ಹೊನ್ನಾವರದ ಮಾಳ್ಕೋಡಿನಲ್ಲಿ ನಡೆದ ರಾಮಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ವಿರುದ್ಧ ಕೆಟ್ಟದಾಗಿ ನಿಂದಿಸಿದ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ರಾಮಪ್ಪ ವಿರುದ್ಧ ಕಾನೂನು ಕ್ರಮವಾಗಿದೆ. ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತರ ಪರಿಷತ್ ನೀಡಿದ ದೂರಿನ ಆಧಾರದಲ್ಲಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯಲ್ಲಿ ರಾಮಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹೊನ್ನಾವರದ ಮಾಳ್ಕೋಡುವಿನಲ್ಲಿ ರಾಮ ಮಂದಿರ ಚಾರಿಟೇಬಲ್ ಟ್ರಸ್ಟಿನವರು ಜನವರಿ 29ರಿಂದ 31ರವರೆಗೆ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ ಮೂರನೇ ದಿನ ವೇದಿಕೆ ಏರಿದ ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತಾಧಿಕಾರಿ ರಾಮಪ್ಪ ಅವರು ಸಾವಿರಾರು ಜನರ ಮುಂದೆ ಬ್ರಾಹ್ಮಣರನ್ನು `– ಮಕ್ಕಳು’ ಎಂದು ಬೈದಿದ್ದರು. ಅನೇಕ ಬಾರಿ ಅದೇ ಮಾತನ್ನು ಅವರು ಪುನರುಚ್ಚರಿಸಿದ್ದರು. ಜೊತೆಗೆ `ಬ್ರಾಹ್ಮಣರೆಲ್ಲರೂ — ಆಗಿ ಸಾಯುತ್ತಾರೆ’ ಎಂದು ಶಫಿಸಿದ್ದರು.
ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ರಾಮಪ್ಪ ಅವರು ದುರುದ್ದೇಶದಿಂದ ಬ್ರಾಹ್ಮಣರ ಅವಹೇಳನ ಮಾಡಿದ್ದು, ಆ ವಿಡಿಯೋ ಎಲ್ಲಡೆ ವೈರಲ್ ಆಗಿತ್ತು. ಜನವರಿ 29ರಿಂದ 31ರವರೆಗೆ ನಡೆದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದು, ಜನರಲ್ಲಿ ದ್ವೇಷ ಭಾವನೆ ಮೂಡಿಸುವುದಕ್ಕಾಗಿ ರಾಮಪ್ಪ ಅವರು ಈ ರೀತಿ ಭಾಷಣ ಮಾಡಿದ ಬಗ್ಗೆ ದೂರಲಾಗಿದೆ. ರಾಜ್ಯದ ಎಲ್ಲಡೆ ಅವರ ಭಾಷಣ ವೈರಲ್ ಆಗಿದ್ದು, ಅದನ್ನು ನೋಡಿ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತರ ಪರಿಷತ್ ಅಧ್ಯಕ್ಷರೂ ಆಗಿರುವ ಸಾಗರದ ಅರ್ಚಕ ರಾಜೇಂದ್ರ ಪ್ರಸಾದ ವೆಂಕಟ್ರಮಣ ಭಟ್ಟ ಅವರು ಈ ಬಗ್ಗೆ ಕಾನೂನು ಹೋರಾಟಕ್ಕೆ ಮುಂದಾಗಿದ್ದರು.
ಬ್ರಾಹ್ಮಣರ ವಿರುದ್ಧ ನಿಂದನೀಯ ಪದ ಬಳಕೆ ಮಾಡಿದ ಕಾರಣ ಎಲ್ಲಡೆ ಆಕ್ರೋಶವೂ ವ್ಯಕ್ತವಾಗಿತ್ತು. ಅನೇಕರು ಈ ಘಟನೆಯನ್ನು ಖಂಡಿಸಿದ್ದರು. ಅದರಂತೆ, ಅರ್ಚಕ ರಾಜೇಂದ್ರ ಪ್ರಸಾದ ವೆಂಕಟ್ರಮಣ ಭಟ್ಟ ಅವರು ಸಾಗರದಲ್ಲಿ ರಾಮಪ್ಪ ಅವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಆ ಪ್ರಕರಣ ತನಿಖೆಗಾಗಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಗೆ ವರ್ಗವಾಗಿದೆ.