ಪ್ರವೇಶ ಪ್ರಕ್ರಿಯೆ ವೇಳೆ ವಿದ್ಯಾರ್ಥಿಗಳಿಂದ ಕಾಸುಪಡೆಯುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅದಾದ ನಂತರವೂ ಮಕ್ಕಳ ಜೊತೆ ಅವರ ಪಾಲಕರ ವೈಯಕ್ತಿಕ ವಿವರವನ್ನು ಮಾರಾಟ ಮಾಡುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಸರ್ಕಾರಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹ ಇಂಥ ಅಡ್ಡದಾರಿ ಹಿಡಿದಿದ್ದಾರೆ!
ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ದಾಖಲಿಸುವಾಗ ಆ ಸಂಸ್ಥೆಯವರು ಮಕ್ಕಳ ವಿವರದ ಜೊತೆ ಪಾಲಕರ ಹೆಸರು, ವಿಳಾಸ ಹಾಗೂ ಫೋನ್ ಸಂಖ್ಯೆ ಪಡೆಯುತ್ತಾರೆ. ನಂತರ ಆ ಸಂಗ್ರಹ ಮಾಹಿತಿಯನ್ನು ವಿವಿಧ ಮಾರ್ಕೇಂಟಿoಗ್ ತಂಡಕ್ಕೆ ಮಾರಾಟ ಮಾಡುತ್ತಾರೆ. ಇಂಥ ಕಳ್ಳಾಟ ಪ್ರಕರಣದ ಬೆನ್ನತ್ತಿದ ಶಿರಸಿಯ ವೈದ್ಯ ಡಾ ರವಿಕಿರಣ ಪಟವರ್ಧನ್ ಅವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದಾರೆ.
ನಿಯಮಗಳ ಪ್ರಕಾರ ಯಾವ ವ್ಯಕ್ತಿಯೂ ತಮ್ಮ ವೈಯಕ್ತಿಕ ವಿವರಗಳನ್ನು ಬೇರೆಯವರಿಗೆ ಕೊಡುವುದು ಕಡ್ಡಾಯ ಅಲ್ಲ. ಹೀಗಾಗಿ ಫೋನ್ ನಂ ಹಾಗೂ ಮೇಲ್ ಐಡಿ ಜೊತೆ ವಿಳಾಸ ಸಹ ಕೊಡಬೇಕಾಗಿಲ್ಲ. ಅದಾಗಿಯೂ, ವಿವಿಧ ಶಿಕ್ಷಣ ಸಂಸ್ಥೆಯವರು ಅರ್ಜಿ ನಮೂನೆಯಲ್ಲಿಯೇ ಕಡ್ಡಾಯ ಎನ್ನುವ ರೀತಿ ಕಾಲಂ ಬಿಡುತ್ತಿದ್ದು, ಆ ಮಾಹಿತಿ ಸೋರಿಕೆಯಾಗುತ್ತಿದೆ. ವಿವಿಧ ಶಾಲಾ-ಕಾಲೇಜುಗಳಿಗೆ ಪ್ರವೇಶಪಡೆದ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಇನ್ನಿತರ ಉನ್ನತ ಶಿಕ್ಷಣದ ಕಾಲೇಜು, ಕೋಚಿಂಗ್ ಕೇಂದ್ರ, ಆನ್ಲೈನ್ ಟ್ಯೂಶನ್ ಸೇರಿ ಬೇರೆ ಬೇರೆ ಕಡೆಯಿಂದ ಫೋನ್ ಬರುತ್ತಿದೆ. ವಿದ್ಯಾರ್ಥಿಯ ಕಾಲೇಜು ಮುಗಿದ ನಂತರ ಅದೇ ಮಾಹಿತಿ ಮತ್ತೆ ಸೋರಿಕೆ ಆಗುತ್ತಿದ್ದು, ಉದ್ಯೋಗವಕಾಶಗಳ ಹೆಸರಿನಲ್ಲಿಯೂ ಕೆಲವರು ಫೋನ್ ಮಾಡಿ ವಂಚಿಸುತ್ತಿದ್ದಾರೆ. ಇಂಥ ಫೋನ್ ಕರೆಗಳು ಮಕ್ಕಳ ವಿದ್ಯಾಭ್ಯಾಸ ಹಾಳು ಮಾಡುವುದರ ಜೊತೆ ಪಾಲಕರ ನಿದ್ದೆಯನ್ನು ಕೆಡಿಸುತ್ತಿದೆ.
2023ರ ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ ಹಾಗೂ ಟ್ರಾಯ್ ಅನಿಚ್ಛಿತ ವಾಣಿಜ್ಯ ಸಂವಹನ ನಿಯಮಗಳ ಪ್ರಕಾರ ಡಾಡಾ ಸೋರಿಕೆ ಅಪರಾಧ. ಒಬ್ಬರ ವೈಯಕ್ತಿಕ ವಿವರವನ್ನು ಮತ್ತೊಬ್ಬರಿಗೆ ಹಂಚುವುದು ಕಾನೂನುಬಾಹಿರ. ಅದಾಗಿಯೂ, ಮೊದಲಿನಿಂದಲೂ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅನೇಕ ಫೋನ್ ಸಂಖ್ಯೆಗಳು ವಿನಿಮಯವಾಗುತ್ತಿದೆ. ಯಾವುದೇ ಮಳಿಗೆಗಳಲ್ಲಿ ಆಫರ್ ಹೆಸರಿನಲ್ಲಿ ಗ್ರಾಹಕರಿಂದ ಫೋನ್ ಸಂಖ್ಯೆ ಪಡೆಯುತ್ತಿದ್ದು, ಅಂಥ ಮಳಿಗೆಯವರು ಸಹ ಗ್ರಾಹಕರ ಫೋನ್ ಸಂಖ್ಯೆ ಮಾರಾಟ ಮಾಡುತ್ತಾರೆ. ಬ್ಯಾಂಕುಗಳಿಗೆ ನೀಡಿದ ಫೋನ್ ನಂ ಸಹ ಮಾರಾಟ ವ್ಯವಸ್ಥೆಯಿಂದ ಹೊರತಾಗಿಲ್ಲ. ಹೀಗಾಗಿಯೇ ಕ್ರೆಡಿಟ್ ಕಾರ್ಡ, ಸಾಲ ಕೊಡುತ್ತೇವೆ ಎನ್ನುವ ಫೋನುಗಳು ಜನರ ನೆಮ್ಮದಿ ಹಾಳು ಮಾಡುತ್ತಿವೆ.
ಸದ್ಯ ಶಿಕ್ಷಣ ವ್ಯವಸ್ಥೆಯಲ್ಲಿಯೂ ಮಾರ್ಕೇಂಟಿoಗ್ ಹಾವಳಿ ಮಿತಿ ಮೀರಿದೆ. ಪ್ರವೇಶ ಪ್ರಕ್ರಿಯೆ, ಬೋರ್ಡ್ ನೋಂದಣಿ, ಅಥವಾ ಅಕಾಡೆಮಿಕ್ ದಾಖಲೆ ಸಂಗ್ರಹದ ಹೆಸರಿನಲ್ಲಿಪಡೆದ ವೈಯಕ್ತಿಕ ಮಾಹಿತಿಯನ್ನು ಆ ಸಂಸ್ಥೆಯವರೇ ಅನಗತ್ಯ ಜಾಹೀರಾತು, ಪ್ರಚಾರ ಸಂದೇಶಕ್ಕೆ ಬಳಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿ ಮತ್ತು ಅವರ ಕುಟುಂಬಗಳ ಗೌಪ್ಯತೆ, ಸುರಕ್ಷತೆ ಮತ್ತು ನೈತಿಕ ಹಕ್ಕುಗಳಿಗೆ ದೊಡ್ಡ ಪ್ರಮಾಣದಲ್ಲಿ ಧಕ್ಕೆಯಾಗುತ್ತಿದೆ.
`ವಿದ್ಯಾರ್ಥಿ ಮತ್ತು ಪೋಷಕರ ಸಂಪರ್ಕ ವಿವರಗಳನ್ನು ಜಾಹೀರಾತು ಅಥವಾ ವ್ಯಾಪಾರಿಕ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ತಕ್ಷಣ ನಿಷೇಧಿಸಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಬೋರ್ಡ್ಗಳಿಗೆ ಕಠಿಣ ಡೇಟಾ ರಕ್ಷಣೆ ಮಾರ್ಗಸೂಚಿಗಳನ್ನು ಜಾರಿ ಮಾಡಬೇಕು. ಈ ಸಮಸ್ಯೆಯಿಂದ ಬಾಧಿತರಾದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ದೂರು ಪರಿಹಾರ ವ್ಯವಸ್ಥೆಯನ್ನು ರೂಪಿಸಬೇಕು’ ಎಂದು ಆಗ್ರಹಿಸಿ ಡಾ ರವಿಕಿರಣ ಪಟವರ್ಧನ್ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. `ಯಾವುದೇ ಕಾಲೇಜು ಅಥವಾ ವ್ಯಕ್ತಿ ವಿದ್ಯಾರ್ಥಿ ಅಥವಾ ಪೋಷಕರ ಮಾಹಿತಿಯನ್ನು ದುರುಪಯೋಗಪಡಿಸಿರುವ ಮಾಹಿತಿ ಒದಗಿಸಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸರ್ಕಾರ ಹಿಂಬರಹವನ್ನು ಕೊಟ್ಟಿದೆ.