ಕೃಷಿ ಹಾಗೂ ಅರಣ್ಯೇತರ ಉದ್ದೇಶಕ್ಕಾಗಿ ಸರ್ಕಾರ ನೀಡಿದ ಹಂಗಾಮಿ ಲಾಗಣಿ ಮೇಲೆ ರೈತರಿಗೆ ಇನ್ಮುಂದೆ ಯಾವುದೇ ಹಕ್ಕಿಲ್ಲ. ಹೀಗಾಗಿ ಆ ಭೂಮಿಯನ್ನು ಅವರು ಸರ್ಕಾರಕ್ಕೆ ಮರಳಿಸುವುದು ಅನಿವಾರ್ಯವಾಗಿದ್ದು, ಆ ಪ್ರದೇಶದಲ್ಲಿ ಗಿಡ ನಾಟಿ ಮಾಡುವಂತೆ ಸುಪ್ರೀಂ ಕೋರ್ಟು ಸೂಚಿಸಿದೆ.
ಅರಣ್ಯ ಸಂರಕ್ಷಣಾ ಕಾಯಿದೆ 1980 ಜಾರಿಗೆ ಬರುವ ಪೂರ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಸ್ರಾರು ಅರಣ್ಯವಾಸಿಗಳ ಕುಟುಂಬಕ್ಕೆ ಕೃಷಿ ಚಟುವಟಿಕೆಗೆ ಉದ್ದೇಶಿಸಿ ಹಂಗಾಮಿ ಲಾಗಣಿ ಭೂಮಿ ನೀಡಲಾಗಿತ್ತು. ಆ ವೇಳೆ ಕೆಲವು ವರ್ಷಕ್ಕೆ ಮಾತ್ರ ಲಾಗಣಿ ನೀಡಲಾಗಿದ್ದು, ಅವಧಿ ಮುಗಿದ ನಂತರವೂ ಅಲ್ಲಿ ಜನ ಸಾಗುವಳಿ ಮಾಡಿಕೊಂಡಿದ್ದರು. ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಪೂರ್ವಾನುಮತಿ ಪಡೆಯದೇ ಇರುವುದು ಹಾಗೂ ಲಾಗಣಿ ಅವಧಿ ಮುಗಿದ ನಂತರವೂ ಸಾಗುವಳಿ ನಡೆದಿರುವುದನ್ನು ಸುಪ್ರೀಂ ಕೋರ್ಟು ಗಮನಿಸಿದೆ. ಈ ಹಿನ್ನಲೆ `ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಹಂಗಾಮಿ ಲಾಗಣಿ ಭೂಮಿಯಲ್ಲಿ ಸಾಗುವಳಿ ಮಾಡುವುದು ಕಾನೂನುಬಾಹಿರ’ ಎಂದು ಸುಪ್ರೀಂ ಕೋರ್ಟ ಆದೇಶ ನೀಡಿದೆ.
ಸುಪ್ರಿಂ ಕೊರ್ಟನ ನ್ಯಾಯಮೂರ್ತಿ ವಿಕ್ರಮ್ ನಾಥ ಮತ್ತು ಸಂದೀಪ್ ಮೆಹತಾ ಅವರ ದ್ವೀ ಸದಸ್ಯತ್ವ ಪೀಠ ಡಿ 18ರಂದು ಕಲಘಟಗಿಯ ಗಾಂಧಿ ಜೀವನ್ ಸಾಮುಹಿಕ ಕೃಷಿ ಸಹಕಾರಿ ಸಂಘಕ್ಕೆ ಕೃಷಿ ಚಟುವಟಿಕೆಗೆ ಅರಣ್ಯ ಭೂಮಿ ಹಂಗಾಮಿ ಲಾಗಣಿ ನೀಡಿದ ವಿಷಯವಾಗಿ ಈ ಆದೇಶ ಮಾಡಿದೆ. ಕೃಷಿ ಸಾಗುವಳಿಗೆ ಮುಂದುವರೆಸುವ ಕುರಿತು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ. `ಅರಣ್ಯ ಭೂಮಿಯನ್ನು ಕೃಷಿ ಮತ್ತು ಅರಣ್ಯೇತರ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೊರ್ಟ ಪುನರುಚ್ಚರಿಸಿದೆ. `ಅರಣ್ಯ ಭೂಮಿಯನ್ನು ಕೃಷಿ ಚಟುವಟಿಕೆ ನೀಡುವುದು ಸರಿಯಲ್ಲ. ಇದರಿಂದ ಅರಣ್ಯ ಸಾಂದ್ರತೆ ಕಡಿಮೆ ಆಗಲಿದೆ’ ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದು, `ಕಲಘಟಗಿ ತಾಲೂಕಿನ ಬೆಣಚಿ ಮತ್ತು ತಮಾರಿಕೊಪ್ಪ ಗ್ರಾಮದಲ್ಲಿ 1976ರಲ್ಲಿ 134 ಎಕರೆ ಅರಣ್ಯ ಭೂಮಿಯನ್ನು 10 ವರ್ಷಕ್ಕೆ ಗಾಂಧಿ ಜೀವನ್ ಸಮೂಹ ರೈತರ ಸಂಸ್ಥೆಗೆ ನೀಡಲಾಗಿತ್ತು. ಆ ಭೂಮಿಯ ಗುತ್ತಿಗೆ ಮುಂದುವರೆಸಬೇಕೆoಬ ಪ್ರಕರಣದಲ್ಲಿ ಸರ್ಕಾರ ಈ ಆದೇಶ ಮಾಡಿದೆ’ ಎಂದು ವಿವರಿಸಿದ್ದಾರೆ. ಇದರಿಂದ ಅರಣ್ಯವಾಸಿಗಳಿಗೆ ಇನ್ನಷ್ಟು ಆತಂಕ ಎದುರಾಗಿದೆ ಎಂದವರು ಹೇಳಿದ್ದಾರೆ.