ರಾಜಕೀಯವಾಗಿ ತಟಸ್ಥ ನೀತಿ ಅನುಸರಿಸಿದ್ದ ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಕಳೆದ ಎರಡು ವಾರದಿಂದ ಅನಂತಕುಮಾರ ಹೆಗಡೆ ವಿಷಯವಾಗಿ ಚರ್ಚೆ ಶುರುವಾಗಿದ್ದು, ಅವರು ಮತ್ತೆ ಸಕ್ರೀಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆರು ಬಾರಿ ಸಂಸದರಾಗಿರುವ ಅನಂತಕುಮಾರ ಹೆಗಡೆ ಅವರು ಒಮ್ಮೆ ಕೇಂದ್ರ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಆದರೆ, 2024ರ ವೇಳೆ ಅನಂತಕುಮಾರ ಹೆಗಡೆ ಅವರಿಂದ ಬಿಜೆಪಿ ಪಕ್ಷಕ್ಕೆ ಹಾನಿ ಆದ ಆರೋಪದ ಹಿನ್ನಲೆ ಪಕ್ಷ ಅವರನ್ನು ದೂರ ಮಾಡಿದ್ದು, ಟಿಕೆಟ್ ಸಹ ಕೊಟ್ಟಿರಲಿಲ್ಲ. ಚುನಾವಣಾ ಅವಧಿಯಲ್ಲಿಯೂ ಅನಂತಕುಮಾರ ಹೆಗಡೆ ಅವರನ್ನು ಮಾತನಾಡಿಸುವ ಪ್ರಯತ್ನ ನಡೆದಿರಲಿಲ್ಲ. ಹೀಗಾಗಿ ಅನಂತಕುಮಾರ ಹೆಗಡೆ ಅವರು ಬಿಜೆಪಿಯಿಂದ ದೂರವುಳಿದಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿರಲಿಲ್ಲ. ತಮ್ಮ ಪೋಸ್ಟರ್ಗಳಲ್ಲಿಯೂ ಅವರು ಬಿಜೆಪಿ ಚಿಹ್ನೆ ಹಾಗೂ ಮಾಜಿ ಸಂಸದ ಎಂಬ ಪದವನ್ನು ಬಳಸುತ್ತಿರಲಿಲ್ಲ.
ಈ ಎಲ್ಲದರ ನಡುವೆ ಅನಂತಕುಮಾರ ಹೆಗಡೆ ಅವರು ಮತ್ತೆ ರಾಜಕಾರಣಕ್ಕೆ ಬರುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ, ಬಿಜೆಪಿ ಇದನ್ನು ಅಧಿಕೃತಗೊಳಿಸಿರಲಿಲ್ಲ. ಆದರೆ, ಇದೀಗ ಅನಂತಕುಮಾರ ಹೆಗಡೆ ಅವರು ಭಟ್ಕಳದಲ್ಲಿ ಭಾಷಣ ಮಾಡಲು ಒಪ್ಪಿಕೊಂಡಿದ್ದಾರೆ. ಮಾರ್ಚ 8ರಂದು ಭಟ್ಕಳದಲ್ಲಿ ನಡೆಯಲಿರುವ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಅನಂತಕುಮಾರ ಹೆಗಡೆ ಅವರು ಭಾಗವಹಿಸಲಿದ್ದಾರೆ. ಪ್ರಖರ ವಾಗ್ಮಿಯಾಗಿರುವ ಅನಂತಕುಮಾರ ಹೆಗಡೆ ಅವರು ಸೂಕ್ಷö್ಮ ಪ್ರದೇಶವಾದ ಭಟ್ಕಳದಲ್ಲಿ ಭಾಷಣಕ್ಕೆ ಆಗಮಿಸುತ್ತಿರುವುದು ಅವರ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಭಟ್ಕಳದಿಂದಲೇ ಅನಂತಕುಮಾರ ಹೆಗಡೆ ಅವರು ತಮ್ಮ ರಾಜಕಾರಣದ ಇನ್ನೊಂದು ಆಯಾಮ ಶುರು ಮಾಡಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಕೇಳಿ ಬರುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಅನಂತಕುಮಾರ ಹೆಗಡೆ ಅವರು ಸಕ್ರಿಯ ರಾಜಕಾರಣದಿಂದ ದೂರವಿದ್ದಾರೆ. ಅವರು ಸಂಸದರಾಗಿದ್ದ ಅವಧಿಯಲ್ಲಿಯೂ ಜಿಲ್ಲೆಯ ರಾಜಕಾರಣದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದಾಗ ಸಹ ಅನಂತಕುಮಾರ ಹೆಗಡೆ ಅವರು ಆಗಮಿಸದಿರುವುದು ಆಕ್ಷೇಪಕ್ಕೆ ಕಾರಣವಾಗಿದ್ದು, ಅದಾದ ನಂತರ ಬಿಜೆಪಿ ಅನಂತಕುಮಾರ ಹೆಗಡೆ ಅವರಿಗೆ ಲೋಕಸಭಾ ಟಿಕೆಟ್ ಸಹ ಕೊಟ್ಟಿರಲಿಲ್ಲ.
ಅದಾಗಿಯೂ, ಲೋಕಸಭಾ ಚುನಾವಣೆ ಮುಗಿದ ತಿಂಗಳುಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ಅನಂತಕುಮಾರ ಹೆಗಡೆ ಅವರು ಸಕ್ರೀಯರಾಗಿದ್ದರು. ಅದಾದ ನಂತರ ಅವರು ನ್ಯಾನ್ಯೋ ಟೆಕ್ನಾಲಜಿ ಆಧಾರಿತ ಔಷಧಿ ಕಂಪನಿಯ ಪಾಲುದಾರರಾಗಿದ್ದು, ಆ ಕುರಿತಾದ ಸಂಶೋಧನೆಗೆ ಒತ್ತು ನೀಡಿದ್ದರು. ಕೆಲವೇ ಕೆಲವು ಮಾಧ್ಯಮದಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಅನಂತಕುಮಾರ ಹೆಗಡೆ ಅವರು ತಮ್ಮ ಸಂಶೋಧನೆಯ ಬಗ್ಗೆ ಮಾಹಿತಿ ಹಂಚಿಕೊAಡಿದ್ದರು. ಅದಾದ ಬಳಿಕ ಪಕ್ಷ ಸಂಘಟನಾ ಚಟುವಟಿಕೆಗಳಿಂದಲೂ ಅವರು ದೂರವೇ ಇದ್ದರು.
ಸದ್ಯದ ಮಾಹಿತಿಗಳ ಪ್ರಕಾರ ಸಂಘ ಪರಿವಾರದ ಹಿರಿಯ ನಾಯಕರು ಅನಂತಕುಮಾರ ಹೆಗಡೆ ಅವರ ಮನವೊಲೈಸಿದ್ದು, ಅವರ ಮಾತಿನಂತೆ ಅನಂತಕುಮಾರ ಹೆಗಡೆ ಅವರು `ಹಿಂದೂ ಸಂಗಮ’ ವೇದಿಕೆಯೇರಲು ಒಪ್ಪಿದ್ದಾರೆ. ಅನಂತಕುಮಾರ ಹೆಗಡೆ ಅವರ ಆಗಮನದ ಹಿನ್ನಲೆ ಭಟ್ಕಳದಲ್ಲಿ ವಿವಿಧ ಬಗೆಯ ತಯಾರಿಗಳು ನಡೆಯುತ್ತಿವೆ. ಬೈಕ್ ಶೋ, ಮೆರವಣಿಗೆಗಳ ಸಿದ್ಧತೆ ನಡೆಸಲು ಸಂಘಟಕರು ಸಜ್ಜಾಗಿದ್ದಾರೆ.