`ಪರಿಸರ ಹಾಗೂ ಜನರ ಜೀವನೋಪಾಯದ ಹಿತದೃಷ್ಠಿಯಿಂದ ಶರಾವತಿ ಪಂಪ್ ಸ್ಟೋರೇಜ್ ಭೂಗತ ಜಲ ವಿದ್ಯುತ್ ಯೋಜನೆ ಕೈ ಬಿಡಬೇಕು’ ಎಂದು ಹೊನ್ನಾವರದ ಮಾಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಶಿವರಾಮ ಆರ್ ಹೆಗಡೆ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
`ತಮ್ಮ ಊರಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಉದ್ದೇಶಿತ ಪಂಪ್ಡ ಸ್ಟೋರೇಜ ಭೂಗತ ವಿದ್ಯುತ್ ಯೋಜನೆಯ ಸಾಧಕ ಭಾದಕಗಳ ಕುರಿತು ಚರ್ಚೆ ನಡೆಸಿದ್ದು, ಆ ಯೋಜನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದ್ದಾರೆ. ಯೋಜನೆ ಅನುಷ್ಠಾನದಿಂದ ಈ ಪ್ರದೇಶದಲ್ಲಿ ಭೂಕುಸಿತದ ಅಪಾಯಗಳು ಸೇರಿದಂತೆ ಅಪಾರ ಪ್ರಮಾಣದ ಕಾಡು ನಾಶವಾಗಲಿದೆ. ಆದ್ದರಿಂದ ಉದ್ದೇಶಿಸಿತ ಯೋಜನೆಯನ್ನು ಕೈ ಬಿಡಬೇಕು ಎಂದು ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ’ ಎಂಬ ವಿಷಯವನ್ನು ಅವರು ಉಲ್ಲೇಖಿಸಿದ್ದಾರೆ. `ಭೂಮಿ ಅಗೆತ, ಸ್ಪೋಟಕ ಬಳಕೆ, ಕಾಡು ನಾಶದಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪ್ರಕೃತಿ ವಿಕೋಪದಿಂದ ಭವಿಷ್ಯದಲ್ಲಿ ಅಪಾರ ಸಾವು-ನೋವು ಸಂಭವಿಸುವ ಸಾಧ್ಯತೆಯಿರುವ ಬಗ್ಗೆ ವಿವಿಧ ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚೆಗೆ ಗೇರುಸೊಪ್ಪೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಸಹ ಈ ಬಗ್ಗೆ ವಿವರಿಸಲಾಗಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಮಾಧವ ಗಾಡ್ಗೀಳ ಹಾಗೂ ಕಸ್ತೂರಿ ರಂಗನ್ ವರದಿಯಲ್ಲಿಯೂ ಇಲ್ಲಿನ ಪರಿಸರ ವಿಷಯಗಳ ಮಹತ್ವದ ಮಾಹಿತಿಯಿದೆ’ ಎಂದವರು ವಿವರಿಸಿದ್ದಾರೆ.
`ಮಾಗೋಡ ಗ್ರಾಮ ಪಂಚಾಯತದ ಹೆಚ್ಚಿನ ಪ್ರದೇಶವು ಪಶ್ಚಿಮ ಘಟ್ಟದ ಅಂಚಿನ ತಗ್ಗು ಪ್ರದೇಶದಲ್ಲಿರುವ ಅತ್ಯಂತ ಸೂಕ್ಷ್ಮ ಪರಿಸರದಲ್ಲಿದೆ. ಬಹುಪಾಲು ಅರಣ್ಯವಿರುವ ಹಾಗೂ ಜೀವನೋಪಾಯಕ್ಕೆ ಇಲ್ಲಿನ ಜನರು ಕೃಷಿ, ತೋಟಗಾರಿಕೆ ಅವಲಂಬಿಸಿದ್ದಾರೆ. ತಾಲೂಕಿನ ಜನ ಕುಡಿಯುವ ನೀರಿಗೆ ಶರಾವತಿ ನದಿ ಅವಲಂಬಿಸಿದ್ದಾರೆ. ಈ ನಡುವೆ ಶರಾವತಿ ನದಿನೀರಿಗೆ ಬೇಸಿಗೆಯಲ್ಲಿ ಸಮುದ್ರದ ಉಪ್ಪು ನೀರು ಸೇರುತ್ತಿರುವುದರಿಂದ ಜನರು ಈಗಾಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಬೇರೆ, ಬೇರೆ ತಾಲೂಕುಗಳಿಗೂ ಕುಡಿಯುವ ನೀರಿನ ಯೋಜನೆಗಳಿಗೆ ಶರಾವತಿಯ ನೀರನ್ನು ಬಳಸಲಾಗುತ್ತಿದೆ. 11 ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನ ಲಕ್ಷಾಂತರ ಎಕರೆ ಜಮೀನಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಬೆಳೆಸಲಾಗುತ್ತಿದೆ. ಉದ್ದೇಶಿತ ಯೋಜನೆಯ ಅನುಷ್ಠಾನದಿಂದ ಬೇಸಿಗೆಯಲ್ಲಿ ಸಮುದ್ರದ ಉಪ್ಪುನೀರು ನದಿಗೆ ಸೇರಿ ಕುಡಿಯುವ ನೀರಿನ ಅಗತ್ಯ ಸೇವೆಗಳಿಗೆ ಇನ್ನಷ್ಟು ವ್ಯತ್ಯಯ ಆಗಲಿದೆ’ ಎಂಬ ಅಂಶದ ಬಗ್ಗೆಯೂ ಅವರು ಗಮನಸೆಳೆದಿದ್ದಾರೆ.
`ಅಳಿವಿನಂಚಿನಲ್ಲಿರುವ ಅಪರೂಪದ ಸಿಂಗಳಿಕ ಅಭಯಾರಣ್ಯದಲ್ಲಿ ಸ್ಪೋಟಕ ಗಳನ್ನು ಬಳಸಿ 7ಕಿಲೋಮೀಟರ್ ಉದ್ದದ ಸುರಂಗ ಕೊರೆಯುವುದು ಜಲಾಶಯಗಳ ಹಿತದೃಷ್ಟಿಯಿಂದಲೂ ತೀರ ಅಪಾಯಕಾರಿಯಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಹೇರಳ ಅರಣ್ಯನಾಶವಾಗಲಿದ್ದು ಜೀವ ಸಂಕುಲಗಳು, ಸಿಂಗಳಿಕಸಹಿತ ವಿವಿಧ ವನ್ಯಜೀವಿಗಳ, ಅಪರೂಪದ ಸಸ್ಯ ಪ್ರಭೇದಗಳ ವಿನಾಶಕ್ಕೆ ಕಾರಣವಾಗಲಿದೆ’ ಎಂದವರು ಹೇಳಿದ್ದಾರೆ. ಈ ಎಲ್ಲಾ ಹಿನ್ನಲೆ ಗ್ರಾಮ ಸಭೆಯ ನಿರ್ಣಯವನ್ನು ಶಿವರಾಮ ಹೆಗಡೆ ಅವರು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದು, ಉದ್ದೇಶಿತ ಪಂಪ್ಡ ಸ್ಟೋರೇಜ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.