ಕೈಗಾ-ಬoಕಾಪುರ ರಸ್ತೆ ಯಲ್ಲಾಪುರದ ಬಳಿ ವ್ಯಾಪಕ ಪ್ರಮಾಣದಲ್ಲಿ ಹದಗೆಟ್ಟಿದ್ದು, ಜನಾಗ್ರಹಕ್ಕೆ ಮಣಿದು ಸರ್ಕಾರ ಪ್ಯಾಚ್ ವರ್ಕ ಕೆಲಸ ಮಾಡಿಸಿದೆ. ಆದರೆ, ರಸ್ತೆ ದುರಸ್ಥಿ ನಡೆದ ಎರಡೇ ವಾರದಲ್ಲಿ ಆ ರಸ್ತೆ ಮತ್ತೆ ಹದಗೆಟ್ಟಿದೆ. ಸರ್ಕಾರ ಸೂಚಿಸಿದ ಕೆಲಸ ಮಾಡುವಲ್ಲಿ ಗುತ್ತಿಗೆದಾರ ಎಡವಿದ್ದು, ಜನ ಸಹ ಆ ರಸ್ತೆಯಲ್ಲಿ ಎಡವಿ ಬಿದ್ದು ಗಾಯ ಮಾಡಿಕೊಳ್ಳುತ್ತಿದ್ದಾರೆ.
ಕೈಗಾ ಬಂಕಾಪುರ ರಾಜ್ಯ ಹೆದ್ದಾರಿಯೂ ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ವಿವಿಧ ಪ್ರದೇಶಗಳಿಂದ ಹಾದು ಹೋಗುತ್ತದೆ. ರವೀಂದ್ರ ನಗರದಿಂದ ಹಣಶೆಟ್ಟಿಕೊಪ್ಪ-ಕರಡೊಳ್ಳಿ ಕ್ರಾಸಿನವರೆಗೆ ಈ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದೆ. ಇದನ್ನು ಗಮನಿಸಿದ ಸರ್ಕಾರ ರಸ್ತೆ ಸುಧಾರಣಾ ಕಾಮಗಾರಿಯನ್ನು ಸಹ ನಡೆಸಿದೆ. ಆದರೆ, ರಸ್ತೆ ಸುಧಾರಣೆ ನಡೆದ ಎರಡೇ ವಾರದಲ್ಲಿ ಮೊದಲಿಗಿಂತಲೂ ದೊಡ್ಡ ದೊಡ್ಡ ಹೊಂಡಗಳು ಅಲ್ಲಿ ಹುಟ್ಟಿಕೊಂಡಿವೆ.
ಸದ್ಯ ಪ್ಯಾಚ್ ವರ್ಕ ಕಾಮಗಾರಿ ನಡೆದು ಎರಡು ತಿಂಗಳಾಗಿದ್ದು, ನಿತ್ಯವೂ ಒಂದಿಲ್ಲೊoದು ಅಪಘಾತಗಳಿಂದ ಜನ ಬೇಸತ್ತಿದ್ದಾರೆ. `ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದರಿಂದ ಗುತ್ತಿಗೆದಾರರಿಗೆ ಹಣಪಾವತಿ ಮಾಡಬಾರದು’ ಎಂದು ಯಲ್ಲಾಪುರದ ಲಾರಿ ಮಾಲಕರ ಸಂಘದವರು ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. `ಗುತ್ತಿಗೆದಾರರಿಂದ ಇನ್ನೊಮ್ಮೆ ಈ ಕೆಲಸ ಸರಿಯಾಗಿ ಮಾಡಿಸಬೇಕು. ಕಳಪೆ ಕಾಮಗಾರಿಯ ಪರಿಣಾಮ ಎಲ್ಲಡೆ ರಸ್ತೆ ಕಿತ್ತು ಹೋಗಿದ್ದು, ಅದನ್ನು ಸರಿಪಡಿಸುವಂತೆ ಸೂಚಿಸಬೇಕು. ಸರ್ಕಾರಿ ಬೊಕ್ಕಸಕ್ಕೆ ನಷ್ಟ ಮಾಡಿ ಜನರ ಓಡಾಟಕ್ಕೆ ಸಂಚಕಾರ ತಂದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ರಸ್ತೆ ಕೆಲಸ ಸರಿಯಾಗಿ ಆಗದೇ ಇದ್ದರೆ ಯಲ್ಲಾಪುರ ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಜಯ ಎಸ್ ಮರಾಠಿ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸವುದಾಗಿ ಸಂಘದ ಗೌರವ ಅಧ್ಯಕ್ಷ ಮಹೇಶ ನಾಯ್ಕ, ಮುರಳಿ ರಾವಲ್, ಸಯ್ಯದ್ ಸಾಜೀದ್ ಅವರು ಎಚ್ಚರಿಕೆ ರವಾನಿಸಿದ್ದಾರೆ. `ತುರ್ತು ಕ್ರಮ ಆಗದೇ ಇದ್ದರೆ ಹೋರಾಟ ಅನಿವಾರ್ಯ’ ಎಂದು ಸುಜಯ ಮರಾಠಿ ಅವರು ಎಚ್ಚರಿಸಿದ್ದಾರೆ.