ಕೂಲಿ ಕಾರ್ಮಿಕರಿಗೆ ಚಹ ಕೊಡಲು ತೋಟಕ್ಕೆ ಹೋಗಿದ್ದ ನಂದಿನಿ ಸಿದ್ದಿ ಅವರು ಏಕಾಏಕಿ ಕಾಣೆಯಾಗಿದ್ದಾರೆ. ದುಷ್ಕರ್ಮಿಗಳು ಅವರನ್ನು ಅಪಹರಿಸಿದ ಅನುಮಾನ ಕುಟುಂಬದವರನ್ನು ಕಾಡುತ್ತಿದೆ.
ಯಲ್ಲಾಪುರದ ಮಂಚಿಕೇರಿಯ ಕೆರೆಹೊಸಳ್ಳಿ ಬಳಿ ಶರಾವತಿ ಪುಟ್ಟಾ ಸಿದ್ದಿ ಅವರು ವಾಸವಾಗಿದ್ದಾರೆ. ಶರಾವತಿ ಸಿದ್ದಿ ಅವರು ಅವರಿವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಶರಾವತಿ ಸಿದ್ದಿ ಅವರ ಜೊತೆ ಅವರ 16 ವರ್ಷದ ಮಗಳು ನಂದಿನಿ ಸಿದ್ದಿ ಅವರು ಆಗಾಗ ಕೆಲಸದ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಹೀಗೆ ತೋಟಕ್ಕೆ ಹೋದ ಅವಧಿಯಲ್ಲಿಯೇ ನಂದಿನಿ ಸಿದ್ದಿ ಕಾಣೆಯಾಗಿದ್ದಾರೆ.
2025ರ ಅಗಸ್ಟ 7ರಂದು ಶರಾವತಿ ಸಿದ್ದಿ ಅವರು ಸಂತೋಷ ಶೆಟ್ಟಿ ಅವರ ಮನೆ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ಅವಧಿಯಲ್ಲಿ ನಂದಿನಿ ಸಿದ್ದಿ ಅವರು ಸಹ ಅಲ್ಲಿದ್ದರು. ಆ ದಿನ ಬೆಳಗ್ಗೆ 11 ಗಂಟೆ ವೇಳೆಗೆ ಸಂತೋಷ ಶೆಟ್ಟಿ ಅವರ ಮನೆಯಿಂದ ಚಹಾ ತಂದ ನಂದಿನಿ ಸಿದ್ದಿ ಅವರು ಆ ಚಹಾವನ್ನು ಶರಾವತಿ ಸಿದ್ದಿ ಅವರಿಗೆ ಕೊಟ್ಟಿದ್ದರು. ಅದಾದ ನಂತರ `ಇನ್ನೂ ಅನೇಕರಿಗೆ ಚಹಾ ಕೊಡುವುದಿದೆ’ ಎಂದ ನಂದಿನಿ ಸಿದ್ದಿ ಅವರು ಬೇರೆ ಕಡೆ ಹೊರಟರು.
ಆದರೆ, ಆ ದಿನ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಚಹಾ ಕೊಡಲು ಹೋಗಿದ್ದ ನಂದಿನಿ ಸಿದ್ದಿ ಅವರು ಮತ್ತೆ ಮನೆಗೆ ಮರಳಲಿಲ್ಲ. ಸಂಬAಧಿಕರ ಮನೆಗೆ ಸಹ ಹೋಗಲಿಲ್ಲ. ಇದರಿಂದ ಶರಾವತಿ ಸಿದ್ದಿ ಅವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ನಾಲ್ಕು ತಿಂಗಳು ಕಳೆದರೂ ನಂದಿನಿ ಸಿದ್ದಿ ಅವರ ಸುಳಿವು ಸಿಗಲಿಲ್ಲ. ಆಕೆಯ ಬೆನ್ನು ಬಿದ್ದಿದ್ದ ವ್ಯಕ್ತಿಯೊಬ್ಬರು ಅಪಹರಿಸಿರುವ ಅನುಮಾನ ಕಾಡುತ್ತಿದ್ದು, ಅದೇ ಅನುಮಾನದ ಮೇರೆಗೆ ಶರಾವತಿ ಸಿದ್ದಿ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದರು.
`ಇಷ್ಟು ದಿನ ಕಾದರೂ ತಮ್ಮ ಮಗಳು ಮನೆಗೆ ಬರಲಿಲ್ಲ. ಹೀಗಾಗಿ ಕಾಣೆಯಾದ ಮಗಳನ್ನು ಹುಡುಕಿಕೊಡಿ’ ಎಂದು ಶರಾವತಿ ಸಿದ್ದಿ ಅವರು ಪೊಲೀಸರಿಗೆ ಮನವಿ ಮಾಡಿದರು. ಯಲ್ಲಾಪುರ ಪಿಸೈ ಸಿದ್ದಪ್ಪ ಗುಡಿ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಣೆಯಾದ ಯುವತಿಯ ಶೋಧ ಶುರು ಮಾಡಿದ್ದಾರೆ.
ಈ ಮಾಹಿತಿಯನ್ನು ನಿಮ್ಮ ಬಳಗದಲ್ಲಿ ಶೇರ್ ಮಾಡಿ. ನಂದಿನಿ ಸಿದ್ದಿ ಅವರನ್ನು ಕಂಡರೆ ಇಲ್ಲಿ ಫೋನ್ ಮಾಡಿ: 9480805257 ಅಥವಾ 9480805273