ಮುರುಡೇಶ್ವರದಲ್ಲಿ ಮಹಿಳೆಯರ ಮೈ ಮಾರಾಟ ದಂಧೆಯಲ್ಲಿ ತೊಡಗಿದ್ದ ಸುರೇಶ ನಾಯ್ಕ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ರಾತ್ರಿ ವೇಳೆ ಇಲ್ಲಿನ ಭಾರತ್ ಗೆಸ್ಟ್ ಹೌಸ್’ನಲ್ಲಿ ನಡೆಯುತ್ತಿದ್ದ ಕಳ್ಳಾಟವನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.
ಭಟ್ಕಳದ ಕಾಯ್ಕಿಣಿ ಹೆರಾಡಿಯ ಸುರೇಶ ನಾಗಪ್ಪ ನಾಯ್ಕ ಅವರು ಮುರುಡೇಶ್ವರಕ್ಕೆ ಹೋಗುವ ಶೆಟ್ಟರಕೇರಿಯ ಭಾರತ್ ಗೆಸ್ಟ್ ಹೌಸ್’ನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಅದರ ಜೊತೆ ಶಿವಮೊಗ್ಗದ ಮಹಿಳೆಯರಿಬ್ಬರನ್ನು ಅವರು ಕಳ್ಳ ಸಾಗಾಣಿಕೆ ಮೂಲಕ ಮುರುಡೇಶ್ವರಕ್ಕೆ ಕರೆ ತಂದಿದ್ದರು. ತಾವು ಕೆಲಸ ಮಾಡುವ ಭಾರತ್ ಗೆಸ್ಟ್ ಹೌಸ್’ನ ರೂಂ ನಂ 3ರಲ್ಲಿ ಮಹಿಳೆಯರಿಬ್ಬರನ್ನು ಕೂಡಿ ಹಾಕಿದ್ದರು.
ಆ ಮಹಿಳೆಯರಿಬ್ಬರಿಗೂ ಹಣದ ಆಮೀಷ ಒಡ್ಡಿ ಅವರನ್ನು ವೇಶ್ಯಾವಾಟಿಕೆ ದಂಧೆಗಿಳಿಸಿದ್ದರು. ಆ ಮಹಿಳೆಯರಿಬ್ಬರ ಆರ್ಥಿಕ ಪರಿಸ್ಥಿತಿ ದುರುಪಯೋಗಪಡಿಸಿಕೊಂಡು ಸುರೇಶ ನಾಯ್ಕ ಅವರು ದುಡ್ಡು ಮಾಡುತ್ತಿದ್ದರು. ಮಹಿಳೆರಿಗೆ ಹೆದರಿಸಿ-ಬೆದರಿಸಿ ಅವರನ್ನು ಬೇರೆ ಬೇರೆ ಪುರುಷರ ಜೊತೆ ಕಳುಹಿಸುತ್ತಿದ್ದರು. ಮುರುಡೇಶ್ವರ ಸಿಪಿಐ ಜಗದೀಶ ಹಂಚಿನಾಳ ಅವರಿಗೆ ಈ ವಿಷಯ ಅರಿವಿಗೆ ಬಂದಿತು. ಈ ಹಿನ್ನಲೆ ಫೆ 19ರ ರಾತ್ರಿ 10.50ಕ್ಕೆ ಅವರು ಆ ಲಾಡ್ಜಿನ ಮೇಲೆ ದಾಳಿ ನಡೆಸಿದರು.
ಮಹಿಳೆಯರಿಬ್ಬರ ಜೊತೆ ಮೂವರು ಪುರುಷರು ಸರಸ ಸಲ್ಲಾಪದಲ್ಲಿ ತೊಡಗಿರುವುದನ್ನು ಪೊಲೀಸರು ನೋಡಿದರು. ಆ ಮಹಿಳೆಯರಿಬ್ಬರನ್ನು ಅಲ್ಲಿಂದ ರಕ್ಷಿಸಿದರು. ನಂತರ ಈ ಅನೈತಿಕ ವ್ಯವಹಾರಕ್ಕೆ ಕಾರಣರಾದ ಸುರೇಶ ನಾಯ್ಕ ಅವರನ್ನು ಬಂಧಿಸಿ, ಜೈಲಿಗೆ ಕಳುಹಿಸಿದರು.