ರಾಜ್ಯದ ಎಲ್ಲಡೆ ಗ್ಯಾಸ್ ಸಿಲೆಂಡರ್ ಕೊರತೆ ಹೆಚ್ಚಾಗಿದ್ದು, ಈ ನಡುವೆ ಮದುವೆ ಮಕ್ಕಳಿಗೆ ಸಿಲೆಂಡರ್ ಉಡುಗರೆ ನೀಡಿದ ಸುದ್ದಿ ಅಧಿಕಾರಿಗಳನ್ನು ತಬ್ಬಿಬ್ಬು ಮಾಡಿದೆ. ಸಪ್ತಪದಿ ಸಡಗರದಲ್ಲಿ ಉಡುಗರೆಯಾಗಿ ಸಿಕ್ಕ ಸಿಲೆಂಡರ್ಪಡೆದ ಜೋಡಿಗೂ ಸಂಕಷ್ಟ ಶುರುವಾಗಿದೆ. ಆ ಸಿಲೆಂಡರ್ ಅರೆಸಿ ಅಧಿಕಾರಿಗಳು ಮದುವೆ ಮನೆಗೆ ಭೇಟಿ ನೀಡಿದ್ದು, ಕುಟುಂಬದವರಿಗೆ ಅಧಿಕಾರಿಗಳು ವಿವಿಧ ಪ್ರಶ್ನೆ ಕೇಳಿದ್ದಾರೆ!
ಭಟ್ಕಳ ಶಹರದಲ್ಲಿ ಈಚೆಗೆ ವಿವೇಕ ಮಹಾಲೆ ಹಾಗೂ ನಾಗ ಸಂಧ್ಯಾ ಶಾಂತಿ ಅವರ ಮದುವೆ ನಡೆದಿತ್ತು. ಮದುವೆಗೆ ಆಗಮಿಸಿದ ಆಪ್ತರು ಗ್ಯಾಸ್ ಸಿಲೆಂಡರ್ ಉಡುಗರೆಯಾಗಿ ನೀಡಿದ್ದರು. ಗ್ಯಾಸ್ ಸಿಲೆಂಡರ್ ದರ ಏರಿಕೆ ಹಾಗೂ ದುಬಾರಿ ಹಿನ್ನಲೆ ಅದನ್ನು ಉಡುಗರೆಯಾಗಿ ನೀಡಿ ಸರ್ಕಾರವನ್ನು ಅಣುಕಿಸಿದ್ದರು. ಮೊಬೈಲ್ ಮಿಡಿಯಾ ನೆಟ್ವರ್ಕನ mobiletime.in ಸೇರಿ ವಿವಿಧ ಮಾಧ್ಯಮಗಳು ಈ ವರದಿ ಪ್ರಸಾರ ಮಾಡಿದ್ದು, ಅದು ಅಧಿಕಾರಿಗಳಿಗೂ ತಲುಪಿತು.
ಸಿಲೆಂಡರ್ ಉಡುಗರೆ ನೀಡಿದ ವಿಷಯ ಅರಿತ ಅಧಿಕಾರಿಗಳು ಆ ಸಿಲೆಂಡರ್ ಮೂಲ ಅರೆಸಿ ಹೊರಟರು. ಈ ವೇಳೆ ಸ್ನೇಹಿತರು ಖಾಲಿ ಸಿಲೆಂಡರ್’ನ್ನು ಅಣಕು ಕಾರ್ಯಾಚರಣೆ ರೀತಿ ಉಡುಗರೆ ಮಾಡಿರುವುದಾಗಿ ಮದು ಮಕ್ಕಳ ಕುಟುಂಬದವರು ವಿವರಿಸಿದರು. ಅದಾಗಿಯೂ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿದ್ದು, `ಸಿಲೆಂಡರ್ ಉಡುಗರೆ ನೀಡಿದ್ದು ಯಾರು?’ ಎಂದು ಕುಟುಂಬದವರನ್ನು ಪ್ರಶ್ನಿಸಿದರು. `ನೋಂದಾಯಿತ ಸಿಲೆಂಡರ್’ನ್ನು ಉಡುಗರೆಯಾಗಿ ನೀಡಲಾಗಿದೆಯೇ?’ ಎಂದು ಸಹ ವಿಚಾರಿಸಿದರು. `ಗೃಹ ಬಳಕೆಗಾಗಿಪಡೆದ ಸಿಲೆಂಡರ್’ನ್ನು ಉಡುಗರೆಯಾಗಿ ಬೇರೆಯವರಿಗೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ?’ ಎನ್ನುವುದರ ಬಗ್ಗೆಯೂ ಅಧಿಕಾರಿಗಳು ಚರ್ಚಿಸಿದರು.
ಇದನ್ನು ಓದಿ: ವಧು-ವರರಿಗೆ ಗ್ಯಾಸ್ ಸಿಲೆಂಡರ್ ಉಡುಗರೆ
ಕೊನೆಗೆ `ಸಿಲೆಂಡರ್ ಉಡುಗರೆ ಪ್ರಹಸನ ಮನರಂಜನೆಗೆ ಮಾತ್ರ’ ಎಂದು ಕುಟುಂಬದವರು ಮತ್ತೊಮ್ಮೆ ಸಮಜಾಯಿಶೀ ನೀಡಿದರು. `ಪ್ರಸ್ತುತ ಸನ್ನಿವೇಶದಲ್ಲಿ ಸಿಲೆಂಡರ್ ಮಹತ್ವ ವಿವರಿಸಲು ಈ ರೀತಿ ಮಾಡಲಾಗಿದೆ’ ಎಂದು ತಿಳಿಸಿದರು. `ತುಂಬಿದ ಸಿಲೆಂಡರ್ ಬದಲು ಖಾಲಿ ಸಿಲೆಂಡರ್ ಮಾತ್ರ ಉಡುಗರೆ ಪ್ರಹಸನಕ್ಕೆ ಬಳಸಲಾಗಿದೆ’ ಎಂದು ಹೇಳಿದರು. ಈ ಎಲ್ಲಾ ವಿಷಯ ಆಲಿಸಿದ ಅಧಿಕಾರಿಗಳು `ಮೇಲಧಿಕಾರಿಗಳಿಗೆ ವರದಿ ಒಪ್ಪಿಸುವೆ’ ಎಂದು ತಿಳಿಸಿ ಅಲ್ಲಿಂದ ಹೊರಟರು.