ಎಲ್ಲಡೆ ಕಳ್ಳರ ಹಾವಳಿ ವಿಪರೀತವಾಗಿದ್ದು, ಕಳ್ಳರ ಹೆಡೆಮುರಿ ಕಟ್ಟುವುದಕ್ಕಾಗಿ 55 ಊರಿನ ಜನ ಒಂದಾಗಿದ್ದಾರೆ. ಆ ಊರುಗಳಲ್ಲಿ ಪ್ರತಿ ಮನೆಯಿಂದ ಒಬ್ಬರಂತೆ ತಂಡ ಕಟ್ಟಿಕೊಂಡು ರಾತ್ರಿ ವೇಳೆ ಊರಿನ ಪಹರೆ ಕಾಯುತ್ತಿದ್ದಾರೆ. ಪ್ರತಿ ತಂಡದಲ್ಲಿಯೂ 8-10 ಜನ ಸದಸ್ಯರಿದ್ದು, ಆ ಭಾಗದ ಊರುಗಳಲ್ಲಿ ಸರಿಸುಮಾರು 500ಕ್ಕೂ ಅಧಿಕ ಜನ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ, ಉಮ್ಮಚ್ಗಿ, ಹಾಸಣಗಿ, ಹಲಸಿನಕೊಪ್ಪ, ಕಂಪ್ಲಿ, ಬೈದಹಕ್ಕಲು, ಕೊಕ್ಕಾರ್ ಸೇರಿ ಆ ಭಾಗದ ಅನೇಕ ಊರುಗಳಲ್ಲಿ ರಾತ್ರಿ ಪಹರೆ ಕಾಯುವ ಕೆಲಸ ಶುರುವಾಗಿದೆ. ಈ ಭಾಗದಲ್ಲಿ ಮನೆ ಕಳ್ಳತನ, ಅಡಿಕೆ ಕಳ್ಳತನ ಸೇರಿ ಅನೇಕ ಅಪರಾಧ ಪ್ರಕರಣಗಳು ನಡೆದಿದ್ದರಿಂದ ಅದಕ್ಕೆಲ್ಲ ಕಡಿವಾಣ ಹಾಕಲು ಊರಿನವರೇ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸುವ ಅಲ್ಲಿನ ಜನ ಅಪರಿಚಿತರು ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಅಡಿಕೆ ಫಸಲಿನ ಹಂಗಾಮು ಶುರುವಾಗಿದ್ದು, ಬೆಳೆ ಕಾಯ್ದುಕೊಳ್ಳುವದೇ ರೈತರಿಗೆ ದೊಡ್ಡ ತಲೆನೋವಾಗಿದೆ. ಈ ನಡುವೆ ಮರಕ್ಕೆ ಇದ್ದ ಅಡಿಕೆ ಕದ್ದು ಒಯ್ದ ಪ್ರಕರಣಗಳು ನಡೆಯುತ್ತಿದೆ. ಕಳ್ಳರ ಕಾಟದಿಂದ ಊರಿನ ಜನರಿಗೆ ನೆಮ್ಮದಿ ಇಲ್ಲದಿರುವುದನ್ನು ಅರಿತ ಯಲ್ಲಾಪುರ ಪಿಐ ರಮೇಶ ಹಾನಾಪುರ ಈ ಭಾಗದಲ್ಲಿ ನಿರಂತರ ಸಭೆ ನಡೆಸಿದ್ದಾರೆ. ಅದರ ಮುಂದುವರೆದ ಭಾಗವಾಗಿ ಊರಿನ ಜನರನ್ನು ಒಂದುಗೂಡಿಸಿ ಅವರ ಮೂಲಕವೇ ಊರಿಗೆ ಭದ್ರತೆ ಒದಗಿಸುವ ಪ್ರಯತ್ನ ಮಾಡಿದ್ದಾರೆ. ಈ 55 ಊರುಗಳಿಗೆ ಮಂಚಿಕೇರಿ ಹೊರಠಾಣೆ ಕೇಂದ್ರವಾಗಿದ್ದು, ತುರ್ತು ಸನ್ನಿವೇಶ ಎದುರಾದಲ್ಲಿ ಜನ 112ಗೆ ಫೋನ್ ಮಾಡುತ್ತಾರೆ. 112 ಸಿಬ್ಬಂದಿ ಜೊತೆ ಮಂಚಿಕೇರಿ ಹೊರಠಾಣೆ ಪೊಲೀಸರು ಸ್ಥಳದಲ್ಲಿ ಹಾಜರಿರುತ್ತಾರೆ. `ಫೋನ್ ಮಾಡದಿದ್ದರೂ ನಮ್ಮೊಂದಿಗೆ ಪೊಲೀಸರು ಬರುತ್ತಾರೆ. ಬೇರೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಹ ಫೋನ್ ಮಾಡಿದ ತಕ್ಷಣ ಹಾಜರಿರುತ್ತಾರೆ’ ಎಂದು ರಾಮಣ್ಣ ಕಬ್ಬಿನಗುಳಿ ಹಾಗೂ ವಿನೋದ ನಾಯ್ಕ ಕಂಪ್ಲಿ ಅವರು ವಿವರಿಸಿದರು.
ಮಂಚಿಕೇರಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳತನ ಮಾಡುವವರನ್ನು ಪೊಲೀಸರು ಗುರುತಿಸಿದ್ದಾರೆ. ಈಗಾಗಲೇ ಪೊಲೀಸರು ಅಂಥವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಅದಾಗಿಯೂ, ಬೇರೆ ಬೇರೆ ಊರುಗಳಿಂದ ಕಳ್ಳರು ಇಲ್ಲಿ ಬರುವ ಸಾಧ್ಯತೆಗಳಿವೆ. ಈಚೆಗೆ ನಡೆದ ಬ್ಯಾಂಕ್ ದರೋಡೆ, ಅಡಿಕೆ ಕಳ್ಳತನ, ಮನೆ ಲೂಟಿ ಪ್ರಕರಣವನ್ನು ಊರಿನ ಜನ ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಊರಿನ ರಕ್ಷಣೆಗಾಗಿ ಎಲ್ಲರೂ ಸೇರಿ ಪಣ ತೊಟ್ಟಿದ್ದಾರೆ. `ಊರಿನವರೆಲ್ಲ ಒಗ್ಗಟ್ಟಿನ ಪ್ರಕಾರ ಗಸ್ತು ಕಾಯುವದರಿಂದ ಕಳ್ಳರಿಗೂ ಭಯ ಶುರುವಾಗಿದೆ. ಊರಿನ ಸೌಹಾರ್ದತೆಗೂ ಈ ಕಾರ್ಯ ಅನುಕೂಲವಾಗಿದೆ’ ಎಂದು ವಸಂತ ಭಟ್ಟ ಹಾಸಣಗಿ ಅವರು ಅನಿಸಿಕೆವ್ಯಕ್ತಪಡಿಸಿದರು. `ಪೊಲೀಸರ ಸಹಕಾರದಿಂದ ಗಸ್ತು ಪದ್ಧತಿ ಶುರುವಾಗಿದೆ. ನಮ್ಮ ಊರಿನ ರಕ್ಷಣೆಗೆ ನಮಗೆ ಜವಾಬ್ದಾರಿ ಸಿಕ್ಕಿದ್ದು ಸಂತಸದ ಸಂಗತಿಯೂ ಹೌದು’ ಎಂದು ನವೀನ ಹೆಗಡೆ ಬೆದೆಹಕ್ಕಲ್ ಅವರು ಹೆಮ್ಮೆಯಿಂದ ಹೇಳಿದರು.
`ಪ್ರಮುಖ 15 ಸೊಸೈಟಿಗಳ ಸಭೆ ನಡೆಸಿದಾಗ ಅಡಿಕೆ ಕಳ್ಳತನದ ಬಗ್ಗೆ ಜನ ವಿವರಿಸಿದ್ದು, ಅದರ ತಡೆಗೆ ಗಸ್ತು ತಿರುಗುವ ಯೋಜನೆ ರೂಪಿಸಲಾಯಿತು. ಸ್ಥಳೀಯ ಬೀಟ್ ಪೊಲೀಸರ ಸಹಕಾರದಲ್ಲಿ ಊರಿನವರೇ ಗಸ್ತು ತಿರುಗಲು ಒಪ್ಪಿಕೊಂಡಿದ್ದಾರೆ. ಕಾನೂನು ಕೈಗೆ ತೆಗೆದುಕೊಳ್ಳದಂತೆ ಅಲ್ಲಿನವರಿಗೆ ಎಚ್ಚರಿಸಲಾಗಿದ್ದು ಅನುಮಾನಾಸ್ಪದ ವ್ಯಕ್ತಿ, ವಾಹನಗಳ ಬಗ್ಗೆ ಮಾಹಿತಿ ಕೊಡುವಂತೆ ಅರಿವು ಮೂಡಿಸಲಾಗಿದೆ. ಮಂಚಿಕೇರಿ ಭಾಗದಲ್ಲಿ ಜನರ ಸ್ಪಂದನೆ ಚನ್ನಾಗಿದ್ದು ಇಡಗುಂದಿ, ಅರಬೈಲ್ ಸೇರಿ ತಾಲೂಕಿನ ಇನ್ನಿತರ ಕಡೆಗಳಲ್ಲಿಯೂ ಈ ರೀತಿ ಮಾಡುವ ಪ್ರಯತ್ನ ಸಾಗಿದೆ’ ಎಂದು ಪಿಐ ರಮೇಶ ಹಾನಾಪುರ ಅವರು ತಿಳಿಸಿದರು.