ಯಲ್ಲಾಪುರ-ಹಳಿಯಾಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸನ್ನು ಆನೆ ಅಡ್ಡಗಟ್ಟಿದೆ. ಭಾಗವತಿ ಸಮೀಪ ರಸ್ತೆ ಮೇಲೆ ಸಂಚರಿಸಿದ ಒಂಟಿ ಸಲಗ ಆ ಮಾರ್ಗದ ಪ್ರಯಾಣಿಕರನ್ನು ಕಾಡಿಸಿದೆ. ಕೆಲ ಸಮಯದ ನಂತರ ಆನೆ ಕಾಡು ಸೇರಿದ್ದು, ಬಸ್ಸಿನ ಜೊತೆ ಇನ್ನಿತರ ವಾಹನಗಳಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ದಾಂಡೇಲಿ ಸಮೀಪದ ಕಾಡಿನಲ್ಲಿ ಈಚೆಗೆ ಒಂಟಿ ಸಲಗದ ಓಡಾಟ ಜಾಸ್ತಿಯಾಗಿದೆ. ಬುಧವಾರ ಬೆಳಗ್ಗೆ ಯಲ್ಲಾಪುರ-ಹಳಿಯಾಳ ರಸ್ತೆಯಲ್ಲಿ ಆನೆ ಕಾಣಿಸಿದ್ದು, ಪ್ರಯಾಣಿಕರ ಜೊತೆ ಪ್ರವಾಸಿಗರು ಸಹ ಆನೆಯ ಚಲನ-ವಲನವನ್ನು ಕಣ್ತುಂಬಿಕೊoಡಿದ್ದಾರೆ. ಈ ಆನೆ ರಸ್ತೆ ತಡೆ ನಡೆಸಿದ್ದು ಬಿಟ್ಟರೆ ಯಾರಿಗೂ ಉಪದ್ರವ ನೀಡಿಲ್ಲ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ನಿರಂತರವಾಗಿ ಆನೆ ಕಾಣಿಸಿಕೊಳ್ಳುತ್ತಿದೆ. ಭಾಗವತಿ ಹಾಗೂ ಸುತ್ತಲಿನ ಜನ ಆನೆ ಕಾಟದಿಂದ ಬೇಸತ್ತಿದ್ದಾರೆ.
ವಾರದ ಹಿಂದೆ ಬೊಮ್ಮನಳ್ಳಿ-ಅಂಬಿಕಾ ನಗರದ ಬಳಿ ಆನೆ ವಾಹನವನ್ನು ಅಡ್ಡಗಟ್ಟಿತ್ತು. ಅಲ್ಲಿಯೂ ಒಂಟಿ ಸಲಗ ಓಡಾಡಿದ ದೃಶ್ಯಾವಳಿಗಳು ಸೆರೆಯಾಗಿದ್ದವು. ಕುಳಗಿ, ಬೊಮ್ಮನಹಳ್ಳಿ, ಕೇಗದಾಳ ಮತ್ತು ಭಾಗವತಿ ಗ್ರಾಮಗಳಲ್ಲಿ ಆನೆ ಓಡಾಟ ಸಹಜವಾಗಿದ್ದು, ಇಲ್ಲಿನ ಬೆಳೆಗಳನ್ನು ಆನೆ ನಾಶ ಮಾಡಿದ ನಿದರ್ಶನಗಳಿವೆ. ಹೀಗಾಗಿ ಒಂಟಿ ಸಲಗದ ಕಾಟದಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಆನೆ ಓಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕ್ರಮ ಜರುಗಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.
`ವನ್ಯಜೀವಿಗಳಿಗೆ ತೊಂದರೆ ಕೊಡಬೇಡಿ. ಫೋಟೋ ತೆಗೆಯುವ ಸಾಹಸಕ್ಕೆ ಬಿದ್ದು ಅಪಾಯ ಆಹ್ವಾನಿಸಬೇಡಿ’