ಯಲ್ಲಾಪುರದ ಮಾವಿನಕಟ್ಟಾ ಗ್ರಾಮದ ಗುರುಪ್ರಸಾದ ನಾಯ್ಕ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗೌಂಡಿ ಕೆಲಸ ಮಾಡಿಕೊಂಡಿದ್ದ ಅವರು ದಿಢೀರ್ ಆಗಿ ದುಡುಕು ನಿರ್ಧಾರಕ್ಕೆ ಒಳಗಾಗಿದ್ದಾರೆ.
ಯಲ್ಲಾಪುರದ ಮಾವಿನಕಟ್ಟ ಬಳಿಯ ಕೆಸಿನಕೊಡ್ಲುವಿನಲ್ಲಿ ಗುರುಪ್ರಸಾದ ವಾಸು ನಾಯ್ಕ ಅವರು ವಾಸವಾಗಿದ್ದರು. 25 ವರ್ಷದ ಅವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದರು. ಸುತ್ತಲಿನ ಊರುಗಳಲ್ಲಿ ಗೌಂಡಿ ಕೆಲಸ ಮಾಡಿ ಅವರು ಜೀವನ ನಡೆಸುತ್ತಿದ್ದರು. ಈ ನಡುವೆ ಗುರುಪ್ರಸಾದ ನಾಯ್ಕ ಅವರು ದುಶ್ಚಟಕ್ಕೆ ದಾಸರಾಗಿದ್ದು, ಸರಾಯಿ ಸೇವನೆ ಶುರು ಮಾಡಿದ್ದರು.
ತೀರಾ ಈಚೆಗೆ ಗುರುಪ್ರಸಾದ ನಾಯ್ಕ ಅವರ ವರ್ತನೆಯಲ್ಲಿ ಬದಲಾಗಿತ್ತು. ಸರಾಯಿ ಸೇವನೆ ವಿಪರೀತ ಪ್ರಮಾಣ ತಲುಪಿತ್ತು. ಇದರಿಂದ ಮಾನಸಿಕವಾಗಿಯೂ ಅವರು ಕುಗ್ಗಿದ್ದರು. ಯಾವುದೋ ಒಂದು ವಿಷಯದ ಬಗ್ಗೆ ಅವರು ಚಿಂತಿಸುತ್ತಿದ್ದರು. ಆದರೆ, ಆ ವಿಷಯದ ಬಗ್ಗೆ ಅವರು ಯಾರಲ್ಲಿಯೂ ಹೇಳಿರಲಿಲ್ಲ.
ಹೀಗಿರುವಾಗ ಏಪ್ರಿಲ್ 26ರ ರಾತ್ರಿ 11 ಗಂಟೆ ವೇಳೆಗೆ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು. ಏಪ್ರಿಲ್ 27ರ ಬೆಳಿಗ್ಗೆ 8.15ರ ವೇಳೆಯಲ್ಲಿ ಗುರುಪ್ರಸಾದ ನಾಯ್ಕ ಅವರು ಶವವಾಗಿದ್ದರು. ಮನೆಯ ಕಟ್ಟಿಗೆಯ ಮುಂಡಗೆ ಹಗ್ಗ ಕಟ್ಟಿ ಮತ್ತೊಂದು ತುದಿಯನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅವರನ್ನು ನೋಡಿದ ಅಣ್ಣ ಮಣಿಕಂಠ ವಾಸು ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದರು.