ಶಿರಸಿ ಚಂದನ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್ ಎಂ ಹೆಗಡೆ ಅವರಿಗೆ ಅದೇ ಸಂಸ್ಥೆಯ ಮಾಜಿ ಉದ್ಯೋಗಿಯೊಬ್ಬರು ಚಪ್ಪಲಿ ಕಾಣಿಸಿದ್ದಾರೆ. ನಡು ರಸ್ತೆಯಲ್ಲಿ ಹೆಗಡೆ ಅವರನ್ನು ನಿಲ್ಲಿಸಿ ಅವರ ಮುಖಕ್ಕೆ ಎಂಜಿಲು ಉಗಿದಿದ್ದಾರೆ.
ಶಿರಸಿ ಗೋಳಿಕೊಪ್ಪದ ಲಕ್ಷ್ಮೀನಾರಾಯಣ ಮಹಾಬಲೇಶ್ವರ ಹೆಗಡೆ (58) ಅವರು ತಮಗಾದ ಅವಮಾನದಿಂದ ಕುಗ್ಗಿ ಹೋಗಿದ್ದಾರೆ. ಸಾರ್ವಜನಿಕರ ಎದುರು ತಮ್ಮನ್ನು ಅಡ್ಡಗಟ್ಟಿ ಚಪ್ಪಲಿ ತೋರಿಸಿದಲ್ಲದೇ, ಮುಖಕ್ಕೆ ಎಂಜಿಲು ಉಗಿದು ಅವಮಾನ ಮಾಡಿದ ಚಂದನ ಶಿಕ್ಷಣ ಸಂಸ್ಥೆಯ ಮಾಜಿ ಉದ್ಯೋಗಿ ಸಂತೋಷ ಕೆಪಿ ವಿರುದ್ಧ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ.
ಸದ್ಯ ವಿವೇಕಾನಂದನಗರದಲ್ಲಿ ವಾಸವಾಗಿರುವ ಸಂತೋಷ ಕೆಪಿ ಅವರು ಮೊದಲು ಚಂದನ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸಂತೋಷ ಕೆಪಿ ಅವರು ಸಹ ಶಿಕ್ಷಕರ ಜೊತೆ ಸೇರಿ ತಂಟೆ-ತಕರಾರು ಮಾಡುತ್ತಿದ್ದ ಕಾರಣ ಎಲ್ ಎಂ ಹೆಗಡೆ ಅವರು ಸಂತೋಷ ಕೆಪಿ ಅವರ ವಿರುದ್ಧ ಕ್ರಮ ಜರುಗಿಸಿದ್ದರು. ಸಂತೋಷ ಕೆಪಿ ಅವರಿಗೆ ಬುದ್ದಿ ಹೇಳಿ ಎಚ್ಚರಿಕೆಯನ್ನು ನೀಡಿದ್ದರು. ಅದರಿಂದ ಬೇಸತ್ತ ಸಂತೋಷ ಕೆಪಿ ಅವರು ಚಂದನ ಶಿಕ್ಷಣ ಸಂಸ್ಥೆಗೆ ವಿದಾಯ ಹೇಳಿ ಮತ್ತೊಂದು ಕೆಲಸಕ್ಕೆ ಸೇರಿದ್ದರು.
ಇದೇ ಚಂದನ ಶಿಕ್ಷಣ ಸಂಸ್ಥೆಯಲ್ಲಿ ಹಂಚಿನಕೆರೆಯ ಶಾಂತರಾಮ ನಾಯ್ಕ ಅವರು ಸಹ ಕೆಲಸಕ್ಕಿದ್ದರು. ಅವರು ಇದೀಗ ನಿವೃತ್ತರಾಗಿದ್ದು, ಚಂದನ ಸಂಸ್ಥೆಯವರಿoತ ತಮಗಾದ ಅನ್ಯಾಯದ ಬಗ್ಗೆ ಎಲ್ಲಾ ಕಡೆ ಹೇಳುತ್ತಿದ್ದರು. `ತಮಗೆ ಚಂದನ ಸಂಸ್ಥೆಯಿoದ ಹಣ ಬರಬೇಕು. ಅದನ್ನು ಅವರು ಸರಿಯಾಗಿ ಕೊಡುತ್ತಿಲ್ಲ’ ಎಂದು ಶಾಂತರಾಮ ನಾಯ್ಕ ಅವರು ಹೇಳಿಕೊಂಡಿದ್ದರು. ಈಗಾಗಲೇ ಚಂದನ ಶಿಕ್ಷಣ ಸಂಸ್ಥೆ ತೊರೆದಿದ್ದ ಸಂತೋಷ ಕೆಪಿ ಹಾಗೂ ಸಂಸ್ಥೆಯಿoದ ಹಣ ಬರಬೇಕು ಎನ್ನುತ್ತಿದ್ದ ಶಾಂತರಾಮ ನಾಯ್ಕ ಅವರು ಒಂದಾದರು.
ಶಾಂತರಾಮ ನಾಯ್ಕ ಅವರ ಸೂಚನೆ ಮೇರೆಗೆ ಸಂತೋಷ ಕೆಪಿ ಅವರು ತಮಗೆ ಅವಮಾನ ಮಾಡಿದ್ದ ಎಲ್ ಎಂ ಹೆಗಡೆ ಅವರ ಸೊಕ್ಕು ಇಳಿಸಲು ನಿರ್ಧರಿಸಿದರು. ಜನವರಿ 2ರ ರಾತ್ರಿ ವಿವೇಕಾನಂದ ನಗರದ ಹುಸುರಿ ರಸ್ತೆಯಲ್ಲಿ ಗಣಪತಿ ದೇವಸ್ಥಾನದ ಬಳಿ ಹೆಗಡೆ ಅವರು ಹೋಗುತ್ತಿದ್ದಾಗ ಅಲ್ಲಿಗೆ ಬಂದ ಸಂತೋಷ ಕೆಪಿ ಅವರು ಹೆಗಡೆ ಅವರ ಕಾರನ್ನು ಅಡ್ಡಗಟ್ಟಿದರು. ಕಾರಿನ ಬಾಗಿಲು ತೆಗೆಯುವಂತೆ ಸೂಚಿಸಿದರು.
ಎಲ್ ಎಂ ಹೆಗಡೆ ಅವರು ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ಸಂತೋಷ ಕೆಪಿ ಅವರು ಅಪ್ಪ-ಅಮ್ಮನ ಹೆಸರನೆಲ್ಲ ತೆಗೆದು ಬಯ್ಯಲು ಶುರು ಮಾಡಿದರು. ಕೆಟ್ಟದಾಗಿ ನಿಂದಿಸಿದ ಅವರು ತಮ್ಮ ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಹೆಗಡೆ ಅವರ ಮುಖದ ಕಡೆ ಬೀಸಿದರು. ಅದಾದ ನಂತರ ಬಾಯಲ್ಲಿದ್ದ ಎಂಜಲನ್ನು ಹೆಗಡೆ ಅವರ ಮುಖಕ್ಕೆ ಉಗಿದರು. ಸಾರ್ವಜನಿಕರ ಎದುರೇ ಈ ಎಲ್ಲಾ ವಿದ್ಯಮಾನ ನಡೆದಿದ್ದು, ಅದರಿಂದ ಎಲ್ ಎಂ ಹೆಗಡೆ ಅವರು ಆಘಾತಕ್ಕೆ ಒಳಗಾದರು. `ಈ ಹಿಂದೆ ನನ್ನ ವಿರುದ್ಧ ದೂರು ನೀಡಿ ಏನೂ ಮಾಡಲು ಆಗಲಿಲ್ಲ. ಈಗಲೂ ಏನೂ ಮಾಡಲಾಗುವುದಿಲ್ಲ’ ಎಂಬ ಅರ್ಥದಲ್ಲಿ ಸಂತೋಷ ಕೆಪಿ ಅವರು ಹೇಳಿದ್ದು, ಹೆಗಡೆರ ಮೇಲಿದ್ದ ತಮ್ಮ ಸೇಡು ತೀರಿಸಿಕೊಂಡರು.
ಎಲ್ ಎಂ ಹೆಗಡೆ ಅವರು ನಿಧಾನವಾಗಿ ಮನೆಗೆ ಹೋಗಿ ಆದ ವಿಷಯಗಳ ಬಗ್ಗೆ ಕುಟುಂಬದವರಲ್ಲಿ ಚರ್ಚಿಸಿದರು. ಕುಟುಂಬದವರ ಸಲಹೆಪಡೆದು ಸಂತೋಷ ಕೆಪಿ ಹಾಗೂ ಅವರಿಗೆ ಉತ್ತೇಜನ ನೀಡಿದ ಶಾಂತರಾಮ ನಾಯ್ಕ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಗೆ ಆಗಮಿಸಿದ ಹೆಗಡೆ ಅವರು ತಮಗಾದ ಅವಮಾನದ ಬಗ್ಗೆ ದೂರು ಸಲ್ಲಿಸಿದ್ದು, ನ್ಯಾಯಕ್ಕಾಗಿ ಅಂಗಲಾಚಿದರು. ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾನೂನು ಕ್ರಮದ ಭರವಸೆ ನೀಡಿದ್ದಾರೆ.