ಅನಾಧಿಕಾಲದಿoದಲೂ ಅರಣ್ಯ ಭೂಮಿ ಅತಿಕ್ರಮಿಸಿಕೊಂಡಿರುವ ಮೋಹನ ದೇಶಭಂಡಾರಿ ಅವರಿಗೆ ಆ ಜಾಗ ಬಿಟ್ಟು ತೆರಳುವಂತೆ ಅರಣ್ಯಾಧಿಕಾರಿಗಳು ಆದೇಶಿಸಿದ್ದಾರೆ. `ತಮಗೆ ನ್ಯಾಯ ಕೊಡಿಸಿ’ ಎಂದು ಮೋಹನ ದೇಶಭಂಡಾರಿ ಅವರು ನ್ಯಾಯವಾದಿ ರವೀಂದ್ರ ನಾಯ್ಕ ಅವರ ಬಳಿ ದೌಡಾಯಿಸಿದ್ದಾರೆ.
ಕುಮಟಾ ತಾಲೂಕಿನ ಬೆಳ್ಳಂಗಿ ಗ್ರಾಮದಲ್ಲಿ ಮೋಹನ ನಾರಾಯಣ ದೇಶಭಂಡಾರಿ ಅವರು ವಾಸವಾಗಿದ್ದಾರೆ. ಅನಾಧಿಕಾಲದಿಂದಲೂ ಅವರು ಅತಿಕ್ರಮಣ ಜಮೀನಿನಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಅತಿಕ್ರಮಣದಾರರ ಹೋರಾಟದಲ್ಲಿಯೂ ಮೋಹನ ದೇಶಭಂಡಾರಿ ಅವರು ಭಾಗವಹಿಸುತ್ತಿದ್ದು, ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಅವರು ಮನವಿ ಮಾಡಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅಡಿ ಅರ್ಜಿ ಸಹ ಸಲ್ಲಿಸಿದ್ದಾರೆ. ಅದಾಗಿಯೂ, ನವೆಂಬರ್ 28ರಂದು ಅವರ ಅತಿಕ್ರಮಣ ತೆರವಿಗೆ ಆದೇಶವಾಗಿದೆ. ಇದರೊಂದಿಗೆ ಕತಗಾಲ ವಲಯದ ಕೃಷ್ಣ ದೇವಪ್ಪ ನಾಯ್ಕ ಮತ್ತು ಈಶ್ವರ್ ನಾರಾಯಣ ನಾಯ್ಕ ಅವರಿಗೆ ಡಿಸೆಂಬರ್ 17 ರಂದು ವಿಚಾರಣೆಗೆ ಹಾಜಾರಾಗುವಮತೆ ನೋಟಿಸ್ ಸಹ ಬಂದಿದೆ.
`ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯನ್ನು ಒಕ್ಕಲೆಬ್ಬಿಸುವ ಪ್ರಕ್ರೀಯೆಗೆ ಕೇಂದ್ರ ಅರಣ್ಯ ಕಛೇರಿಯಿಂದ ಸಮರ್ಪಕ ಉತ್ತರ ಬರುವವರೆಗೂ ಒಕ್ಕಲೆಬ್ಬಿಸುವುದಿಲ್ಲ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ ಹಿರಾಲಾಲ್ ಅವರು ಹೇಳಿದ್ದರು. ಆದರೆ, ಆ ಮಾತು ಇದೀಗ ಸುಳ್ಳಾಗಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಒಕ್ಕಲೆಬ್ಬಿಸುವ ಕಡತಕ್ಕೆ ಸಹಿ ಮಾಡಿದ್ದಾರೆ. ಹೋಟಾಗರಾರರಿಗೆ ನೀಡಿದ ಮಾತು ಸುಳ್ಳಾಗಿದೆ ಎಂದು ಹೋರಾಟಗಾರ ಉದಯ ನಾಯ್ಕ, ಆನಂದ ಶಿವಪ್ಪ ಜೋಗಿ ಅಚನಳ್ಳಿ, ಗಣಪತಿ ಪುಟ್ಟರಮನೆ, ಪ್ರಶಾಂತ ನಾಯ್ಕ, ಹನುಮಂತ ಕನ್ನಾ ಕುಂಬಾರಗುಣಿ ಅಸಮಧಾನವ್ಯಕ್ತಪಡಿಸಿದ್ದಾರೆ.