ದರ್ಶನ್ ಅಭಿನಯದ ಡೆವಿಲ್ ಸಿನಿಮಾ ನೋಡಿ ಊರಿಗೆ ಮರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಜೊತೆಯಿದ್ದ ಮತ್ತಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಮುoಡಗೋಡಿನ ತಹಶೀಲ್ದಾರ್ ಕಚೇರಿಯಲ್ಲಿ ಗೋಪಾಲ ಎಂ, ಗೋವಿಂದ ರಾಠೋಡ್ ಹಾಗೂ ಮಂಜುನಾಥ ಅವರು ಗ್ರಾಮ ಲೆಕ್ಕಾಧಿಕಾರಿಯಾಗಿದ್ದರು. ಶನಿವಾರ ಅವರು ಡೆವಿಲ್ ಸಿನಿಮಾ ನೋಡಲು ಹುಬ್ಬಳ್ಳಿಗೆ ಹೋಗಿದ್ದರು. ಸಿನಿಮಾ ಮುಗಿಸಿ ರಾತ್ರಿ ಮುಂಡಗೋಡಿಗೆ ಮರಳುತ್ತಿದ್ದರು. ತಡಸ ಸಮೀಪದ ತಾಯವ್ವನ ಗುಡಿಯ ಬಳಿ ಅವರ ಕಾರು ಕಂದಕಕ್ಕೆ ಬಿದ್ದಿತು.
ಎಷ್ಟು ಹೊತ್ತಾದರೂ ಆ ಮೂವರು ಮನೆಗೆ ಬಾರದ ಕಾರಣ ಕುಟುಂಬದವರು ಹುಡುಕಾಟ ನಡೆಸಿದಾಗ ಕಾರು ಅಪಘಾತದ ಸುದ್ದಿ ಸಿಕ್ಕಿತು. ರಾತ್ರಿ 2.30ರ ವೇಳೆಗೆ ಕಾರು ತಲೆಕೆಳಗಾಗಿ ಬಿದ್ದಿರುವುದು ಕಾಣಿಸಿತು. ಕಾರಿನ ಬಳಿ ಗಮನಿಸಿದಾಗ ಮುಂಡಗೋಡ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಗೋಪಾಲ ಎಂ ಅವರು ಕೊನೆಯುಸಿರೆಳೆದರು. ಕಾರಿನಲ್ಲಿದ್ದ ಗೋವಿಂದ ರಾಠೋಡ್ ಹಾಗೂ ಮಂಜುನಾಥ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಅಪಘಾತ ನೋಡಿದವರು ಅವರಿಬ್ಬರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಿದರು.
ಗಾಯಗೊಂಡ ಇನ್ನಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ನಿರಂತರ ಚಿಕಿತ್ಸೆ ಮುಂದುವರೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕಾರು ಮೇಲೆತ್ತುವ ಪ್ರಯತ್ನ ಮಾಡಿದ್ದಾರೆ. ಅತಿವೇಗ ಅಪಘಾತಕ್ಕೆ ಕಾರಣ ಎಂಬ ಮಾಹಿತಿಯಿದೆ. ಸರ್ಕಾರಿ ಸೇವೆಯಲ್ಲಿದ್ದು, ಉತ್ತಮ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ನಿಧನಕ್ಕೆ ತಹಶೀಲ್ದಾರ್ ಕಚೇರಿ ನೌಕರರು ಕಂಬನಿ ಮಿಡಿದಿದ್ದಾರೆ.