ಕಾರವಾರದ ಕೋಡಿಭಾಗ ರಸ್ತೆಗೆ ಅಳವಡಿಸಿದ್ದ ಹಂಪ್ಸ್ ಹಾಳಾಗಿ ವರ್ಷ ಕಳೆದರೂ ನಗರಸಭೆ ಅದನ್ನು ಸರಿಪಡಿಸಿಲ್ಲ. ಹೀಗಾಗಿ ನಗರಸಭೆ ಈ ನಡೆಗೆ ಜಯಕರ್ನಾಟಕ ಜನಪರ ವೇದಿಕೆ ಆಕ್ರೋಶವ್ಯಕ್ತಪಡಿಸಿದೆ.
`ನಾಲ್ಕು ವರ್ಷದ ಹಿಂದೆ ಅಳವಡಿಸಿದ ಹಂಪ್ಸ್ ಹಾಳಾಗಿ ವರ್ಷ ಕಳೆದಿದೆ. ಆದರೆ, ನಗರಸಭೆ ಅಪಘಾತ ಪ್ರಮಾಣ ತಗ್ಗಿಸಲು ಮುನ್ನಚ್ಚರಿಕೆವಹಿಸಿಲ್ಲ’ ಎಂದು ಸಂಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅಸಮಧಾನವ್ಯಕ್ತಪಡಿಸಿದ್ದಾರೆ. `ಶಾಲೆ-ಕಾಲೇಜುಗಳಿರುವ ಈ ಪ್ರದೇಶದಲ್ಲಿ ಹೆಚ್ಚಿನ ಅವಘಡ ನಡೆಯುತ್ತಿದೆ. ಸುರಕ್ಷತೆಗಾಗಿ ಇಲ್ಲಿ ತುರ್ತಾಗಿ ಹಂಪ್ಸ್ ಅಳವಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.
`ಹಂಪ್ಸಿಗೆ ಇದ್ದ ಮೊಳೆಗಳು ಇದೀಗ ಹೊರ ಬಿದ್ದಿದೆ. ಅವರು ವಾಹನದ ಚಕ್ರಕ್ಕೆ ತಾಗಿ ಪದೇ ಪದೇ ಪಂಚರ್ ಆಗುತ್ತಿದೆ. ನಗರಸಭೆ ಆಯುಕ್ತರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ. ನಗರಸಭೆಯಲ್ಲಿ ಹಂಪ್ಸ ಸರಿಪಡಿಸಲು ಆರ್ಥಿಕ ಸಮಸ್ಯೆ ಇದೆಯೇ?’ ಎಂದವರು ಪ್ರಶ್ನಿಸಿದ್ದಾರೆ. `ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ’ ಎಂದು ಸಂಘಟನೆ ಪ್ರಮುಖರಾದ ರೋಷನ್ ಹರಿಕಂತ್ರ, ಸುನಿಲ್ ತಾಂಡೇಲ್, ಪ್ರದೀಪ್ ಶೆಟ್ಟಿ, ರಫೀಕ್ ಉದ್ದಾರ್, ಸುದೇಶ್ ನಾಯ್ಕ್, ರಾಹುಲ್ ತಾಂಡೇಲ್, ಮೋಹನ್ ಉಳ್ಳೇಕರ್, ವಿನಯ್ ನಾಯ್ಕ್ ಎಚ್ಚರಿಸಿದ್ದಾರೆ.