ಅನಾರೋಗ್ಯದ ಒಳ ನೋವು ಅನುಭವಿಸಿರುವ ಕಾರವಾರ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರು ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಇದೀಗ ಅಪಾರ ಕಾಳಜಿವಹಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಬಳಿ ಪಟ್ಟುಹಿಡಿದು ಸುಸಜ್ಜಿತ ಆಸ್ಪತ್ರೆ ಘೋಷಣೆ ಮಾಡಿದ್ದ ಅವರು ಸೋಮವಾರ ಆರೋಗ್ಯ ವಿಷಯದಲ್ಲಿ ಸುಳ್ಳು ಹೇಳಿದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಜೊತೆಗೆ ಸರ್ಕಾರಿ ಸಭೆಯಲ್ಲಿಯೇ ಸಚಿವ ಮಂಕಾಳು ವೈದ್ಯರ ನಿಲುವು ವಿರೋಧಿಸಿ ಅಲ್ಲಿಂದ ಹೊರ ನಡೆದಿದ್ದಾರೆ.
ಜಿಲ್ಲಾ ಪಂಚಾಯತದಲ್ಲಿ ಸೋಮವಾರ ಕೆಡಿಪಿ ಸಭೆ ನಡೆದಿದ್ದು, ಸಭೆಗೆ ಹಾಜರಾಗಿದ್ದ ಅಧಿಕಾರಿಗಳು ಇಲಾಖೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಆರೋಗ್ಯ ಕ್ಷೇತ್ರಕ್ಕೆ ಸಂಬoಧಿಸಿ ಮಾತನಾಡದಿ ಅಧಿಕಾರಿಗಳು `ಎಲ್ಲವೂ ಸರಿಯಾಗಿದೆ. ಸುಸಜ್ಜಿತವಾಗಿದೆ’ ಎಂದು ಹೇಳಿದ್ದಾರೆ. `ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧಿಗಳ ಕೊರತೆ ಇಲ್ಲ. ಪೂರ್ಣ ದಾಸ್ತಾನು ಇದೆ’ ಎಂದು ಅಧಿಕಾರಿಗಳು ಹೇಳಿದಾಗ ಸಭೆಯಲ್ಲಿದ್ದ ಶಾಸಕ ಸತೀಶ್ ಸೈಲ್ ಇದಕ್ಕೆ ವಿರೋಧವ್ಯಕ್ತಪಡಿಸಿದ್ದಾರೆ. `ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲದಿರುವಾಗ, ಔಷಧಿಗಳನ್ನು ನೀಡುವವರು ಯಾರು?’ ಎಂದು ಸತೀಶ್ ಸೈಲ್ ಪ್ರಶ್ನಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಹಾಗೂ ಅಧಿಕಾರಿಗಳ ಸುಳ್ಳು ಮಾಹಿತಿಯ ವಿರುದ್ಧ ಸತೀಶ್ ಸೈಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಂಕಾಳ ವೈದ್ಯ ಅವರು `ವೈದ್ಯರ ಕೊರತೆ ಇದ್ದರೆ ನೀವೇ ತರಬೇಕು’ ಎಂದು ಸತೀಶ್ ಸೈಲ್ ಅವರಿಗೆ ಸೂಚಿಸಿದ್ದಾರೆ. `ತಾಲೂಕು ಮಟ್ಟದ ವಿಚಾರಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಬೇಡಿ’ ಎಂದು ತಾಕೀತು ಮಾಡಿದ್ದಾರೆ. ಇದರಿಂದ ಕೆರಳಿದ ಸತೀಶ್ ಸೈಲ್ `ಅಧಿಕಾರಿಗಳು ಹೇಳಿದನ್ನೆಲ್ಲ ಕೇಳಿ ತಲೆ ಅಲ್ಲಾಡಿಸಲು ನಾನು ಅಂಗೂಟಾ ಛಾಪ್ (ಹೆಬ್ಬೆಟ್ಟು ಗಿರಾಕಿ) ಅಲ್ಲ’ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ. `ಜನರ ಸಮಸ್ಯೆಗಳಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ಕೇವಲ ನಾಮಕಾವಸ್ಥೆಗೆ ಸಭೆ ಮಾಡಲು ನಾನು ಇಲ್ಲಿಗೆ ಬಂದಿಲ್ಲ’ ಎಂದು ಅಬ್ಬರಿಸಿದ ಅವರು ಆ ಸಭೆ ಬಹಿಷ್ಕರಿಸಿ ಹೊರಗೆ ಹೋಗಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಸತೀಶ್ ಸೈಲ್ `ಹಳಗಾ, ಕೈಗಾ ಹಾಗೂ ಮಲ್ಲಾಪುರ ಪ್ರದೇಶಗಳಲ್ಲಿ ವೈದ್ಯರಿಲ್ಲದೆ ಜನರು ಪರದಾಡುತ್ತಿದ್ದಾರೆ. ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಯಂತ್ರವಿದ್ದರೂ ಅದನ್ನು ನಿರ್ವಹಿಸುವವರಿಲ್ಲ. ಅದಾಗಿಯೂ ಅಧಿಕಾರಿಗಳು ಎಲ್ಲವೂ ಸರಿಯಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸಚಿವರು ಅದಕ್ಕೆ ತಲೆ ಅಲ್ಲಾಡಿಸಿದ್ದಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.
`ಸಭೆಯ ನಡಾವಳಿಗಳ ಪ್ರಕಾರ ಕೆಲಸ ನಡೆಯುತ್ತಿಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ನಡೆದಿಲ್ಲ. ಬೇರೆ ಕಡೆ ಹೋಲಿಸಿದರೆ ಕಾರವಾರದಲ್ಲಿ ವೈದ್ಯರ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಶಾಲಾ-ಕಾಲೇಜುಗಳ ವ್ಯವಸ್ಥೆ ಇಲ್ಲ. ಇದೇ ಕಾರಣಕ್ಕೆ ಉನ್ನತ ವೈದ್ಯರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ’ ಎಂಬ ವಿಷಯವನ್ನು ಬಿಚ್ಚಿಟ್ಟರು. ಸತೀಶ್ ಸೈಲ್ ಅವರು ಈಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದು, ಸ್ಥಳೀಯವಾಗಿ ಚಿಕಿತ್ಸೆ ಸಿಗದ ಕಾರಣ ಸಮಸ್ಯೆ ಅನುಭವಿಸಿದ್ದರು. ನಂತರ ಉನ್ನತ ಮಟ್ಟದಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ತಮ್ಮ ಕ್ಷೇತ್ರದ ಜನರಿಗೂ ಅದೇ ರೀತಿ ಆರೋಗ್ಯ ಸಮಸ್ಯೆ ಆಗುತ್ತಿರುವುದನ್ನು ಅರಿತು ಅವರು ಸುಸಜ್ಜಿತ ಆಸ್ಪತ್ರೆಗಾಗಿ ಪಟ್ಟು ಹಿಡಿದಿದ್ದರು. ಮುಖ್ಯಮಂತ್ರಿಗಳಿoದಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಬಗ್ಗೆ ಘೋಷಿಸಿದ್ದರು.