ಮಾಟ-ಮಂತ್ರ ಮಾಡುವ ನೆಪದಲ್ಲಿ ಮನೆ ಪ್ರವೇಶಿಸಿದ ಮಂತ್ರವಾದಿಯೊಬ್ಬರು ಶಿರಸಿಯ ಮಹಿಳೆಯೊಬ್ಬರ ಮೈ ಮುಟ್ಟಿದ್ದಾರೆ. ಸಾಕಷ್ಟು ಬಾರಿ ಅನ್ಯಾಯಕ್ಕೆ ಒಳಗಾದ ಮಹಿಳೆಗೆ ವಿಡಿಯೋ ಕಾಲ್ ಮಾಡಿದ ಆಕೆಯ ಪತಿ ಮೂರು ಬಾರಿ `ತಲಾಕ್’ ಹೇಳಿ ಸಂಬoಧ ಮುರಿದುಕೊಂಡಿದ್ದಾರೆ!
ಶಿರಸಿಯ ಮರಾಠಿಕೊಪ್ಪದ ವೈಭವ ಕಾಲೋನಿಯಲ್ಲಿ ನಸೀಬಾ ಶೇಖ್ (22) ಅವರು ವಾಸವಾಗಿದ್ದಾರೆ. 2023ರ ಜನವರಿ 15ರಂದು ಅವರು ಶಿರಸಿ ರಾಮನಬೈಲಿನ ಅರ್ಬಾಜ್ ಶೇಖ್ ಅವರನ್ನು ಮದುವೆ ಆಗಿದ್ದಾರೆ. ಮಂಗಳೂರಿನಲ್ಲಿ ಅವರಿಬ್ಬರ ಮದುವೆ ನಡೆದಿದ್ದು, ಮದುವೆ ವೇಳೆ ನಸೀಬಾ ಶೇಖ್ ಕಡೆಯುವರು 25 ಗ್ರಾಂ ಬಂಗಾರದ ಚೈನ್, ಉಂಗುರ ಹಾಗೂ 1 ಲಕ್ಷ ರೂ ಮೌಲ್ಯದ ಮನೆ ಬಳಕೆ ವಸ್ತುಗಳ ಉಡುಗರೆಯಾಗಿ ನೀಡಿದ್ದಾರೆ. ಜೊತೆಗೆ ಮದುವೆ ಮಂಟಪದ ಹಾಜಿ ಶೇಖ್ ಸಾಬು ಸಾಹೇಬ್ ಟ್ರಸ್ಟಿನವರು 50 ಗ್ರಾಂ ತೂಕದ ಬಂಗಾರದ ನೆಕ್ಲೇಸ್ ಹಾಗೂ ಕಿವಿಯೋಲೆ ಉಡುಗರೆಯಾಗಿ ನೀಡಿದ್ದಾರೆ. ಮದುವೆ ನಂತರ ಒಂದು ವರ್ಷಗಳ ಕಾಲ ನಸೀಬಾ ಶೇಖ್ ಅವರು ರಾಮನಬೈಲಿನ ಗಂಡನ ಮನೆಯಲ್ಲಿ ವಾಸವಾಗಿದ್ದು, ಈ ವೇಳೆ ಸಾಕಷ್ಟು ಹಿಂಸೆ ಅನುಭವಿಸಿದ್ದಾರೆ.
ರಾಮನಬೈಲಿನಲ್ಲಿ ನಸೀಬಾ ಶೇಖ್ ಅವರು ವಾಸವಾಗಿದ್ದ ಗಂಡನ ಮನೆಯಲ್ಲಿ ಅರ್ಬಾಜ್ ಶೇಖ್, ಮಾವ ಅಬ್ದುಲ್ ಘನಿ ಶೇಖ್, ಅತ್ತೆ ಅಮೀನಾ ಅಬ್ದುಲ್ ಘನಿ ಶೇಖ್, ನಾದಿನಿ ಸಮೀಯಾ ಎಜಾಜ್ ಶೇಖ್ ಹಾಗೂ ಮೈದುನ ಫೈಜಾನ್ ಅಬ್ದುಲ್ ಘನಿ ಶೇಖ್ ಒಟ್ಟಿಗೆ ವಾಸವಾಗಿದ್ದರು. ಮದುವೆ ಆದ ಹೊಸತರಲ್ಲಿ ಎಲ್ಲರೂ ಒಳ್ಳೆಯರಂತೆ ನಟಿಸಿದ್ದು, ಮೂರು ತಿಂಗಳ ನಂತರ ತಮ್ಮ ಅಸಲಿ ಮುಖ ಪ್ರದರ್ಶಿಸಿದರು. ಅವರೆಲ್ಲರೂ ಸೇರಿ ನಸೀಬಾ ಶೇಖ್ ಅವರಿಗೆ ನಿಂದಿಸಲು ಶುರು ಮಾಡಿದ್ದರು. ಸಣ್ಣಪುಟ್ಟ ವಿಷಯಕ್ಕೆ ಜಗಳ, ಹಿಂಸೆ, ಬೈಗುಳ ಸಾಮಾನ್ಯವಾಗಿದ್ದು ಅದನ್ನು ನಸೀಬಾ ಶೇಖ್ ಅವರು ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದರು. ಈ ನಡುವೆ `ನಸೀಬಾ ಶೇಖ್ ಅವರಿಗೆ ದೆವ್ವ ಹಿಡಿದಿದೆ’ ಎಂದು ಅವರ ಮಾವ ಅಬ್ದುಲ್ ಘನಿ ಶೇಖ್ ಪುಕಾರು ತೆಗೆದರು. ದೆವ್ವ ಓಡಿಸುವುದಕ್ಕಾಗಿ ವಿಜಯಪುರದಿಂದ ಅನ್ವರ ಹುಸೇನ್ ಹಾಗೂ ಶಿವಮೊಗ್ಗದ ಶಬ್ಬೀರ್ ಅಬ್ದುಲ್ ವಹಾಬ್ ಎಂಬ ಮಂತ್ರವಾದಿಯನ್ನು ಕರೆಯಿಸಿದರು. ಈ ಸನ್ನಿವೇಶ ದುರುಪಯೋಗಪಡಿಸಿಕೊಂಡ ಮಂತ್ರವಾದಿ ಅನ್ವರ ಹುಸೇನ್ ಅವರು ನಸೀಬಾ ಶೇಖ್ ಅವರ ಅಂಗಾಗ ಸ್ಪರ್ಶ ಮಾಡಿ, ದೈಹಿಕ ಹಿಂಸೆ ನೀಡಿದರು. ಮತ್ತೊಬ್ಬ ಮಂತ್ರವಾದಿ ಶಬ್ಬೀರ್ ಅಬ್ದುಲ್ ವಹಾಬ್ ಬೆತ್ತದಿಂದ ಬಾಸುಂಡೆ ಬರುವ ರೀತಿ ಹೊಡೆದು ಕೂಡಿ ಹಾಕಿದ್ದರು.
ಎರಡು ತಿಂಗಳ ಕಾಲ ಗೃಹ ಬಂಧನದಲ್ಲಿದ್ದ ನಸೀಬಾ ಶೇಖ್ ಅವರ ಕೊಲೆ ಪ್ರಯತ್ನವೂ ನಡೆಯಿತು. ನಸೀಬಾ ಶೇಖ್ ಅವರ ಬಳಿಯಿದ್ದ 70 ಗ್ರಾಂ ತೂಕದ ಬಂಗಾರವನ್ನು ಅವರ ಅತ್ತೆ ಅಮೀನಾ ಅಬ್ದುಲ್ ಘನಿ ಶೇಖ್ ಕಸಿದುಕೊಂಡರು. ಅದಾದ ನಂತರ ಆ ಕುಟುಂಬದವರೆಲ್ಲರೂ ಸೇರಿ ಮಂತ್ರವಾದಿ ಸಹಾಯದಿಂದ ನಸೀಬಾ ಶೇಖ್ ಅವರಿದ್ದ ಕೋಣೆಯಲ್ಲಿ ಮೆಣಸಿನ ಹೊಗೆ ಹಾಕಿದರು. ಮೆಣಸಿನ ಹೊಗೆ ಸೇವಿಸಿ ಅಸ್ವಸ್ಥರಾದ ನಸೀಬಾ ಶೇಖ್ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ಈ ವೇಳೆ ಅಲ್ಲಿ ನಸೀಬಾ ಶೇಖ್ ಅವರ ತಂದೆ ಆಗಮಿಸಿ ಅವರ ಜೀವ ಕಾಪಾಡಿದರು. ಆಸ್ಪತ್ರೆ ಸೇರಿದ ನಸೀಬಾ ಶೇಖ್ ಅವರು ಚೇತರಿಸಿಕೊಂಡಿದ್ದು, ತಮ್ಮ ವೈಭವ ಕಾಲೋನಿಯಲ್ಲಿರುವ ತವರುಮನೆಯಲ್ಲಿ ಕಾಲ ಕಳೆದರು. ಈ ವೇಳೆ ತವರುಮನೆಗೆ ಬಂದ ನಸೀಬಾ ಶೇಖ್ ಅವರ ಪತಿ ಅರ್ಬಾಜ್ ಶೇಖ್ ಅವರು ಕುಟುಂಬದವರ ಮನವೊಲೈಸಿ ಪತ್ನಿಯನ್ನು ಕರೆದೊಯ್ದರು. ಅವರಿಬ್ಬರು ಸೇರಿ ರಾಮನಬೈಲಿನ ಸರ್ಫಾಜ್ ಮಂಜಿಲ್ ಅವರಿಂದ ಬಾಡಿಗೆ ಮನೆಪಡೆದು ಸಂಸಾರ ಶುರು ಮಾಡಿದರು. 2025ರ ಮೇ 21ರಂದು ನಸೀಬಾ ಶೇಖ್ ಅವರಿಗೆ ಹೆಣ್ಣು ಮಗು ಜನಿಸಿತು. ಆದರೆ, ಆ ಮಗುವಿನ ಆರೈಕೆಗೆ ಅರ್ಬಾಜ್ ಶೇಖ್ ಒಪ್ಪಲಿಲ್ಲ. ಪತ್ನಿಯನ್ನು ಸಹ ಅವರು ದೂರ ಮಾಡಿದ್ದು, ಇದರಿಂದ ನೊಂದ ನಸೀಬಾ ಶೇಖ್ ಅವರು ಉಡುಪಿಯಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿ ಆಶ್ರಯಪಡೆದರು.
2025ರ ಸೆಪ್ಟೆಂಬರಿನಲ್ಲಿ `ತನ್ನ ಬಂಗಾರ ತನಗೆ ಕೊಡಿ’ ಎಂದು ನಸೀಬಾ ಶೇಖ್ ಮನವಿ ಮಾಡಿದರು. `ಸ್ವಲ್ಪ ದಿನ ಬಿಟ್ಟು ಕೊಡುವೆ’ ಎಂದು ಗಂಡನ ಕುಟುಂಬದವರು ಹೇಳಿದರು. ಈ ಎಲ್ಲದರ ನಡುವೆ 2026ರ ಮಾರ್ಚ 3ರಂದು ಅರ್ಬಾಜ್ ಶೇಖ್ ಅವರು ವಿಡಿಯೋ ಕಾಲ್ ಮಾಡಿ, `ಒಡವೆ ಕೊಡುವುದಿಲ್ಲ’ ಎಂದು ಬೆದರಿಸಿದರು. ವಿಡಿಯೋ ಕಾಲ್ ಮೂಲಕವೇ ಮೂರು ಬಾರಿ `ತಲಾಕ್’ ಎಂದು ಉಚ್ಚರಿಸುವ ಮೂಲಕ ದಾಪಂತ್ಯ ಜೀವನಕ್ಕೆ ಕೊನೆ ಹಾಡಿದರು. ತಮಗಾದ ಅನ್ಯಾಯ, ದೈಹಿಕ ಹಿಂಸೆ, ಗಂಡ ಮಾಡಿದ ದ್ರೋಹದ ಬಗ್ಗೆ ನಸೀಬಾ ಶೇಖ್ ಅವರು ಪೊಲೀಸರ ಬಳಿ ವಿವರಿಸಿದರು. ಮಂತ್ರವಾದಿಗಳಿಬ್ಬರ ಜೊತೆ ಅರ್ಬಾಜ್ ಶೇಖ್ ಅವರ ಕುಟುಂಬದವರ ವಿರುದ್ಧ ಶಿರಸಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.