ಶರಾವತಿ ನದಿಗೆ ಅಡ್ಡಲಾಗಿ ಪಂಪ್ ಸ್ಟೋರೇಜ್ ನಿರ್ಮಾಣ ಮಾಡುವುದರಿಂದ 16 ಸಾವಿರ ಮರಗಳ ಕಡಿತವಾಗಲಿದೆ’ ಎಂದು ವಿದ್ಯುತ್ ನಿಗಮದ ಅಧಿಕಾರಿಗಳೇ ಅಧಿಕೃತ ಮಾಹಿತಿ ನೀಡಿದ್ದಾರೆ. ಅನೇಕ ವಿಜ್ಞಾನಿಗಳು ಸಹ `ಈ ಯೋಜನೆ ಅವೈಜ್ಞಾನಿಕ ಎಂದು ಪ್ರತಿಪಾದಿಸಿದ್ದಾರೆ. ಆದರೆ, ಇಂಧನ ಸಚಿವ ಕೆ ಜೆ ಜಾರ್ಜ ಅವರು ಮಾತ್ರ `ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ’ ಎಂದು ಈ ದಿನ ಅಧಿವೇಶನದಲ್ಲಿ ಸುಳ್ಳು ಹೇಳಿದ್ದಾರೆ!
`ನದಿ ಕಣಿವೆ ಪ್ರದೇಶದಲ್ಲಿ ಭೂ ಕುಸಿತದ ಅಪಾಯವಿದೆ. ಸಿಂಗಳಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಯೋಜನೆಗೆ ಅವಕಾಶ ಕೊಡುವುದು ಸರಿಯಲ್ಲ. ಪರಿಸರದ ಜೊತೆ ಆ ಭಾಗದ ರೈತರ ಜೀವನೋಪಾಯಕ್ಕೆ ಸಹ ಈ ಯೋಜನೆ ಅಪಾಯಕಾರಿ’ ಎಂದು ಅನೇಕರು ವೈಜ್ಞಾನಿಕ ಕಾರಣಗಳ ಜೊತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. `ಶರಾವತಿ ಕಣಿವೆಯು ಈಗಾಗಲೇ ಸರಣಿ ಜಲಾಶಯ ಮತ್ತು ಜಲ ವಿದ್ಯುತ ಯೋಜನೆಗಳಿಂದ ಅಪಾಯಕ್ಕೆ ಸಿಲುಕಿದೆ. ಬೇಸಿಗೆ ಅವಧಿಯಲ್ಲಿ ನದಿ ನೀರಿನ ಹರಿವು ಕಡಿಮೆ ಆಗುತ್ತದೆ. ಸಮುದ್ರದ ಉಪ್ಪು ನೀರು 18ಕಿಮೀ ಹಿಮ್ಮುಖವಾಗಿ ಶರಾವತಿ ನದಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಜನ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಗೇರುಸೊಪ್ಪೆ ಮತ್ತು ತಲಕಳಲೆ ಜಲಾಶಯಗಳ ನಡುವಿನ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸ್ಪೋಟಕ ಬಳಸುವುದು ಅಪಾಯಕಾರಿ’ ಎಂದು ತಜ್ಞರು ಹೇಳುತ್ತಿದ್ದಾರೆ. ಈ ವೈಜ್ಞಾನಿಕ ಯೋಜನೆಯ ಅನುಷ್ಠಾನದಿಂದ ಪರಿಸರ, ಜೀವಿವೈವಿಧ್ಯತೆ ಮತ್ತು ಜನಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಲಿದೆ’ ಎಂದು ವಿಜ್ಞಾನಿಗಳಾದ ಟಿ ವಿ ರಾಮಚಂದ್ರ ಮತ್ತು ಸುಭಾಷ ಚಂದ್ರನ್ ಸಹ ಹೇಳಿದ್ದಾರೆ.
ಅದಾಗಿಯೂ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ಬುಧವಾರ ನಡೆದ ಚರ್ಚೆಯಲ್ಲಿ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ ಶರಾವತಿ ಪಂಪ್ ಸ್ಟೋರೇಜ್ ಬಗ್ಗೆ ಪ್ರಶ್ನಿಸಿದ್ದು, `ಉತ್ತರ ಕನ್ನಡ ಜಿಲ್ಲೆಯ ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ 2000 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಿಂದ ಪರಿಸರಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಶರಾವತಿ ಪಂಪ್ಡ್ ಸ್ಟೋರೇಜ್ ಜಲ ವಿದ್ಯುತ್ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಆರೋಪಿಸುವವರಿಗೆ ಮಾಹಿತಿಯ ಕೊರತೆ ಇದೆ. ಜನಪ್ರತಿನಿಧಿಗಳು, ಪರಿಸರವಾದಿಗಳ ತಕಾರರು ಬಂದಾಗ ಇದನ್ನು ಗಂಭೀರವಾಗಿ ಪರಿಗಣಿಸಿ, ಸಂಬAಧಿಸಿದ ತಜ್ಞರು, ಅಧಿಕಾರಿಗಳಿಂದ ಪರಿಶೀಲಿಸಿ, ಅವರಿಂದ ವರದಿ ಪಡೆದುಕೊಂಡಿದ್ದೇನೆ. ಈಗಲೂ ಶಾಸಕರಿಗೆ ಪರಿಸರ ಹಾನಿ ಕುರಿತಂತೆ ಯಾವುದೇ ಸಂಶಯಗಳಿದ್ದಲ್ಲಿ ಅವುಗಳನ್ನು ಪರಿಹರಿಸುವ ಕಾರ್ಯ ಮಾಡಲಾಗುತ್ತದೆ’ ಎಂದು ಹೇಳಿದ್ದಾರೆ.
`ಈ ಯೋಜನೆಯಲ್ಲಿ ಸುರಂಗ ಮಾರ್ಗವನ್ನು ಮಾಡಲಾಗುವುದಿಲ್ಲ, ಬದಲಿಗೆ ಪೈಪ್ ಲೈನ್ ಅಳವಡಿಸಿ, ಆ ಪ್ರದೇಶವನ್ನು ಪುನಃ ಮೊದಲಿನ ಸ್ಥಿತಿಗೇ ತಂದು ಅರಣ್ಯಿಕರಣ ಮಾಡಲಾಗುತ್ತದೆ. ಇದಕ್ಕಾಗಿ ಕೇವಲ 25 ಎಕರೆ ಭೂಮಿ ಮಾತ್ರ ಅಗತ್ಯವಿದ್ದು, ಹೀಗಾಗಿ ಪರಿಸರದ ಮೇಲೆ ಯಾವುದೇ ಹಾನಿಯಾಗುವ ಕೆಲಸ ಮಾಡುವುದಿಲ್ಲ’ ಎಂದಿದ್ದಾರೆ. `1964 ರಲ್ಲಿ ಶರಾವತಿ ಜಲಾಶಯದ ಯೋಜನೆ ಮಾಡಿದಾಗ 1 ಲಕ್ಷ ಹೆ. ಪ್ರದೇಶ ಮುಳುಗಡೆಯಾಗಿತ್ತು, ಈಗ ವರಾಹಿಯೂ ಸೇರಿದಂತೆ 1400 ಮೆವ್ಯಾ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದೀಗ ಉಪಯೋಗಿಸಿದ ನೀರನ್ನೇ ಪುನಃ ಪಂಪ್ ಮಾಡಿ, ಪುನಃ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗೆ ಬಳಸಲು ಯೋಜನೆ ರೂಪಿಸಲಾಗಿದೆ. ಸೌರಶಕ್ತಿ, ಪವನಶಕ್ತಿ ಸೇರಿದಂತೆ ನವೀಕರಿಸಿದ ಇಂಧನ ಬಳಸುವ ಯೋಜನೆಗಳಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ, ಶೀಘ್ರವೇ ಮೊದಲನೆ ಸ್ಥಾನಕ್ಕೆ ಬರುವ ವಿಶ್ವಾಸವಿದೆ. ವರ್ಷದಿಂದ ವರ್ಷಕ್ಕೆ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದ್ದು, ನಮಗೆ ಹೆಚ್ಚಿನ ವಿದ್ಯುತ್ ಅಗತ್ಯವಿದೆ, ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಸಾವಿರ ಮೆವ್ಯಾ.ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಪವರ್ ಕಟ್ ಮಾಡದೆ ಕೃಷಿ ಪಂಪ್ ಸೆಟ್ಟುಗಳಿಗೆ ವಿದ್ಯುತ್ ನೀಡುತ್ತಿದ್ದೇವೆ’ ಎಂದು ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.