`ಟಿಪ್ಪರ್ ಟಯರ್ ಬದಲಿಸದ ಮಾಲಕನ ವಿರುದ್ಧ ಚಾಲಕ ಪೊಲೀಸ್ ದೂರು ನೀಡಿದ್ದಾರೆ. `ಟಯರ್ ಸವಕಳಿ ಬಂದರೂ ಬದಲಿಸದ ಕಾರಣ ಟಿಪ್ಪರ್ ಅಪಘಾತಕ್ಕೀಡಾಗಿದ್ದು, ತನಗೆ ಅದರಿಂದ ನೋವಾಗಿದೆ’ ಎಂದು ಚಾಲಕ ಪೊಲೀಸರಲ್ಲಿ ದೂರಿದ್ದಾರೆ!
Advertisement. Scroll to continue reading.
ಸಿದ್ದಾಪುರ ಬಳಿಯ ಜೋಗಿನಮಠದ ಇಳಿಜಾರು ಪ್ರದೇಶದಲ್ಲಿ ಫೆಬ್ರವರಿ 16ರಂದು ಟಿಪ್ಪರ್ ಅಪಘಾತಕ್ಕೀಡಾಗಿತ್ತು. ಆ ಟಿಪ್ಪರ್ ತುಂಬ ಜಲ್ಲಿ ಕಲ್ಲುಗಳು ತುಂಬಿದ್ದು, ಅಪಘಾತದಲ್ಲಿ ದಾವಣಗೆರೆ ಮೂಲದ ಟಿಪ್ಪರ್ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಗಾಯಗೊಂಡಿದ್ದರು. ವಸಂತ ದೊಡ್ಡತಿಮ್ಮಪ್ಪ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದರು. ಆ ಟಿಪ್ಪರ್ ಶಿವಮೊಗ್ಗದ ಜಲ್ಲಿ ಕೃಷರ್ ಮಾಲಕ ಮುಜಾಹಿದ್ ಸಾಧೀಕ್ ಅವರಿಗೆ ಸೇರಿದಾಗಿದ್ದು, `ಟಿಪ್ಪರ್ ಅಪಘಾತಕ್ಕೆ ಲಾರಿ ಚಾಲಕ ಕಾರಣ’ ಎಂದು ಮುಜಾಹಿದ್ ಸಾಧೀಕ್ ಅವರು ಭಾವಿಸಿದ್ದರು.
ಆದರೆ, `ಟಿಪ್ಪರಿನ ಟಯರ್ ಸವಕಳಿ ಬಂದಿದೆ. ಅದನ್ನು ಬದಲಿಸಿಕೊಡಿ’ ಎಂದು ಲಾರಿ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಹೇಳಿದ್ದರೂ ಅದನ್ನು ಮಾಲಕ ಮುಜಾಹಿದ್ ಸಾಧೀಕ್ ಅವರು ಗಂಭೀರವಾಗಿ ಪರಿಗಣಿಸಿರಲಿಲ್ಲ. `ಟಿಪ್ಪರಿನಲ್ಲಿರುವ ಜಲ್ಲಿಯನ್ನು ಜೋಗಕ್ಕೆ ಇಳಿಸಲು ಹೋಗುವಾಗ ಟಯರ್ ಸ್ಪೋಟವಾಗಿದೆ. ಇದಕ್ಕೆ ಟಿಪ್ಪರ್ ಮಾಲಕನೇ ಕಾರಣ’ ಎಂದು ಇದೀಗ ಚಾಲಕ ವಸಂತ ದೊಡ್ಡತಿಮ್ಮಪ್ಪ ಅವರು ಹೇಳಿದ್ದಾರೆ. ಮಾಲಕನ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಅವರು ದೂರನ್ನು ದಾಖಲಿಸಿದ್ದಾರೆ.
`ಫೆ 16ರಂದು ಜಲ್ಲಿ ತಾಳಗುಪ್ಪಾದಿಂದ ಜೋಗಪಾಲ್ಸಿಗೆ ಹೋಗುವಾಗ ಟಿಪ್ಪರ್ ಟಯರ್ ಸ್ಪೋಟವಾಗಿದೆ. ಜೋಗಿನಮಠದ ಬಳಿ ಇಳಿಜಾರಿನಲ್ಲಿ ನಿಧಾನವಾಗಿ ಹೋಗುತ್ತಿದ್ದರೂ ಸ್ಪೋಟದ ರಭಸಕ್ಕೆ ಟಿಪ್ಪರ್ ಪಲ್ಟಿಯಾಗಿದೆ. ಅದರಿಂದ ತನಗೆ ನೋವಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದಿದ್ದೇನೆ’ ಎಂದು ಟಿಪ್ಪರ್ ಚಾಲಕ ದೂರಿದ್ದಾರೆ.