ಸುರೇಶ ನಾಯ್ಕ ಅವರ ಕುಟುಂಬದವರ ಮೇಲೆ ನಾರಾಯಣ ನಾಯ್ಕ ಕಡೆಯವರು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಪರಿಣಾಮ ಸುರೇಶ ನಾಯ್ಕ ಅವರ ಜೊತೆ ಅವರ ತಂದೆ ಮಂಜುನಾಥ ನಾಯ್ಕ ಹಾಗೂ ಅವರ ತಾಯಿ ಮಾದೇವಿ ನಾಯ್ಕ ಅವರು ಆಸ್ಪತ್ರೆ ಸೇರಿದ್ದಾರೆ.
ಹೊನ್ನಾವರ ಹುಡಗೋಡ ಬಳಿಯ ಮುಟ್ಟಾದದಲ್ಲಿ ಸುರೇಶ ಮಂಜುನಾಥ ನಾಯ್ಕ ಅವರು ವಾಸವಾಗಿದ್ದಾರೆ. ತಂದೆ, ತಾಯಿ, ತಂಗಿ ಜೊತೆ ವಾಸವಾಗಿರುವ ಅವರು ತಮ್ಮದೇ ಆದ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಮಂಜುನಾಥ ನಾಯ್ಕ ಅವರ ತಾಯಿ ಮಾದೇವಿ ನಾಯ್ಕ ಅವರು ಕೊಟ್ಟಿಗೆ ಕೆಲಸ ನೋಡಿಕೊಳ್ಳುತ್ತಿದ್ದು, ಅವರು ಹೈನುಗಾರಿಕೆ ಮಾಡಿಕೊಂಡಿದ್ದಾರೆ.
ಹೀಗಿರುವಾಗ ಡಿಸೆಂಬರ್ 22ರಂದು ರಾತ್ರಿ ಮಾದೇವಿ ನಾಯ್ಕ ಅವರು ಕೊಟ್ಟಿಗೆ ಕೆಲಸಕ್ಕೆ ಹೊಗಿದ್ದರು. ಕೊಟ್ಟಿಗೆಯ ಬಾಗಿಲು ಒಡೆದಿರುವುದನ್ನು ಅವರು ನೋಡಿದರು. ಬಾಗಿಲು ಒಡೆದ ಕಿಡಿಗೇಡಿಗಳ ವಿರುದ್ಧ ಸಿಟ್ಟಾದ ಮಾದೇವಿ ನಾಯ್ಕ ಅವರು ದೊಡ್ಡದಾಗಿ ಗಲಾಟೆ ಮಾಡಿದರು. ಅವರ ಗಲಾಟೆಗೆ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಆಗಮಿಸಿದರು. ಪಕ್ಕದ ಮನೆಯ ನಾರಾಯಣ ಮಾಳಪ್ಪ ನಾಯ್ಕ, ಅವರ ಮಗ ಮಂಜುನಾಥ ನಾರಾಯಣ ನಾಯ್ಕ ಹಾಗೂ ನಿರ್ಮಲಾ ಮಂಜುನಾಥ ನಾಯ್ಕ ಅವರು `ಏಕೆ ಕೂಗಾಡುವಿರಿ?’ ಎಂದು ಪ್ರಶ್ನೆ ಮಾಡಿದರು.
ಆಗ, ಸುರೇಶ ನಾಯ್ಕ ಅವರು `ನೀವೇಕೆ ಸಿಟ್ಟಾಗುತ್ತೀರಿ? ನಿಮಗೆ ಏನು ಹೇಳಿದಲ್ಲ’ ಎಂದರು. ಇದರಿಂದ ಇನ್ನಷ್ಟು ಕೋಪಿತರಾದ ನಾರಾಯಣ ನಾಯ್ಕ ಅವರು ಕಬ್ಬಿಣದ ರಾಡು ತಂದು ಸುರೇಶ ನಾಯ್ಕ ಅವರ ತಂದೆ ಮಂಜುನಾಥ ನಾಯ್ಕ ಅವರ ಮೇಲೆ ಹೊಡೆಯಲು ಶುರು ಮಾಡಿದರು. ತಪ್ಪಿಸಲು ಬಂದ ಸುರೇಶ ನಾಯ್ಕ ಅವರಿಗೂ ಎರಡು ಏಟು ಕೊಟ್ಟರು. ನಿರ್ಮಲಾ ನಾಯ್ಕ ಅವರು ಮಾದೇವಿ ನಾಯ್ಕ ಅವರಿಗೆ ಬಡಿಗೆ ತೆಗೆದುಕೊಂಡು ಹೊಡೆದರು. ಮಂಜುನಾಥ ನಾರಾಯಣ ನಾಯ್ಕ ಅವರು ಸಹ ಸುಮ್ಮನೆ ಕೂರುವ ಬದಲು ಈ ಹೊಡೆದಾಟಕ್ಕೆ ಕೈ ಜೋಡಿಸಿದರು.
ಸುರೇಶ ನಾಯ್ಕ ಅವರ ಸಂಬoಧಿ ಅಣ್ಣಪ್ಪ ಮಂಜುನಾಥ ನಾಯ್ಕ, ಸಂಗೀತಾ ಮಂಜುನಾಥ ನಾಯ್ಕ ಹಾಗೂ ಅಕ್ಕಪಕ್ಕದವರು ಬಂದು ಈ ಹೊಡೆದಾಟ ತಪ್ಪಿಸಿದರು. ಅದಾಗಿಯೂ, ಸುರೇಶ ನಾಯ್ಕ ಅವರ ಕುಟುಂಬಕ್ಕೆ ನೋವಾಯಿತು. ಸುರೇಶ ನಾಯ್ಕ ಅವರ ತಂದೆಯ ತಲೆಭಾಗದಿಂದ ರಕ್ತ ಸುರಿಯಿತು. ಮಾದೇವಿ ನಾಯ್ಕ ಅವರ ಬೆನ್ನಿಗೆ ಗಾಯವಾಯಿತು. ಆ ಕುಟುಂಬದವರೆಲ್ಲರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆದರು. ಅದಾದ ನಂತರ ಹೊಡೆದಾಟದ ಬಗ್ಗೆ ಹೊನ್ನಾವರ ಪೊಲೀಸರಿಗೆ ಹೇಳಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.