ಉತ್ತರ ಕನ್ನಡ ಜಿಲ್ಲೆಯಲ್ಲಿ ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ರಮಾನಂದ ನಾಯಕ ಅವರು ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಬೆಂಗಳೂರಿನಲ್ಲಿ ಚಿಕಿತ್ಸೆಪಡೆಯುತ್ತಿದ್ದು, ಗುರುವಾರ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾಗಿದ್ದ ರಮಾನಂದ ನಾಯಕ ಅವರ ನಿಧನಕ್ಕೆ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಸಂತಾಪ ಸೂಚಿಸಿದ್ದಾರೆ. `ರಮಾನಂದ ನಾಯಕರು ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ. ಬದಲಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಜನಪರ ಕಾಳಜಿಯ ನಾಯಕರಾಗಿದ್ದರು. ಉತ್ತರ ಕನ್ನಡ ಜಿಲ್ಲಾ ಪರಿಷತ್ತಿನ ಮೊದಲ ಅಧ್ಯಕ್ಷರಾಗಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವ ಹಾಗಿದ್ದವು’ ಎಂದು ಮಾಧವ ನಾಯಕ ಅರು ಸ್ಮರಿಸಿದ್ದಾರೆ.
`ರಾಜಕೀಯದಲ್ಲಿ ಮೌಲ್ಯಗಳನ್ನು ಎತ್ತಿಹಿಡಿದ ಅವರು ಇಂದಿನ ತಲೆಮಾರಿನ ರಾಜಕಾರಣಿಗಳಿಗೆ ಒಂದು ಜೀವಂತ ಪಾಠಶಾಲೆಯಂತಿದ್ದರು. ಅವರೊಬ್ಬ ಅಜಾತಶತ್ರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಬಗ್ಗೆಯೂ ಅಪಾರ ಕಾಳಜಿ ಹೊಂದಿದ್ದ ಬಹುಮುಖ ಪ್ರತಿಭೆಯ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಅವರ ಅಗಲುವಿಕೆಯಿಂದ ಜಿಲ್ಲೆಯ ಸಾಮಾಜಿಕ ಹೋರಾಟದ ಒಂದು ಯುಗವೇ ಅಂತ್ಯವಾದAತಾಗಿದೆ’ ಎಂದು ಭಾವುಕರಾಗಿ ನುಡಿದಿದ್ದಾರೆ. `ರಮಾನಂದ ನಾಯಕರ ನಿಧನವು ಜಿಲ್ಲೆಗೆ ಮಾತ್ರವಲ್ಲದೆ ಇಡೀ ನಾಡಿಗೆ ತುಂಬಲಾರದ ನಷ್ಟ. ಅವರ ನಿಸ್ವಾರ್ಥ ಬದುಕು ಮತ್ತು ಸಜ್ಜನಿಕೆಯ ಹಾದಿ ನಮ್ಮೆಲ್ಲರಿಗೂ ಸದಾ ದಾರಿದೀಪವಾಗಲಿ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ’ ಎಂದು ಮಾಧವ ನಾಯಕರು ಪ್ರಾರ್ಥಿಸಿದ್ದಾರೆ.