ಅಲ್ಲಿ-ಇಲ್ಲಿ ಕಳ್ಳತನ ಮಾಡಿದ ದುಡ್ಡನ್ನು ಸಿನಿಮಾ ನಿರ್ಮಾಣಕ್ಕೆ ಬಳಸುತ್ತಿದ್ದ ಹರ್ಷವರ್ಧನ ಅವರನ್ನು ಪೊಲೀಸರು ಬಂಧಿಸಿದ್ದು, ಬಂಧನದ ಬೆನ್ನಲ್ಲೆ ಅವರ ವಿರುದ್ಧ ಸಿನಿಮಾ ನಟಿಯೊಬ್ಬರನ್ನು ಅಪಹರಿಸಿದ ಆರೋಪ ಕೇಳಿ ಬಂದಿದೆ.
2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿ ಸಮೀಪದ ಕುಂಬಾರಕುಳಿಯಲ್ಲಿ ಮನೆ ಕಳ್ಳತನ ನಡೆದಿತ್ತು. ಆ ಪ್ರಕರಣ ಬೆನ್ನತ್ತಿದ ಪೊಲೀಸರು ಬೆಂಗಳೂರಿನಲ್ಲಿ ವಾಸವಾಗಿದ್ದ ಹಾಸನ ಮೂಲದ ಹರ್ಷವರ್ಧನ್ ಎಂಬಾತರನ್ನು ಬಂಧಿಸಿದ್ದರು. ಹರ್ಷವರ್ಧನ್ ಅವರು ಜಾಮೀನುಪಡೆದು ಪರಾರಿಯಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅದಾದ ನಂತರ ಬೆಂಗಳೂರು, ಉಡುಪಿ, ಮೈಸೂರು ಸೇರಿ ಅನೇಕ ಕಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಹರ್ಷವರ್ಧನ್ ಆ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಬಳಸಿದ್ದರು. 10ಕ್ಕೂ ಅಧಿಕ ಸಲ ವಾರೆಂಟ್ ಆದರೂ ಹರ್ಷವರ್ಧನ್ ಸಿಕ್ಕಿರಲಿಲ್ಲ. ಡಿಸೆಂಬರ್ 12ರಂದು ಸಿದ್ದಾಪುರ ಪೊಲೀಸರು ಹರ್ಷವರ್ಧನ್ ಅವರು ಬೆಂಗಳೂರಿನ ಬ್ಯಾಟರಾಯನಪುರದಲ್ಲಿರುವ ಮಾಹಿತಿ ಆಧರಿಸಿ ಬಂಧಿಸಿದರು. ಸಿದ್ದಾಪುರ ನ್ಯಾಯಾಲಯದಿಂದ ಮತ್ತೆ ಜಾಮೀನುಪಡೆದು ಹರ್ಷವರ್ಧನ್ ಬೆಂಗಳೂರು ತಲುಪಿದ್ದು, ಅಲ್ಲಿನ ಪೊಲೀಸರು ಅಪಹರಣ ಪ್ರಕರಣದಲ್ಲಿ ಮತ್ತೆ ಅವರನ್ನು ವಶಕ್ಕೆಪಡೆದಿದ್ದಾರೆ.
ಹರ್ಷವರ್ಧನ್ ಅವರು `ವರ್ಧನ್ ಸಿನಿಮಾಸ್ ಕಂಪನಿ’ ಮಾಲಕರಾಗಿದ್ದಾರೆ. ಅವರು `ನಿನ್ನಲ್ಲೇನೋ ಹೇಳಬೇಕು’ ಎಂಬ ಚಿತ್ರ ನಿರ್ಮಾಣ ಮಾಡಿದ್ದರು. ಆ ಚಿತ್ರದಲ್ಲಿ ನಟಿಸಿದ್ದ ಚೈತ್ರಾ ಎಂಬ ನಟಿಯನ್ನು ಪ್ರೀತಿಸಿ ಮದುವೆ ಆಗಿದ್ದರು. ಚೈತ್ರಾ ಅವರು ಕಿರುತೆರೆಯಲ್ಲಿ ವಿವಿಧ ಧಾರಾವಾಹಿಗಳಲ್ಲಿಯೂ ನಟನೆ ಮಾಡಿದ್ದು, ಆ ದಂಪತಿಗೆ ಒಬ್ಬ ಮಗುವಿದೆ. ಈ ನಡುವೆ ಹರ್ಷವರ್ಧನ್ ಹಾಗೂ ಚೈತ್ರಾ ನಡುವೆ ಬಿರುಕು ಮೂಡಿತು. ಹೀಗಾಗಿ ಚೈತ್ರಾ ಅವರು ಹರ್ಷವರ್ಧನರ ಸಹವಾಸದಿಂದ ದೂರವಾಗಿದ್ದು, ಮಗಳನ್ನು ತಮ್ಮೊಡನೆ ಕರೆದೊಯ್ದಿದ್ದರು. `ಮಗಳನ್ನು ನೋಡಲು ಪತ್ನಿ ಅವಕಾಶ ನೀಡುವುದಿಲ್ಲ’ ಎಂಬ ಕಾರಣಕ್ಕೆ ಹರ್ಷವರ್ಧನ್ ಅವರು ಚೈತ್ರಾ ಅವರನ್ನು ಅಪಹರಿಸಿದ್ದರು. ಅದಾದ ನಂತರ ಚೈತ್ರಾಳ ತಾಯಿಗೆ ಕರೆ ಮಾಡಿ `ನಿನ್ನ ಮಗಳು ಬೇಕಿದ್ದರೆ ನನ್ನ ಮಗಳನ್ನು ತಂದು ಒಪ್ಪಿಸು’ ಎಂದು ಬೆದರಿಕೆ ಹಾಕಿದ್ದರು.
ಚೈತ್ರಾಳ ಸಹೋದರಿ ಲೀಲಾ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಿದ್ದಾಪುರದಿಂದ ಜಾಮೀನುಪಡೆದು ಬೆಂಗಳೂರು ಪ್ರವೇಶಿಸಿದ್ದ ಹರ್ಷವರ್ಧನ್ ಅವರನ್ನು ಅಲ್ಲಿನ ಪೊಲೀಸರು ವಶಕ್ಕೆಪಡೆದರು.