ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ-ಶಿಕ್ಷಣ ಕೊಡಿಸಬೇಕು ಎಂದು ಅನೇಕರು ಶಿರಸಿಯ ಸೈಂಟ್ ಆಂಥೊನಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ, ಆ ಶಿಕ್ಷಣ ಸಂಸ್ಥೆ ಮಕ್ಕಳಲ್ಲಿ ಶಿಸ್ತು ಮೂಡಿಸುವ ಬದಲು ಧಾರ್ಮಿಕ ಭಾವನೆಗೆ ಅಡ್ಡಿಪಡಿಸುವ ಕಾರ್ಯಕ್ಕೆ ಮುಂದಾದ ಆರೋಪವ್ಯಕ್ತವಾಗಿದೆ.
ಶಿರಸಿಯ ಸೈಂಟ್ ಆಂಥೊನಿ ಶಾಲೆ ಹೆಸರಾಂತ ಶಿಕ್ಷಣ ಸಂಸ್ಥೆ. ಹೀಗಾಗಿ ಅನೇಕರು ಜಾತಿ-ಧರ್ಮ ಮೀರಿ ಈ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಆದರೆ, ಇದೀಗ `ಸೈಂಟ್ ಆಂಥೊನಿ ಶಾಲೆಗೆ ಬರುವ ವಿದ್ಯಾರ್ಥಿನಿಯರು ಹಣೆಗೆ ಕುಂಕುಮವಿಡುವ ಹಾಗಿಲ್ಲ. ಕೈಗೆ ಬಳೆ ತೊಡುವ ಹಾಗಿಲ್ಲ. ಹಿಂದೂ ಸಂಪ್ರದಾಯದ ಪ್ರಕಾರ ನಡೆದುಕೊಳ್ಳುವ ಹಾಗಿಲ್ಲ’ ಎಂದು ಅಲ್ಲಿನ ಮುಖ್ಯಾಧ್ಯಾಪಕರು ಫಾರ್ಮಾನು ಹೊರಡಿಸಿದ ಬಗ್ಗೆ ಪಾಲಕರು ದೂರಿದ್ದಾರೆ. ಅಂದ ಹಾಗೇ, ಇಲ್ಲಿನ ಮುಖ್ಯಾಧ್ಯಾಪಕರ ವಿರುದ್ಧ ದೂರು ಕೇಳಿ ಬರುತ್ತಿರುವುದು ಇದೇ ಮೊದಲಲ್ಲ.
ಎಲ್ಲಾ ಶಾಲೆಗಳಲ್ಲಿಯೂ ಆವರಣಕ್ಕೆ ಭೇಟಿ ನೀಡುವ ಪಾಲಕರನ್ನು ಅಲ್ಲಿನ ಸಿಬ್ಬಂದಿ ಗೌರವದಿಂದ ನಡೆಸಿಕೊಳ್ಳುತ್ತಾರೆ. ಖುರ್ಚಿ ಹಾಕಿ ಕೂರಿಸಿ ಮಾತನಾಡುತ್ತಾರೆ. ಆದರೆ, ಮೂರು ದಿನಗಳ ಹಿಂದೆ ಪ್ರವೇಶಾತಿ ಮಾಹಿತಿ ಪಡೆಯಲು ಪಾಲಕರೊಬ್ಬರು ಸೈಂಟ್ ಆಂಥೊನಿ ಶಾಲೆಗೆ ಹೋದಾಗ ಅವರಿಗೆ ಅಲ್ಲಿನ ಮುಖ್ಯಾಧ್ಯಾಪಕರು ಅವಮಾನ ಮಾಡಿದ್ದಾರೆ. 20 ನಿಮಿಷಗಳ ಕಾಲ ಪಾಲಕರನ್ನು ಹೊರಗಡೆಯೇ ನಿಲ್ಲಿಸಿ ಮಾತನಾಡಿದ್ದಾರೆ. ಪಾಲಕರು ಹೊರಗೆ ನಿಂತಿರುವುದನ್ನು ನೋಡಿ ಕೊಠಡಿಯೊಳಗೆ ಅವರನ್ನು ಕಳುಹಿಸಿದ ಶಾಲಾ ಸಿಬ್ಬಂದಿಗೆ ಸಹ ಕೆಟ್ಟದಾಗಿ ನಿಂದಿಸಿದ್ದಾರೆ. ಮುಖ್ಯಾಧ್ಯಾಪಕರ ಉದ್ದಟತನದ ವರ್ತನೆಗೆ ಶಾಲೆ ಹೆಸರು ಹಾಳಾಗುತ್ತಿದೆ.
ಈ ಶಾಲೆಯಲ್ಲಿ ಶಿಸ್ತಿನ ಹೆಸರಿನಲ್ಲಿ ಅತಿರೇಕದ ವರ್ತನೆ ಹೆಚ್ಚಾದ ಬಗ್ಗೆ ಅನೇಕರು ದೂರಿದ್ದಾರೆ. ವಿದ್ಯಾರ್ಥಿಗಳ ಮೇಲೆ ಒತ್ತಡ ತರುವ ಪ್ರಾಚಾರ್ಯರು ಶಾಲೆಗೆ ಬರುವ ಹೆಣ್ಣು ಮಕ್ಕಳು ಹಿಂದೂ ಸಂಪ್ರದಾಯ ಪಾಲಿಸುತ್ತಿದ್ದರೆ ಅವರನ್ನು ಅವಮಾನ ಮಾಡುತ್ತಿರುವ ದೂರುಗಳಿವೆ. `ಬಳೆ ತೊಡಬಾರದು, ಕಾಲ್ಗಜ್ಜೆ ಧರಿಸಬಾರದು. ಹಣೆಯಲ್ಲಿ ಸಿಂಧೂರವೂ ಇರಬಾರದು’ ಎಂದು ಇಲ್ಲಿ ವಿದ್ಯಾರ್ಥಿನಿಯರಿಗೆ ಫಾರ್ಮಾನು ಹೊರಡಿಸಿದ ಆರೋಪವಿದೆ. ಕಳೆದ ವರ್ಷ ಇದೇ ಶಾಲೆಯಲ್ಲಿ ಮಗುವಿನ ಆರೋಗ್ಯ ಹದಗೆಟ್ಟರೂ ಆ ಮಗುವನ್ನು ಮೂರು ತಾಸು ಕಾಯಿಸಿ ಬಳಿಕ ಆಸ್ಪತ್ರೆಗೆ ಕರೆದೊಯ್ದ ವಿದ್ಯಮಾನವೂ ಇದೀಗ ಚರ್ಚೆಗೆ ಬಂದಿದೆ.
`ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಮಾಹಿತಿಪಡೆಯಲು ನಾನು ಶಾಲೆಗೆ ಹೋದಾಗ ಮುಖ್ಯಾಧ್ಯಾಪಕರು ಅವಮಾನ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಎಸ್ ಎಸ್ ಎಲ್ ಸಿ ಮೌಲ್ಯಮಾಪನ ನಡೆಯುತ್ತಿದ್ದು, ಆ ಒತ್ತಡದಲ್ಲಿ ಮುಖ್ಯಾಧ್ಯಾಪಕಿ ಪಾಲಕರಿಗೆ ಬೈದಿರುವುದಾಗಿ ಸಂಸ್ಥೆಯವರು ಸಮಜಾಯಿಶೀ ನೀಡಿದ್ದಾರೆ. ಗುರುವಾರ ಮೌಲ್ಯಮಾಪನ ನಡೆಯುವಾಗ ಶಾಲಾ ಆವರಣದಲ್ಲಿ ಐವರು ಅನಾಮಿಕರು ಕೆಲಸ ಮಾಡುತ್ತಿದ್ದು, ಆ ಬಗ್ಗೆಯೂ ತನಿಖೆ ನಡೆಯಬೇಕು’ ಎಂದು ನಾಗರಾಜ ಶೆಟ್ಟಿ ಅವರು ಆಗ್ರಹಿಸಿದ್ದಾರೆ.