ಹಳಿಯಾಳದ ಸುನೀಲ ಪಾಟೀಲ್ ಅವರ ಕಾಟ ಸಹಿಸಲಾಗದೇ ಅವರ ಪತ್ನಿ ಮಾಯಾ ಪಾಟೀಲ್ ಅವರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡಿದ್ದಾರೆ. ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಆಗಲಿಲ್ಲ.
ಹಳಿಯಾಳದ ಆಶ್ರಯನಗರದಲ್ಲಿ ವಿಠ್ಠಲ ಕೃಷ್ಣಾಜಿ ಸೂಂರ್ಯವAಶಿ ಅವರು ವಾಸವಾಗಿದ್ದಾರೆ. ಅವರು 20 ವರ್ಷಗಳ ಹಿಂದೆ ತಮ್ಮ ಮಗಳಾದ ಮಾಯಾ ಅವರನ್ನು ಮುರ್ಕುವಾಡದ ಸುನೀಲ ಸಂಭಾಜಿ ಪಾಟೀಲ ಅವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಆ ಕಾಲದಲ್ಲಿಯೇ ಗುರು-ಹಿರಿಯರ ಸಮ್ಮುಖದಲ್ಲಿ ಅದ್ಧೂರಿ ಮದುವೆ ಮಾಡಲಾಗಿದ್ದು, ಅದಾಗಿಯೂ ಸುನೀಲ ಪಾಟೀಲ್ ಅವರು ಮಾಯಾ ಅವರನ್ನು ನಿತ್ಯವೂ ಹಿಂಸಿಸುತ್ತಿದ್ದರು.
ಅನಗತ್ಯ ಹಿಂಸೆ, ದೈಹಿಕ ಥಳಿತಕ್ಕೆ ಒಳಗಾದ ಮಾಯಾ ಪಾಟೀಲ ಅವರು ಸಾಕಷ್ಟು ನೊಂದಿದ್ದರು. ಹೀಗಿದ್ದರೂ ಜನವರಿ 19ರಂದು ಸುನೀಲ ಪಾಟೀಲ್ ಅವರು ಇನ್ನಷ್ಟು ಹಿಂಸೆ ನೀಡಿದ್ದು, `ನಿನ್ನಿಂದ ಏನೂ ಪ್ರಯೋಜನವಿಲ್ಲ’ ಎಂದು ಪತ್ನಿಗೆ ನಿಂದಿಸಿದ್ದರು. `ಸಾಯುವುದಾದರೆ ಸಾಯಿ’ ಎಂದು ಆತ್ಮಹತ್ಯೆಗೆ ಪ್ರಚೋದಿಸಿದ್ದರು. ಈ ಹಿನ್ನಲೆ ಮನೆ ಹಿಂದಿನ ಹಿತ್ತಲಿಗೆ ಹೋದ ಮಾಯಾ ಪಾಟೀಲ್ ಅವರು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡರು.
ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ. ಫೆ 2ರಂದು ಅವರು ನರಳುತ್ತಲೇ ಕೊನೆಯುಸಿರೆಳೆದರು. ಪತಿ ನೀಡಿದ ಕಿರುಕುಳದಿಂದಲೇ ಮಾಯಾ ಪಾಟೀಲ್ ಅವರು ಸಾವನಪ್ಪಿದ ಬಗ್ಗೆ ವಿಠ್ಠಲ ಸೂರ್ಯವಂಶಿ ಅವರು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
`ಆತ್ಮಹತ್ಯೆ ಅಪರಾಧ’