ಶಾಸಕರು-ಸಚಿವರ ಜೊತೆ ಮಾಜಿ ಜನಪ್ರತಿನಿಧಿಗಳ ಬಳಿಯೂ ಜನ ಸಮಸ್ಯೆ ಹೇಳಿ ಬರುವುದು ಸಾಮಾನ್ಯ. ಅನೇಕರು ಫೋನ್ ಮೂಲಕ ತಮ್ಮ ಸಮಸ್ಯೆ ಹೇಳಿ ಅದಕ್ಕೆ ಪರಿಹಾರಪಡೆಯುತ್ತಿದ್ದು, ಮಾಜಿ ಸಚಿವ ಆನಂದ ಅಸ್ನೋಟಿಕರ್ ಅವರಿಗೆ ಕೆಲವರು ಕಂಠಪೂರ್ತಿ ಕುಡಿದು ಫೋನ್ ಮಾಡುತ್ತಿದ್ದಾರೆ!
ಕಾರವಾರ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎಳೆಯ ವಯಸ್ಸಿನಲ್ಲಿಯೇ ಸಚಿವರಾಗಿಯೂ ಅಧಿಕಾರ ಅನುಭವಿಸಿದ ಆನಂದ ಅಸ್ನೋಟಿಕರ್ ಅವರು ಈಗಲೂ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿದ್ದಾರೆ. ಜನ ಸಾಮಾನ್ಯರ ಜೊತೆ ಅವರು ಬೆರೆಯುತ್ತಿದ್ದಾರೆ. ಹೀಗಾಗಿ ನಿತ್ಯ ನೂರಾರು ಜನ ಆನಂದ ಅಸ್ನೋಟಿಕರ್ ಅವರ ಬಳಿ ತಮ್ಮ ಸಮಸ್ಯೆ ಹೊತ್ತು ತರುತ್ತಾರೆ. ತಮ್ಮ ರಾಜಕೀಯ ಪ್ರಭಾವದ ಮೂಲಕ ಅವರು ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಆನಂದ ಅಸ್ನೋಟಿಕರ್ ಅವರಿಗೆ ಕೆಲವರು ಫೋನ್ ಮಾಡುತ್ತಿದ್ದು, ಕಂಠಪೂರ್ತಿ ಕುಡಿದವರು ಮಾತನಾಡುವ ಸ್ಥಿತಿಯಲ್ಲಿ ಸಹ ಇರುವುದಿಲ್ಲ. ಅದಾಗಿಯೂ, ಆನಂದ ಅಸ್ನೋಟಿಕರ್ ಅವರು ಅಂಥವರನ್ನು ಫೋನ್ ಮೂಲಕವೇ ಸಮಾಧಾನ ಮಾಡುತ್ತಿದ್ದಾರೆ.
ಆನಂದ ಅಸ್ನೋಟಿಕರ್ ಅವರು ಸದ್ಯ ಜೆಡಿಎಸ್ ಪಕ್ಷದಲ್ಲಿದ್ದು, ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಜೊತೆ ಒಡನಾಟ ಹೊಂದಿದ್ದಾರೆ. ರಾಜಕಾರಣದ ಆಳ-ಅಗಲದ ಬಗ್ಗೆ ಆನಂದ ಅಸ್ನೋಟಿಕರ್ ಅವರು ಸಾಕಷ್ಟು ಅನುಭವಪಡೆದಿದ್ದಾರೆ. ವಸಂತ ಅಸ್ನೋಟಿಕರ್ ಅವರ ಗರಡಿಯಲ್ಲಿ ಪಳಗಿದ ಕಾರಣ ಆನಂದ ಅಸ್ನೋಟಿಕರ್ ಅವರಿಗೆ ಕ್ಷೇತ್ರದ ಜನರು ಸಹ ಅದೇ ಪ್ರಮಾಣದಲ್ಲಿ ಗೌರವಿಸುತ್ತಿದ್ದು, ತಮ್ಮ ಬಳಿ ಬಂದವರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡುವ ಸ್ವಭಾವವನ್ನು ಅವರು ಪಾಲಿಸುತ್ತಿದ್ದಾರೆ. ಹೀಗಾಗಿ ನಿತ್ಯ ನೂರಾರು ಜನ ಆನಂದ ಅಸ್ನೋಟಿಕರ್ ಅವರಲ್ಲಿ ಸಹಾಯ ಕೇಳಿ ಬರುತ್ತಾರೆ. ಹೀಗೆ ಸಹಾಯ ಕೇಳಿ ಬರುವವರಿಂದ ಆನಂದ ಅಸ್ನೋಟಿಕರ್ ಅವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಮದ್ಯ ಸೇವಿಸಿ ಪದೇ ಪದೇ ಫೋನ್ ಮಾಡುವವರ ಕಾಟಕ್ಕೆ ಕೊನೆ ಬೀಳುತ್ತಿಲ್ಲ.
ಈಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕುಡಿದು ಫೋನ್ ಮಾಡುವವರ ಬಗ್ಗೆ ಆನಂದ ಅಸ್ನೋಟಿಕರ್ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಜೆಡಿಎಸ್ ಕಾರ್ಯಕಾರಣಿ ಸಭೆಯಲ್ಲಿ ತಮ್ಮ ತಾಳ್ಮೆ ಹಾಗೂ ಸಹನೆ ಬಗ್ಗೆ ಮಾತನಾಡಿದ ಆನಂದ ಅಸ್ನೋಟಿಕರ್ ಅವರು `ಕುಡಿದು ಫೋನ್ ಮಾಡುವವರಿಗೆ ಸಹ ತಾನು ಸಮಾಧಾನದಿಂದ ಉತ್ತರಿಸುತ್ತೇನೆ’ ಎಂದಿದ್ದಾರೆ. `ಅಂಥವರು ಸಮಸ್ಯೆ ಹೇಳಿ ಫೋನ್ ಮಾಡಿದರೂ ತನಗೆ ತೊಂದರೆ ಇಲ್ಲ. ಫೋನ್ ಮಾಡಿದವರ ಸಮಸ್ಯೆ ದೂರವಾಗಬೇಕು ಎಂಬುದೇ ತಮ್ಮ ನಿಲುವು. ನಿಮ್ಮೆಲ್ಲರ ಜೊತೆ ತಾನು ಯಾವಾಗಲು ಇರುತ್ತೇನೆ’ ಎಂದು ಆನಂದ ಅಸ್ನೋಟಿಕರ್ ಅವರು ಭಾಷಣದಲ್ಲಿ ಹೇಳಿದ್ದಾರೆ. ಇದರೊಂದಿಗೆ `ಪ್ರತಿ ಬೂತ್ ಮಟ್ಟದಲ್ಲಿಯೂ ಪಕ್ಷ ಸಂಘಟನೆ ಮಾಡಲಾಗುತ್ತದೆ’ ಎಂದವರು ಘೋಷಿಸಿದ್ದಾರೆ.