ಮುಂಬೈ ಮೂಲದ ವ್ಯಕ್ತಿಯೊಬ್ಬರು ಕಾರವಾರದ ಸದಾಶಿವಗಡದ ಕಣಸಗಿರಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. . ಸದಾಶಿವಗಡದ ಸುಧಾಕರ್ ದುರ್ಗೇಕರ್ ಹಾಗೂ ಸತೀಶ ವರ್ಣೇಕರ್ ಸೇರಿ ಆ ಗಣಿಗಾರಿಕೆ ತಡೆಯುವ ಪ್ರಯತ್ನ ಮಾಡಿದ್ದಾರೆ.
ಭಾರತ ಮೈನ್ ಟೆಕ್ ಕಂಪನಿ ಮೂಲಕ ಕಾರವಾರದ ಸದಾಶಿವಗಡದ ಕಣಸಗಿರಿಯಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿ ಕಂಪನಿಗೆ ಸದಾಶಿವಗಡದ ಕುಲ್ಸಂಬಿ ರೆಸಿಡೆನ್ಸಿಯಲ್ಲಿ ವಾಸವಾಗಿರುವ
ಮಹಮದ್ ರಫೀಕ್ ಅವರು ಮ್ಯಾನೇಜರ್ ಆಗಿದ್ದಾರೆ. ಚಿತ್ತಾಕುಲ ಸೀಬರ್ಡ ಕಾಲೋನಿಯ ಸುಧಾಕರ್ ಪಾಂಡು ದುರ್ಗೇಕರ್ ಹಾಗೂ ಸದಾಶಿವಗಡ ಬಿಡ್ತುಲ್ಭಾಗದ ಮಾರುತಿ ದೇಗುಲ ಸಮೀಪದ ಸತೀಶ್ ವರ್ಣೇಕರ್ ಸೇರಿ ಆ ಗಣಿಕಾರಿಕೆ ನಿಲ್ಲಿಸುವ ಸಾಹಸ ಮಾಡಿದ್ದಾರೆ. ಇದಕ್ಕಾಗಿ ಅವರು ಮ್ಯಾನೇಜರ್ ರಫೀಕ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಮಾರ್ಚ 9ರಂದು ಸುಧಾಕರ್ ದುರ್ಗೇಕರ್ ಹಾಗೂ ಸತೀಶ ವರ್ಣೇಕರ್ ಸೇರಿ ಗಣಿಗಾರಿಕೆ ಪ್ರದೇಶದ ಸರ್ವೇ ಮಾಡಿದ್ದಾರೆ. ಆ ಪ್ರದೇಶಕ್ಕೆ ಹೋಗಿ ಅಲ್ಲಿದ್ದ ಗೇಟು ಮುರಿದಿದ್ದಾರೆ. ಜೊತೆಗೆ ಗಣಿಗಾರಿಕೆ ಕಂಪನಿಯ ವರು ಅಲ್ಲಿ ಅಳವಡಿಸಿದ್ದ ಬೋರ್ಡಿಗೆ ಕತ್ತಿ ಹೊಡೆದಿದ್ದಾರೆ. ಆ ಬೋರ್ಡನ್ನು ಕಿತ್ತು ಕಾಳಿ ನದಿಗೆ ಎಸೆದಿದ್ದಾರೆ. ಅದಾದ ನಂತರ ಒಳಗೆ ಪ್ರವೇಶಿಸಿ ಅಲ್ಲಿದ್ದ ಮ್ಯಾನೇಜರ್’ಗೆ `ಇಲ್ಲಿ ಚಿಪ್ಪೆಕಲ್ಲು ಗಣಿಗಾರಿಕೆ ಮಾಡಲು ಬಿಡುವುದಿಲ್ಲ’ ಎಂದು ಹೇಳಿ ಹೆದರಿಸಿದ್ದಾರೆ.
ಸುಧಾಕರ್ ದುರ್ಗೇಕರ್ ಹಾಗೂ ಸತೀಶ ವರ್ಣೇಕರ್ ಅವರ ಎಚ್ಚರಿಕೆಯ ಬಗ್ಗೆ ರಫೀಕ್ ಅವರು ಮುಂಬೈಯಲ್ಲಿರುವ ಮಾಲಕರಿಗೆ ಫೋನ್ ಮಾಡಿದ್ದಾರೆ. ಮಾಲಕರು ನೀಡಿದ ಸೂಚನೆ ಮೇರೆಗೆ ರಫೀಕ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗಣಿಗಾರಿಕೆಗೆ ಅಡ್ಡಿಪಡಿಸಿದ ಆರೋಪದ ಅಡಿ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಸುಧಾಕರ್ ದುರ್ಗೇಕರ್ ಹಾಗೂ ಸತೀಶ ವರ್ಣೇಕರ್ ಅವರ ವಿರುದ್ಧ ದೂರು ನೀಡಿದ್ದಾರೆ.