ಕಾರವಾರ ಕೋರ್ಟ ಆವರಣದಲ್ಲಿಯೇ ಕಳ್ಳತನ ನಡೆದಿದೆ. ಅಲ್ಲಿದ್ದ ಬ್ಯಾಟರಿಯನ್ನು ಕಳ್ಳರು ಅಪಹರಿಸಿದ್ದಾರೆ.
Advertisement. Scroll to continue reading.
ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ತುರ್ತು ಅಗತ್ಯಕ್ಕೆ ಅನುಗುಣವಾಗಿ ಜನರೇಟರ್ ಅಳವಡಿಸಲಾಗಿದೆ. ಆ ಜನರೇಟರ್ 17 ಸಾವಿರ ರೂ ಮೌಲ್ಯದ ಬ್ಯಾಟರಿಯನ್ನು ಹೊಂದಿದ್ದು, ಆ ಬ್ಯಾಟರಿಯೇ ಇದೀಗ ಕಾಣೆಯಾಗಿದೆ. ಜನವರಿ 6ರ ರಾತ್ರಿಯವರೆಗೂ ಅಲ್ಲಿನ ಸಿಬ್ಬಂದಿ ಬ್ಯಾಟರಿ ನೋಡಿದ್ದಾರೆ. ಜನವರಿ 7ರಂದು ನೋಡಿದಾಗ ಅಲ್ಲಿ ಬ್ಯಾಟರಿ ಕಾಣಲಿಲ್ಲ.
ಕೋರ್ಟ ಆವರಣದ ಎಲ್ಲಾ ಕಡೆ ಹುಡುಕಿದರೂ ಬ್ಯಾಟರಿ ಸಿಕ್ಕಿಲ್ಲ. ಹೀಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿ ರವೀಂದ್ರ ನಾಯ್ಕ ಅವರು ಈ ಬಗ್ಗೆ ವಿಚಾರಿಸಿದ್ದಾರೆ. ಆ ದಿನ ರಾತ್ರಿ ಪಾಳಿಯಲ್ಲಿದ್ದ ಸಿಬ್ಬಂದಿಯನ್ನು ಮಾತನಾಡಿಸಿ ಬ್ಯಾಟರಿ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಕಾವಲು ಸಿಬ್ಬಂದಿಗೆ ಸಹ ಅರಿವಿಗೆ ಬಾರದ ಹಾಗೇ ಕಳ್ಳರು ಬ್ಯಾಟರಿ ಕದ್ದಿದ್ದಾರೆ.
ಈ ಎಲ್ಲಾ ಹಿನ್ನಲೆ ರವೀಂದ್ರ ನಾಯ್ಕ ಅವರು ಬ್ಯಾಟರಿ ಪತ್ತೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಕಾರವಾರ ಶಹರ ಠಾಣೆ ಪೊಲೀಸರು ಬ್ಯಾಟರಿ ಕಳ್ಳರ ಹುಡುಕಾಟ ಶುರು ಮಾಡಿದ್ದಾರೆ.