ಹೊನ್ನಾವರದ ಗಣೇಶ ನಾಯ್ಕ ಅವರ ಮನೆಗೆ ನಾಲ್ವರು ನುಗ್ಗಿದ್ದು, ಕುಟುಂಬದವರಿಗೆ ಚಾಕು ತೋರಿಸಿ ಬೆದರಿಸಿದ್ದಾರೆ. ಆಗ, ಕುಟುಂಬದವರೆಲ್ಲರೂ ಮನೆಯ ಮೂಲೆಗೆ ಹೋಗಿದ್ದು, ಆ ಆಗಂತುಕರು ಕೋಣೆಗೆ ಹೋಗಿ ಶೋಧ ನಡೆಸಿದ್ದಾರೆ.
ನಗರಬಸ್ತಿಕೇರಿ ಗಾಳಕೂರಿನಲ್ಲಿ ಗಣೇಶ ನರಸಿಂಹ ನಾಯ್ಕ ಅವರು ವಾಸವಾಗಿದ್ದಾರೆ. ಆಟೋ ಚಾಲಕರಾಗಿ ಅವರು ಜೀವನ ನಡೆಸುತ್ತಿದ್ದಾರೆ. ಮಾರ್ಚ 19ರ ಮಧ್ಯಾಹ್ನ 2.45ಕ್ಕೆ ಅವರ ಮನೆಗೆ ನಾಲ್ವರು ಆಗಮಿಸಿದ್ದಾರೆ. ಬೈಕಿನಲ್ಲಿ ಬಂದ ಜನ ಚಾಕು ತೋರಿಸಿ ಮನೆಯಲ್ಲಿದ್ದವರನ್ನು ಹೆದರಿಸಿದ್ದಾರೆ. `ಯಾರು ಮುಂದೆ ಬರಬಾರದು’ ಎಂದು ಆ ನಾಲ್ವರು ಬೆದರಿಸಿದ್ದು, ಇದರಿಂದ ಗಣೇಶ ನಾಯ್ಕ ಅವರ ಕುಟುಂಬದವರು ಕಂಗಾಲಾಗಿದ್ದಾರೆ. ಈ ವೇಳೆ ಆ ನಾಲ್ವರು ಮನೆಯ ಕೋಣೆಯೊಂದಕ್ಕೆ ನುಗ್ಗಿದ್ದಾರೆ. ಅಲ್ಲಿರುವ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಅಲ್ಲಿರುವ ದಾಖಲೆಗಳನ್ನು ಹುಡುಕಾಡಿದ್ದಾರೆ. ಆಗ, ಗಣೇಶ ನಾಯ್ಕ ಅವರ ತಾಯಿ ಜೋರಾಗಿ ಬೊಬ್ಬೆ ಹೊಡೆದಿದ್ದು, ಗಣೇಶ ನಾಯ್ಕ ಅವರ ಪತ್ನಿಯೂ ದೊಡ್ಡದಾಗಿ ಕೂಗಿದ್ದಾರೆ. ಅಕ್ಕ-ಪಕ್ಕದ ಮನೆಯ ಜನ ಬರುವುದನ್ನು ನೋಡಿ ಆ ನಾಲ್ವರು ಆಗಂತುಕರು ಅಲ್ಲಿಂದ ಪರಾರಿಯಾಗಿದ್ದಾರೆ.
ಆ ಆಗಂತುಕರು ಅಲ್ಲಿಂದ ಪರಾರಿಯಾಗುವ ಮೊದಲು `ಈ ವಿಷಯ ಬೇರೆ ಯಾರಿಗಾದರೂ ಹೇಳಿದರೆ ರಾತ್ರಿ ಮತ್ತೆ ಬರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ. `ರಾತ್ರಿ ಬಂದಾಗ ನಿಮ್ಮೆಲ್ಲರನ್ನು ಮುಗಿಸುತ್ತೇವೆ’ ಎಂದು ಹೆದರಿಸಿದ್ದಾರೆ. ಅದಾಗಿಯೂ, ಗಣೇಶ ನಾಯ್ಕ ಅವರು ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ಊರಿನ ಕಮಲೇಶ ಗಜಾನನ ನಾಯ್ಕ ಅವರ ಕುಮ್ಮಕ್ಕಿನಿಂದ ಆ ನಾಲ್ವರು ಆಗಮಿಸಿದ ಬಗ್ಗೆ ಗಣೇಶ ನಾಯ್ಕ ಅವರು ದೂರಿದ್ದಾರೆ.
`ಕಮಲೇಶ ನಾಯ್ಕ ಹಾಗೂ ತಮ್ಮ ನಡುವೆ ಜಮೀನು ವಿಷಯವಾಗಿ ತಕರಾರು ನಡೆದಿದ್ದು, ಅದೇ ಕಾರಣಕ್ಕೆ ಬೆದರಿಕೆ ಒಡ್ಡಿದ್ದಾರೆ. ಅರಣ್ಯ ಇಲಾಖೆ ಜಾಗದಲ್ಲಿ ರಸ್ತೆ ಮಾಡಿದ ವಿಷಯವಾಗಿ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದ್ದರಿಂದ ಕಮಲೇಶ ನಾಯ್ಕ ಅವರು ತಮ್ಮ ಮೇಲೆ ಸಂಶಯಪಟ್ಟು ಬೆದರಿಕೆ ಒಡ್ಡಿದ್ದರು. ನಮ್ಮ ಮನೆಯ ಬಾಗಿಲು ಒಡೆದು ಬರುವುದಾಗಿ ಬೆದರಿಸಿದ್ದರು. ಅವರ ಪ್ರಚೋದನೆಯಿಂದಲೇ ನಾಲ್ವರು ತಮ್ಮ ಮನೆಗೆ ನುಗ್ಗಿ ಹೆದರಿಸಿದ್ದಾರೆ’ ಎಂದು ಗಣೇಶ ನಾಯ್ಕ ಅವರು ಹೇಳಿದ್ದಾರೆ. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದ್ದು, ಸತ್ಯಾಸತ್ಯತೆಯ ಪರಿಶೀಲನೆ ಶುರು ಮಾಡಿದ್ದಾರೆ.