ಕಾಲೇಜಿನಿoದ ಮನೆಗೆ ಮರಳುತ್ತಿದ್ದ ದರ್ಶನ್ ತಾಂಡೇಲ್ ಅವರಿಗೆ ಸಂದೀಪ ನಾಯ್ಕ ಅವರು ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ.
ಕಾರವಾರದ ಸದಾಶಿವಗಡ ಬಳಿಯ ದೇವಭಾಗದ ದರ್ಶನ್ ಪುರಂದರ ತಾಂಡೇಲ್ ಅವರು ನಂದನಗದ್ದಾ ಟೋಲ್ ನಾಕಾದ ಪ್ರಿಮಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಕಾಲೇಜು ಮುಗಿಸಿ ಸ್ನೇಹಿತರ ಜೊತೆ ಮನೆಗೆ ಮರಳುವಾಗ ಬಿಣಗಾದ ಸಂದೀಪ ಕೆ ನಾಯ್ಕ ಅವರು ಪಿಸ್ತೂಲು ತೋರಿಸಿದ್ದಾರೆ.
ಡಿಸೆಂಬರ್ 12ರ ಸಂಜೆ ದರ್ಶನ್ ತಾಂಡೇಲ್ ಅವರು ಸ್ನೇಹಿತರ ಜೊತೆ ನಡೆದು ಬರುತ್ತಿದ್ದರು. ಸ್ನೇಹಿತರು ಮಾಡಿದ ಹಾಸ್ಯಕ್ಕೆ ದರ್ಶನ್ ತಾಂಡೇಲ್ ನಕ್ಕಿದ್ದರು. ಈ ವೇಳೆ ಮಹಾರಾಷ್ಟ ನೋಂದಣಿಯ ಕಾರಿನಲ್ಲಿ ಬಂದ ಸಂದೀಪ ನಾಯ್ಕ ಅವರು ದರ್ಶನ್ ತಾಂಡೇಲ್ ಅವರ ಜೊತೆ ಸ್ನೇಹಿತರನ್ನು ಅಡ್ಡಗಟ್ಟಿದರು.
`ಯಾಕೆ ನಗುತ್ತಿದ್ದೀರಿ?’ ಎಂದು ಸಂದೀಪ ನಾಯ್ಕ ಅವರು ಪ್ರಶ್ನಿಸಿದರು. `ನಮ್ಮ ಪಾಡಿಗೆ ನಾವು ನಡೆದು ಬರುತ್ತಿದ್ದೇವೆ’ ಎಂದು ದರ್ಶನ್ ತಾಂಡೇಲ್ ಉತ್ತರಿಸಿದರು. ಇದರಿಂದ ಸಂದೀಪ ನಾಯ್ಕ ಅವರು ಸಮಾಧಾನರಾಗಲಿಲ್ಲ. ಇನ್ನೊಮ್ಮೆ ಪ್ರಶ್ನಿಸಿದಾಗಲೂ ಆ ಎಲ್ಲಾ ವಿದ್ಯಾರ್ಥಿಗಳು ಅದೇ ಬಗೆಯ ಉತ್ತರ ನೀಡಿದರು.
ಆಗ, ಸಿಟ್ಟಾದ ಸಂದೀಪ ನಾಯ್ಕ ಅವರು ಪಿಸ್ತೂಲು ತೆರೆದರು. ಆ ವಿದ್ಯಾರ್ಥಿಗಳ ಕಡೆ ಗುರಿ ಕಾಣಿಸಿ `Be aware of me, I will shoot u all’ ಎಂದು ಕೂಗಾಡಿದರು. ಇದರಿಂದ ಬೆದರಿದ ವಿದ್ಯಾರ್ಥಿಗಳು ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಿದ್ದು, ಕುಟುಂಬದವರ ಬಳಿ ಈ ವಿಷಯ ಚರ್ಚಿಸಿದರು. ಕೊನೆಗೆ ಬೆದರಿಕೆ ವಿರುದ್ಧ ಕಾರವಾರ ನಗರ ಠಾಣಾ ಪೊಲೀಸರಿಗೆ ದೂರಿದರು.