ಭಟ್ಕಳದ ವೃದ್ಧೆಯೊಬ್ಬರು ತಮ್ಮ ಬೆಂಕಿಯಲ್ಲಿ ಬೆಂದು ಸಾವನಪ್ಪಿದ್ದಾರೆ. ಅಡುಗೆ ಮಾಡುವಾಗ ಬಟ್ಟೆಗೆ ಅಂಟಿದ ಬೆಂಕಿ ಅವರ ಮೈ ಸುಟ್ಟಿದ್ದು, ಎರಡು ವಾರ ನರಳಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ.
ಭಟ್ಕಳದ ಮುರುಡೇಶ್ವರ ಬಳಿಯ ಉಳ್ಮಣ ಬೆಂಗ್ರೇಯಲ್ಲಿ ಮಾಸ್ತಿ ಜಟ್ಟಯ್ಯ ದೇವಾಡಿಗ ಅವರು ವಾಸವಾಗಿದ್ದರು. 88 ವರ್ಷದ ಅವರು ದಿನ ನಿತ್ಯದ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಜನವರಿ 5ರಂದು ಅವರು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಅವರ ಅರಿವಿಗೆ ಬಾರದೇ ಮನೆಯ ಒಲೆಯಲ್ಲಿದ್ದ ಬೆಂಕಿ ದೇಹ ಸ್ಪರ್ಶಿಸಿತು. ಪರಿಣಾಮ ಅವರ ಹೊಟ್ಟೆ, ಎದೆ, ಕುತ್ತಿಗೆ ಭಾಗಗಕ್ಕೆ ಭಾರೀ ಪ್ರಮಾಣದ ಗಾಯವಾಯಿತು.
ಮೈ ಸುಟ್ಟಿಕೊಂಡು ನರಳಾಡುತ್ತಿದ್ದ ಮಾಸ್ತಿ ದೇವಾಡಿಗ ಅವರನ್ನು ಪುತ್ರ ಗಣಪತಿ ದೇವಾಡಿಗ ಅವರು ಆಸ್ಪತ್ರೆಗೆ ದಾಖಲಿಸಿದರು. ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾಸ್ತಿ ದೇವಾಡಿಗ ಅವರ ಆರೈಕೆ ಮಾಡಿದರು. ಆದರೆ, ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೆಂಕಿಯಲ್ಲಿ ಬೆಂದು 15 ದಿನಗಳ ಕಾಲ ಬದುಕಿದ್ದ ಮಾಸ್ತಿ ದೇವಾಡಿಗ ಅವರು ಸೋಮವಾರ ಕೊನೆಯುಸಿರೆಳೆದರು.