಗಿದೆ. ಅಲ್ಲಿದ್ದ ಸಿಮ್ ಕಾರ್ಡನ್ನು ಜೈಲರ್ ವಶಕ್ಕೆಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕೆಲ ದಿನದ ಹಿಂದೆ ಕಾರಾಗೃಹದ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆ ವೇಳೆ ಅಲ್ಲಿ ನಿಷೇಧಿತ ಮೊಬೈಲ್ ಹಾಗೂ ಗಾಂಜಾ ಸಿಕ್ಕಿದ್ದವು. ಅದಾದ ನಂತರ ಕಾರಾಗೃಹದಲ್ಲಿ ಕಟ್ಟುನಿಟ್ಟಿನ ನಿಯಮ ಜಾರಿಯಾಗಿದ್ದು, ಮಾದಕ ವ್ಯಸನ ಕೊಡುವಂತೆ ಜೈಲಿನಲ್ಲಿದ್ದವರು ಗಲಾಟೆ ಮಾಡಿದ್ದರು. ಜೈಲು ಸಿಬ್ಬಂದಿ ಮೇಲೆಯೂ ಕೈದಿಗಳು ಹಲ್ಲೆ ನಡೆಸಿದ್ದರು. ಟಿವಿ, ಕಂಪ್ಯುಟರ್ ಸೇರಿ ಜೈಲಿನ ಗಾಜುಗಳನ್ನು ಸಹ ಕೈದಿಗಳು ಒಡೆದಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಮತ್ತೆ ಅಧಿಕಾರಿಗಳು ಜೈಲಿನ ತಪಾಸಣೆ ಮಾಡಿದ್ದಾರೆ. ಆಗ, ಅಲ್ಲಿ ಇನ್ನಷ್ಟು ನಿಷೇಧಿತ ವಸ್ತುಗಳು ಕಾಣಿಸಿವೆ. ಮಂಗಳೂರು ಮೂಲದ ಕೈದಿಗಳ ಸೆಲ್ಲಿನೊಳಗೆ ನಿಷೇಧಿತ ವಸ್ತು ಸಿಕ್ಕಿದ ಕಾರಣ ಅವರನ್ನು ಬಳ್ಳಾರಿ ಹಾಗೂ ಬೆಳಗಾವಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಅವರು ಹೋದ ನಂತರವೂ ಇನ್ನಷ್ಟು ಮೊಬೈಲ್ ಹಾಗೂ ಸೊಪ್ಪಿನಪುಡಿ ಕಾಣಿಸಿದ್ದು, ನಿಷೇಧಿತ ವಸ್ತುಗಳನ್ನಿರಿಸಿಕೊಂಡವರ ವಿರುದ್ಧ ಕ್ರಮಕ್ಕಾಗಿ ಜೈಲರ್ ಪೊಲೀಸ್ ದೂರು ನೀಡಿದ್ದಾರೆ.