ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರ ಕೊಲೆಗೆ ಸಂಚು ರೂಪಿಸಿದ ನಾಲ್ವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ಮತ್ತಿಬ್ಬರ ಶೋಧ ಮುಂದುವರೆದಿದೆ. ಕೊಲೆ ಪ್ರಯತ್ನದ ವೇಳೆ ಪೂರ್ಣ ತೋಳಿನ ಬಿಳಿ ಬಣ್ಣದ ಶರ್ಟ ಧರಿಸಿದ ವ್ಯಕ್ತಿ ಹಾಗೂ ಮರೂನ್ ಬಣ್ಣದ ಚಕ್ಸ್ ಶರ್ಟ ಧರಿಸಿದ ಮತ್ತೊಬ್ಬರ ಹುಡುಕಾಟ ಜೋರಾಗಿದೆ.
2026ರ ಮಾರ್ಚ 25ರ ಬೆಳಗ್ಗೆ 10.15ಕ್ಕೆ ಅಂಕೋಲಾದ ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಆ ಕ್ಷಣದ ಸಮಯಪ್ರಜ್ಞೆಯಿಂದಾಗಿ ಗೋಪಾಲಕೃಷ್ಣ ನಾಯಕ ಅವರು ಚಾಕು ಚುಚ್ಚಿಸಿಕೊಂಡರೂ ಬದುಕುಳಿದಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಜೀವಾಪಾಯದಿಂದ ಪಾರಾದ ಬಗ್ಗೆ ವೈದ್ಯರು ಹೇಳಿದ್ದಾರೆ. ಕೊಲೆಗೆ ಪ್ರಯತ್ನಿಸಿದ ಆರೋಪಿತರ ಬೆನ್ನು ಬಿದ್ದ ಪೊಲೀಸರಿಗೆ ನಾಲ್ವರು ಸಿಕ್ಕಿಬಿದ್ದಿದ್ದಾರೆ. ಗೋವಾದ ಜಾಕಿರ್, ನೈಜರ್, ಸದ್ದಾಂ ಮತ್ತು ಇರ್ಫಾನ್ ಎಂಬಾತರು ಮತ್ತಿಬ್ಬರ ಜೊತೆ ಸೇರಿ ಗೋಪಾಲಕೃಷ್ಣ ನಾಯಕ ಅವರ ಮೇಲೆ ದಾಳಿ ನಡೆಸಿದ್ದು ದೃಢವಾಗಿದೆ.
ಸಿಕ್ಕಿ ಬಿದ್ದ ನಾಲ್ವರು ಬಡ ಕಾರ್ಮಿಕರಾಗಿದ್ದಾರೆ. ಆ ಪೈಕಿ ಒಬ್ಬರು ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ಮತ್ತೊಬ್ಬರು ರಿಯಲ್ ಎಸ್ಟೇಟ್ ಎಜೆಂಟರಾಗಿ ದುಡಿಯುತ್ತಿದ್ದಾರೆ. ಒಬ್ಬರು ಬೌನ್ಸರ್ ಆಗಿ ಕೆಲಸ ಮಾಡಿಕೊಂಡಿದ್ದರೆ ಇನ್ನೊಬ್ಬರು ಸೆಂಟ್ರಿoಗ್ ಕೆಲಸದಲ್ಲಿ ಸಹಾಯಕರಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಆಮೀಷ ಒಡ್ಡಿ ಗೋಪಾಲಕೃಷ್ಣ ನಾಯಕ ಅವರ ಕೊಲೆಗೆ ಸುಪಾರಿ ನೀಡಿದ ಅನುಮಾನಗಳಿವೆ. ದಾಳಿ ವೇಳೆ ಮತ್ತಿಬ್ಬರು ಸ್ಥಳದಲ್ಲಿದ್ದು, ಗೋಪಾಲಕೃಷ್ಣ ನಾಯಕ ಅವರ ಜೊತೆಗಿದ್ದ ರಾಘವೇಂದ್ರ ನಾಯಕ ಅವರು ಆ ಇಬ್ಬರನ್ನು ಗುರುತಿಸಿದ್ದಾರೆ. ಕೊಲೆ ಪ್ರಯತ್ನದ ವೇಳೆ ಪೂರ್ಣ ತೋಳಿನ ಬಿಳಿ ಬಣ್ಣದ ಶರ್ಟ ಧರಿಸಿದ ವ್ಯಕ್ತಿ ಹಾಗೂ ಮರೂನ್ ಬಣ್ಣದ ಚಕ್ಸ್ ಶರ್ಟ ಧರಿಸಿದ ಮತ್ತೊಬ್ಬರು ಇದ್ದ ಬಗ್ಗೆ ರಾಘವೇಂದ್ರ ನಾಯಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನಲೆ ಅವರಿಬ್ಬರ ಹುಡುಕಾಟ ಮುಂದುವರೆದಿದೆ.
ಪೊಲೀಸರು ಘಟನಾ ಸ್ಥಳದಿಂದ ಗೋವಾ ನೋಂದಣಿಯ ಕಾರು ಹಾಗೂ ಎರಡು ಪಲ್ಸರ್ ಬೈಕ್ಗಳನ್ನು ಜಪ್ತಿ ಮಾಡಿದ್ದು, ಪರಾರಿಯಾಗಲು ಸ್ಥಳೀಯ ಬಾಡಿಗೆ ಕಾರನ್ನು ಬಳಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. `ಈ ದಾಳಿ ಸುಪಾರಿ ಹತ್ಯೆಯ ಯತ್ನವೇ ಅಥವಾ ರಾಜಕೀಯ ದ್ವೇಷದಿಂದ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ನಿಖರ ಹಿನ್ನೆಲೆಯನ್ನು ಪತ್ತೆಹಚ್ಚಲು ಮತ್ತು ಇತರ ಆರೋಪಿಗಳನ್ನು ಬಂಧಿಸಲು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ತೀವ್ರಗತಿಯಲ್ಲಿ ಮುಂದುವರಿದಿದೆ’ ಎಂದು ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಹೇಳಿದ್ದಾರೆ.