ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬ್ರಹ್ಮಶ್ರೀ ನಾರಾಯಣ ಗುರುಪೀಠದ ಪ್ರಣವಾನಂದ ಸ್ವಾಮೀಜಿ ವಾಗ್ದಾಳಿ ಮಾಡಿದ್ದಾರೆ. `ಸಿದ್ಧರಾಮಯ್ಯ ಅವರು ಈ ಹಿಂದೆ ಆಡಿದ ಮಾತು ಉಳಿಸಿಕೊಳ್ಳಬೇಕು’ ಎಂದು ತಾಕೀತು ಮಾಡಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪ್ರಣವಾನಂದ ಸ್ವಾಮೀಜಿ `ಕಾಂಗ್ರೆಸ್ ಸರ್ಕಾರ ಈಡಗ ನಾಮದಾರಿ ಸಮುದಾಯವನ್ನು ಕೆಡಗಣಿಸಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು. `ಈ ಸರ್ಕಾರ ಬಂದು ಎರಡುವರೆ ವರ್ಷ ಆದರೂ ಕೂಡ ನಮ್ಮ ಸಮಾಜದ ಬಗ್ಗೆ ಚಿಂತನೆ ಮಾಡಿಲ್ಲ. ಹಿಂದಿನ ಸರ್ಕಾರ ಇದ್ದಾಗ ನಮ್ಮ ಸಮುದಾಯಕ್ಕೆ ಎರಡು ಮಂತ್ರಿ ಸ್ಥಾನ ನೀಡಿದ್ದರು. ಈ ಸರ್ಕಾರದಲ್ಲಿ ಒಂದು ಸಚಿವ ಸ್ಥಾನ ಮಾತ್ರ ನೀಡಲಾಗಿದೆ’ ಎಂದು ದೂರಿದರು.
`ಅಧಿಕಾರ ಹಿಡಿಯಲು ಹಿಂದುಳಿದ ವರ್ಗ ಪರಿಶಿಷ್ಟ ಜಾತಿ ಹಾಗೂ ಪಂಗಡದ ಹೆಸರು ಬಳಕೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದಮೇಲೆ ಸಮುದಾಯದ ಕಾಂಗ್ರೆಸ್ಸಿಗೆ ಆಡಿದ ಮಾತು ನೆನಪೇ ಇರುವುದಿಲ್ಲ. ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಮುಖವಾಡದಲ್ಲಿ ಸಿದ್ಧರಾಮಯ್ಯ ಅವರು ಅಧಿಕಾರ ಅನುಭವಿಸುತ್ತಿದ್ದಾರೆ’ ಎಂದು ದೂರಿದರು. `ಅವರ ಅಧಿಕಾರದ ಏಳುವರೆ ವರ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಏನು ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದರು. `ಸಿದ್ದರಾಮಯ್ಯ ಜೆಡಿಎಸ್ ನಿಂದ ಕಾಂಗ್ರೆಸ್ಸಿಗೆ ಬರುವಾಗ ನಮ್ಮ ಸಮುದಾಯದ ನಾಯಕರು ಕಾಂಗ್ರೆಸ್ಸಿನಲ್ಲಿ ಗಟ್ಟಿಯಾಗಿದ್ದರು ಆದರೆ ಸಿದ್ಧರಾಮಯ್ಯ ಅವರು ಎಲ್ಲರನ್ನೂ ಸೈಡ್ ಲೈನ್ ಮಾಡಿ ಮುಂದೆ ಬಂದರು. ನಮ್ಮ ಸಮುದಾಯವನ್ನು ಸಂಪೂರ್ಣ ಹತ್ತಿಕ್ಕಿದರು’ ಎಂದು ದೂರಿದರು.
`ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಅಹಿಂದ್ ಹೆಸರಿನಲ್ಲಿ ಸಾಕಷ್ಟು ಲಾಭ ಮಾಡಿದ್ದಾರೆ. ಆದರೆ, ಕೊಟ್ಟ ಮಾತಿನ ಪ್ರಕಾರ ಅವರು ಡಿಕೆ ಶಿವಕುಮಾರ ಅವರಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ದೆಹಲಿಯಲ್ಲಿ ನಡೆದ ಚರ್ಚೆಯ ಪ್ರಕಾರ ಸಿದ್ಧರಾಮಯ್ಯ ಅವರು ಅಧಿಕಾರ ಬಿಡಬೇಕು. ಡಿಕೆ ಶಿವಕುಮಾರ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು’ ಎಂದು ಆಗ್ರಹಿಸಿದರು. `ಡಿಕೆ ಶಿವಕುಮಾರ ಅವರು ಮುಖ್ಯಮಂತ್ರಿ ಆಗಬೇಕು ಎಂಬುದು ಅನೇಕರ ಬಯಕೆ. ನಮ್ಮ ಅಭಿಪ್ರಾಯದ ಪ್ರಕಾರವೂ ಡಿಕೆ ಶಿವಕುಮಾರ ಅವರೇ ಮುಖ್ಯಮಂತ್ರಿ ಆಗಬೇಕು. ಕುರ್ಚಿ ಕದನದಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಆಡುವುದನ್ನು ತಡೆಯಬೇಕು’ ಎಂದು ಆಗ್ರಹಿಸಿದರು.