ಯಲ್ಲಾಪುರದ ಇಡಗುಂದಿ ವಿಶ್ವದರ್ಶನ ಶಾಲೆ ಎದುರು ನಡೆದು ಹೋಗುತ್ತಿದ್ದ ಮಂಜುನಾಥ ದೇವಳಿ ಅವರಿಗೆ ಪ್ರಕಾಶ ನಾಯ್ಕ ಅವರು ಬೈಕ್ ಗುದ್ದಿದ್ದಾರೆ. ಮಂಜುನಾಥ ದೇವಳಿ ಅವರ ತಲೆಗೆ ಪೆಟ್ಟಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತ ಬಂದಿದೆ.
ಯಲ್ಲಾಪುರದ ಇಡಗುಂದಿಯಲ್ಲಿ ಮಂಜುನಾಥ ನಾರಾಯಣ ದೇವಳಿ (58) ಅವರು ವಾಸವಾಗಿದ್ದರು. ವೆಲ್ಡಿಂಗ್ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಜೂನ್ 10ರಂದು ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆ ಎದುರಿನ ಚಹಾ ಅಂಗಡಿ ಬಳಿ ನಡೆದು ಹೋಗುತ್ತಿದ್ದರು. ಆ ವೇಳೆ ಯಲ್ಲಾಪುರ ಕಡೆಯಿಂದ ವೇಗವಾಗಿ ಬೈಕ್ ಓಡಿಸಿಕೊಂಡು ಬಂದ ವಾಗಳ್ಳಿಯ ಪ್ರಕಾಶ ವಿಷ್ಣು ನಾಯ್ಕ ಅವರು ಆ ಬೈಕನ್ನು ಮಂಜುನಾಥ ದೇವಳಿ ಅವರಿಗೆ ಗುದ್ದಿದರು.
ಬೈಕ್ ಗುದ್ದಿದ ರಭಸಕ್ಕೆ ಮಂಜುನಾಥ ದೇವಳಿ ಅವರು ನೆಲಕ್ಕೆ ಅಪ್ಪಳಿಸಿದರು. ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಮೂಗಿನಿಂದ ರಕ್ತ ಸುರಿಯಿತು. ಜೊತೆಗೆ ಎರಡು ಕಿವಿಯಿಂದ ರಕ್ತಸ್ರಾವ ಶುರುವಾಯಿತು. ಮುಂದೆ ಹೋಗುತ್ತಿದ್ದ ಕಾರು ಹಿಂದಿಕ್ಕುವುದಕ್ಕಾಗಿ ಪ್ರಕಾಶ ನಾಯ್ಕ ಅವರು ವೇಗವಾಗಿ ಬೈಕ್ ಓಡಿಸಿದ್ದು, ಅದೇ ಈ ಅವಾಂತರಕ್ಕೆ ಕಾರಣವಾಯಿತು.
ಚಿಕ್ಕಪ್ಪನಿಗೆ ಬೈಕ್ ಗುದ್ದಿದ ಪ್ರಕಾಶ ನಾಯ್ಕ ಅವರ ವಿರುದ್ಧ ಇಡಗುಂದಿಯ ಚಾಲಕ ವಿನಾಯಕ ಶ್ರೀಕಾಂತ ದೇವಳಿ ಅವರು ಪೊಲೀಸ್ ದೂರು ನೀಡಿದ್ದಾರೆ. ಗಾಯಗೊಂಡ ಮಂಜುನಾಥ ದೇವಳಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.