ಉತ್ತರ ಕನ್ನಡ ಜಿಲ್ಲೆಯ ಮರಳು ಅಕ್ರಮವಾಗಿ ಗೋವಾ ಸಾಗಾಟವಾಗುತ್ತಿದ್ದು, ಇದನ್ನು ಅರಿತ ಅಧಿಕಾರಿಗಳು ಗೋವಾ ನೋಂದಣಿಯ ಲಾರಿಯೊಂದನ್ನು ತಡೆದಿದ್ದಾರೆ. ಸಾಗಾಟವಾಗುತ್ತಿದ್ದ ಮರಳನ್ನು ಜಪ್ತು ಮಾಡಿದ್ದಾರೆ.
ಕಾರವಾರದಿಂದ ಗೋವಾಗೆ ಮರಳು ಸಾಗಾಟವಾಗುತ್ತಿರುವ ಬಗ್ಗೆ ಕಾರವಾರ ತಹಶೀಲ್ದಾರ್ ಕಚೇರಿಗೆ ಮಾಹಿತಿ ಬಂದಿತು. ತಹಶೀಲ್ದಾರ್ ನಿಶ್ಚಲ್ ನರೋನಾ ಅವರು ಈ ಬಗ್ಗೆ ಗಣಿ ಇಲಾಖೆಯವರಿಗೆ ಫೋನ್ ಮಾಡಿದರು. ಗಣಿ ಇಲಾಖೆ ಅಧಿಕಾರಿಗಳು ಚಿತ್ತಾಕುಲಕ್ಕೆ ಹೋದಾಗ ಅಲ್ಲಿ ಗೋವಾ ನೋಂದಣಿಯ ವಾಹನವೊಂದು ಕಾಣಿಸಿತು. ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದಾಗ ಅದರಲ್ಲಿ ಮರಳು ತುಂಬಿತ್ತು.
ಸದ್ಯ ಮರಳುಗಾರಿಕೆಗೆ ಪರವಾನಿಗೆ ಇಲ್ಲದಿರುವುದನ್ನು ಅರಿತ ಅಧಿಕಾರಿಗಳು ಅದನ್ನು ವಶಕ್ಕೆಪಡೆದರು. ಚಿತ್ತಾಕುಲಾ ಗ್ರಾಮದ ಸಾವರಪೈ ಮಜರೆಯಲ್ಲಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಅದನ್ನು ಪತ್ತೆ ಹಚ್ಚಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಜಯರಾಮ್ ಹಾಗೂ ಚಿತ್ತಾಕುಲಾ ಗ್ರಾಮ ಆಡಳಿತ ಅಧಿಕಾರಿ ಸಂತೋಷ್ ಬಾಂದೇಕರ ಈ ಕಾರ್ಯಾಚರಣೆ ನಡೆಸಿದರು. ನಂತರ ಮರಳನ್ನು ಚಿತ್ತಾಕುಲ ಗ್ರಾಮ ಪಂಚಾಯತಗೆ ಹಸ್ತಾಂತರಿಸಿದರು.