ಅಂಕೋಲಾದಲ್ಲಿ ಟೈಲ್ಸ ಕೆಲಸ ಮಾಡುತ್ತಿದ್ದ ನಾರಾಯಣ ಹುಲಸ್ವಾರ್ ಅವರು ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಅದಾಗಿಯೂ, ಅವರ ಸಾವಿನ ಸಮಗ್ರ ತನಿಖೆಗೆ ಕುಟುಂಬದವರು ಆಗ್ರಹಿಸಿದ್ದಾರೆ.
ಅಂಕೋಲಾ ಶಿರಕುಳಿ ಅಸ್ಲಗದ್ದೆಯ ನಾರಾಯಣ ಪಾಂಡು ಹುಲಸ್ವಾರ್ (31) ಅವರು ಟೈಲ್ಸ ಕೆಲಸ ಮಾಡಿಕೊಂಡಿದ್ದರು. ಜನವರಿ 4ರಂದು ಅವರು `ಕೆಲಸಕ್ಕೆ ಹೋಗಿ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಎಷ್ಟು ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಜನವರಿ 9ರಂದು ಅರಣ್ಯ ಪ್ರದೇಶದಲ್ಲಿ ನಾರಾಯಣ ಹುಲಸ್ವಾರ್ ಅವರು ಶವವಾಗಿದ್ದರು.
ವಿಠ್ಠಲಘಾಟ್ ಬಳಿಯ ಕಾಡಿನಲ್ಲಿದ್ದ ಗೇರು ಮರಕ್ಕೆ ಅವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದರು. ಐದಾರು ದಿನದ ಹಿಂದೆಯೇ ನಾರಾಯಣ ಹುಲಸ್ವಾರ್ ಅವರು ಸಾವನಪ್ಪಿದ ಶಂಕೆಯನ್ನು ಅಲ್ಲಿನವರು ವ್ಯಕ್ತಪಡಿಸಿದರು. ಕೊಳೆತ ವಾಸನೆ ಆಧಾರದಲ್ಲಿ ಅಲ್ಲಿ ಹೋದವರಿಗೆ ಶವ ಕಾಣಿಸಿದ್ದು, ತಮ್ಮನ ಸಾವಿನಲ್ಲಿ ಸಂಶಯವಿರುವುದಾಗಿ ಮಂಜುನಾಥ ಹುಲಸ್ವಾರ್ ಅವರು ಹೇಳಿದರು. ಈ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.