ಕುಮಟಾ ಗಾಂಧೀನಗರದ ಗಣೇಶ ಶೇಟ್ ಅವರು ಹಣ ಡಬಲ್ ಮಾಡುವ ಆಸೆಗೆ ಬಿದ್ದು 9.24 ಲಕ್ಷ ರೂ ಕಳೆದುಕೊಂಡಿದ್ದಾರೆ. ಆನ್ಲೈನ್ ಟ್ರೇಡಿಂಗ್ ಮೂಲಕ ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿದ ವಂಚಕರು ಅವರಲ್ಲಿದ್ದ ಹಣವನ್ನು ಕಸಿದಿದ್ದಾರೆ.
ಕುಮಟಾದ ಗಾಂಧೀನಗರ 6ನೇ ಕ್ರಾಸಿನಲ್ಲಿ ಗಣೇಶ ನಾಗೇಶ್ ಶೇಟ್ ಅವರು ವಾಸವಾಗಿದ್ದಾರೆ. ತಮ್ಮದೇ ಆದ ಸ್ವ ಉದ್ದಿಮೆಯನ್ನು ಅವರು ನಡೆಸುತ್ತಿದ್ದು, ಆ ಉದ್ದಿಮೆಯಿಂದ ಬಂದ ಹಣವನ್ನು ಬಹುಬೇಗ ಡಬಲ್ ಮಾಡಿಕೊಳ್ಳುವ ಆಮೀಷಕ್ಕೆ ಬಿದ್ದಿದ್ದಾರೆ. 2025ರ ಅಕ್ಟೋಬರ್ ತಿಂಗಳ ಎರಡನೇ ವಾರ ಅವರು ಫೇಸ್ಬುಕ್ ನೋಡುವಾಗ ಅಲ್ಲೊಂದು ಮೆಸೆಜ್ ಕಾಣಿಸಿದೆ. ಫೇಸ್ಬುಕ್ ಮೆಸೇಂಜರ್ ಮೂಲಕ ಆರೋಪಿತರು ಟ್ರೇಡಿಂಗ್ ಇನ್ವೆಸ್ಟ್ಮೆಂಟ್ ಕುರಿತು ಸಂದೇಶ ಕಳುಹಿಸಿ, `ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ’ ಎಂದು ನಂಬಿಸಿದ್ದಾರೆ.
ನAತರ ಆರೋಪಿತರು ಕಳುಹಿಸಿದ್ದ ವಾಟ್ಸಪ್ ಗ್ರೂಪಿಗೆ ಗಣೇಶ್ ಶೇಟ್ ಅವರು ಸೇರಿದ್ದಾರೆ. ಒಂದು ತಿಂಗಳ ಕಾಲ ಗ್ರೂಪ್ನಲ್ಲಿದ್ದ ಇತರರು ಲಾಭ ಗಳಿಸುತ್ತಿರುವಂತೆ ತೋರಿಸಲಾಗಿದ್ದು, ಬಳಿಕ ಆರೋಪಿತರು ವೈಯಕ್ತಿಕವಾಗಿ ಸಂಪರ್ಕಿಸಿ ಟ್ರೇಡಿಂಗ್ನಲ್ಲಿ ಹಣ ಹೂಡಲು ಪ್ರೇರೇಪಿಸಿದ್ದಾರೆ. ವಾಟ್ಸಪ್ ಮೂಲಕ ಕಳುಹಿಸಿದ ಲಿಂಕ್ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿಕೊಂಡು, ಅದರಲ್ಲಿ ವೈಯಕ್ತಿಕ ಮಾಹಿತಿ ದಾಖಲಿಸುವಂತೆ ವಂಚಕರು ಸೂಚಿಸಿದ್ದು, ಅದನ್ನು ಗಣೇಶ್ ಶೇಟ್ ಅವರು ನಿಯತ್ತಾಗಿ ಪಾಲಿಸಿದ್ದಾರೆ.
ಅದಾದ ನಂತರ ಆರೋಪಿತರ ಸೂಚನೆಯಂತೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಒಟ್ಟು 9,34,413ರೂ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ಮೋಸ ಹೋಗಿರುವುದನ್ನು ಅರಿತು ಆನ್ಲೈನ್ ಮೂಲಕವೇ ದೂರು ನೀಡಿದ್ದಾರೆ. ಅದಾಗಿಯೂ, ಹಣ ಬಾರದ ಕಾರಣ ಕುಮಟಾ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲಿಸಿದ್ದಾರೆ.