ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಕಿರಣ ಸೋರಿಕೆಯಾದ ಬಗ್ಗೆ ಜಿಲ್ಲಾಡಳಿತಕ್ಕೆ ಇಮೇಲ್ ಹಾಗೂ ಫಾಕ್ಸ್ ಮೂಲಕ ಸಂದೇಶ ಬಂದಿದೆ. ತರಾತುರಿಯಲ್ಲಿ ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, `ಅಣು ವಿಕಿರಣ ಸೋರಿಕೆಯಾದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆಯೋಜಿಸಿದ್ದ ಅಣಕು ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಸಂಜೆ ವೇಳೆಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ತಿಳಿಸಿದ್ದಾರೆ.
ಅಣು ವಿಕಿರಣ ಸೋರಿಕೆ ಆದಲ್ಲಿ ಕೈಗೊಳ್ಳಬೇಕಾದ ಮುನ್ನಚ್ಚರಿಕೆ ಬಗ್ಗೆ ಪ್ರತಿ ವರ್ಷವೂ ಜನರಲ್ಲಿ ಅರಿವು ಮೂಡಿಸಲು ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಅದರ ಪ್ರಕಾರ, ಕೈಗಾ ಅಣು ವಿದ್ಯುತ್ ಘಟಕದಲ್ಲಿ ವಿಕಿರಣ ಸೋರಿಕೆ ನಡೆದಾಗ ಅನುಸರಿಸಬೇಕಾದ ವಿಧಾನಗಳ ಬಗ್ಗೆ ಗುರುವಾರ ತಾಲೀಮು ನಡೆಸಲಾಗಿದೆ. ಪೂರ್ವ ಸೂಚನೆಯ ಪ್ರಕಾರ ಕೈಗಾ ಸೈಟ್ ಡೈರೆಕ್ಟರ್ ಬೆಳಗ್ಗೆ 6.30ಕ್ಕೆ ಫ್ಯಾಕ್ಸ್ ಹಾಗೂ ಇಮೇಲ್ ಸಂದೇಶದ ಮೂಲಕ ಜಿಲ್ಲಾಡಳಿತಕ್ಕೆ ಅಣು ವಿಕಿರಣದ ಸೋರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಕಿರಣ ಸೋರಿಕೆ ವಲಯಗಳಾದ ಹರ್ಟುಗಾ, ಗೂಳೆ ಮತ್ತು ನಗೆಕೋವೆ, ಕುಚೆಗಾರ, ಶಿರ್ವೆ, ಕೆರವಡಿ, ದೇವಳಮಕ್ಕಿ ಗ್ರಾಮಗಳನ್ನು ಪ್ರಭಾವಿತ ಗ್ರಾಮಗಳೆಂದು ಗುರುತಿಸಿ ಅಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ವಿಕಿರಣ ಸೋರಿಕೆ ಬಗ್ಗೆ ಕೈಗಾ ಸ್ಥಳ ನಿರ್ದೇಶಕರಿಂದ ಮಾಹಿತಿ ಸ್ವೀಕೃತಿಯಾದ ಕೂಡಲೇ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದು, ಎಲ್ಲಾ ಅಧಿಕಾರಿಗಳಿಗೆ ತುರ್ತು ಅಗತ್ಯ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದರು. ವಿಕಿರಣದಿಂದ ಪ್ರಭಾವಕ್ಕೆ ಒಳಗಾದ ಗ್ರಾಮಗಳಿಗೆ ವಾಹನ ಸಂಚಾರ ನಿಷೇಧಿಸಿದರು. ಅಣು ವಿಕಿರಣವು ವಾತಾವರಣದಲ್ಲಿ ಗಾಳಿಯ ಮೂಲಕ ಹರಡುತ್ತಿದ್ದ ಕಾರಣ ಜನರಿಗೆ ಅರಿವು ಮೂಡಿಸಲಾಯಿತು.
`ಅಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾದ ಅಣು ವಿಕಿರಣದ ಪ್ರಮಾಣವು ಅತ್ಯಂತ ಕಡಿಮೆ ಇದ್ದು, ಇದು ಸಾರ್ವಜನಿಕರಿಗೆ ಹೆಚ್ಚಿನ ಅಪಾಯ ಒಡ್ಡುವುದಿಲ್ಲ. ಈ ಸೋರಿಕೆಯನ್ನು ನಿಯಂತ್ರಿಸಲು ತಂತ್ರಜ್ಞರು ಎಲ್ಲಾ ರೀತಿಯ ಗರಿಷ್ಠ್ಠ ಪ್ರಯತ್ನಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲಾಡಳಿತದೊಂದಿಗೆ ಕೈಗಾ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದು ಡೀಸಿ ಜನರಿಗೆ ಭರವಸೆ ನೀಡಿದರು. `ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಜಿಲ್ಲಾಡಳಿತವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಪ್ರಕಟಣೆಗಳನ್ನು ಮಾತ್ರ ಗಮನಿಸಬೇಕು’ ಎಂದು ಮನವಿ ಮಾಡಿದರು.
ಅಣು ವಿಕಿರಣವು ಹರಡುತ್ತಿದ್ದ ಪ್ರದೇಶಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ವತಿಯಿಂದ ವಿಕಿರಣದ ಅಪಾಯವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಕಿರಣ ತಡೆ ನಿಯಂತ್ರಣ ಮಾತ್ರೆಗಳನ್ನು ವಿತರಿಸಲಾಯಿತು. ಈ ಪ್ರದೇಶಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಮುಂದಿನ ಆದೇಶದವರೆಗೆ ರಜೆಯನ್ನು ಘೋಷಿಸಲಾಯಿತು. ಸಾರ್ವಜನಿಕರಿಗೆ ಸ್ಥಳೀಯವಾಗಿ ಸಿದ್ದಪಡಿಸಿದ ಆಹಾರ ಮತ್ತು ನೀರು ಸೇವನೆ ಮಾಡದಂತೆ ಸೂಚನೆ ಸಿಕ್ಕಿತು. ಜಿಲ್ಲಾಡಳಿತದ ವತಿಯಿಂದ ಪ್ರಭಾವಿತ ವಲಯದ ಹೊರಗಿನಿಂದ ಸಿದ್ದಪಡಿಸಿದ ಆಹಾರದ ಪ್ಯಾಕೇಟ್ಗಳನ್ನು ಮತ್ತು ಕುಡಿಯುವ ನೀರಿನ ಬಾಟೆಲ್ಗಳನ್ನು ಸರಬರಾಜು ಮಾಡಲಾಯಿತು.
ವಿಕಿರಣ ಹರಡಿದ್ದ ಹರ್ಟುಗಾ ಗ್ರಾಮದ ನಿವಾಸಿಗಳನ್ನು ಪ್ರಭಾವಿತ ವಲಯದ ಹೊರಗಿನ ಜೋಯಿಡಾ ತಾಲ್ಲೂಕಿನ ಕುಂಬಾರವಾಡದ ಸಮುದಾಯ ಭವನಕ್ಕೆ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ವಿಕಿರಣ ಪ್ರಸಾರಗೊಂಡಿದ್ದ ಇತರೇ ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಮೂಲಕ ತಪಾಸಣೆ ನಡೆಯಿತು. ಸಂಜೆ ವೇಳೆ ಅಣಕು ಕಾರ್ಯಾಚರಣೆ ಯಶಸ್ವಿಯಾದ ಬಗ್ಗೆ ಡೀಸಿ ಘೋಷಿಸಿದರು.