ಕoಠಪೂರ್ತಿ ಕುಡಿದು ಪೊಲೀಸರ ಮೇಲೆ ಕೈ ಮಾಡಿದ್ದ ಹಳಿಯಾಳದ ಮಂಜುನಾಥ ಬೇಕನಿ ಅವರು ಮಹಾರಾಷ್ಟ್ರದಲ್ಲಿ ಅಡಗಿರುವುದು ಗೊತ್ತಾಗಿದೆ. ಅಲ್ಲಿಗೆ ದೌಡಾಯಿಸಿದ ಪೊಲೀಸರು ಮಂಚ್ಚ್ ಮಂಜ ಖ್ಯಾತಿಯ ರೌಡಿ ಶೀಟರನ್ನು ಬಂಧಿಸಿದ್ದಾರೆ.
ಹಳಿಯಾಳದ ಮೌರ್ಯ ಬಾರ್ & ರೆಸ್ಟೋರೆಂಟಿನ ಎದುರು ಜೂನ್ 14ರ ರಾತ್ರಿ ಗಲಾಟೆ ನಡೆದಿತ್ತು. ಗಲಾಟೆ ತಡೆಯಲು ಬಂದ ಪಿಸೈ ಬಸವರಾಜ ಮಬನೂರು ಅವರ ಪೊಲೀಸ್ ಜೀಪಿಗೆ ಮಂಜುನಾಥ ಬೇಕನಿ ಅಡ್ಡಗಟ್ಟಿ ರಂಪಾಟ ಮಾಡಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ನಂದೀಶ್ವರ ಗುಡ್ಡೋಡಗಿ, ಅಶೋಕ ಬಸಲಿಂಗಪ್ಪ ಹುಬ್ಬಳ್ಳಿ ಹಾಗೂ ಹನುಮಂತ ಓಂಕಾರಪ್ಪ ಬರಗಿ ಅವರ ಮೇಲೆಯೂ ಮಚ್ಚ್ ಮಂಜಾ ಆಕ್ರಮಣ ಮಾಡಿದ್ದರು. ಪೊಲೀಸರ ಮೇಲೆ ದಾಳಿ ಮಾಡಿದರೂ ಕ್ರಮವಾಗಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕ ವಲಯದಿಂದ ಕೇಳಿ ಬಂದಿದ್ದು, ಅದಕ್ಕೆ ಪ್ರತ್ಯುತ್ತರವಾಗಿ ರೌಡಿಯ ವಿರುದ್ಧ ಪಿಸೈ ಬಸವರಾಜ ಮಬನೂರು ಅವರು ಪೊಲೀಸ್ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಪಿಸೈ ಬಸವರಾಜ ಮಬನೂರು ಅವರು ಅಮಾನತಾಗಿದ್ದರು.
ಇದಕ್ಕೂ ಮೊದಲು ನಡೆದ ಗಲಾಟೆಯಲ್ಲಿ ಪಾನ್ ಅಂಗಡಿಯ ರಾಘವೇಂದ್ರ ದತ್ತಾ ಬಾಂದೇಕರ್, ಬಾರ್ ಸಿಬ್ಬಂದಿ ಬಸವರಾಜ ಹಾಗೂ ರಾಘವೇಂದ್ರ ಅವರ ಮೇಲೆಯೂ ದಾಳಿ ನಡೆದಿತ್ತು. ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರ ಮೇಲೆಯೂ ಮಂಜುನಾಥ ಬೇಕನಿ ಹಲ್ಲೆ ಮಾಡಿದ್ದರು. ಆ ಗಲಾಟೆ ತಡೆಗೆ ಹೋಗಿದ್ದ ಪೊಲೀಸರ ಮೇಲೆ ದಾಳಿ ನಡೆದ ವಿಡಿಯೋ ವೈರಲ್ ಆಗಿದ್ದು, ಹೊಟೇಲ್ ಮ್ಯಾನೇಜರ್ ಸದಾಶಿವ ಪೂಜಾರಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಮಂಜುನಾಥ ಸುಬ್ರಾಯ ಬೇಕನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದಾದ ನಂತರ ಇದೀಗ ಪೊಲೀಸರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಮತ್ತೊಂದು ಪ್ರಕರಣವನ್ನು ಸ್ವತಃ ಪಿಸೈ ಬಸವರಾಜ ಮಬನೂರು ಅವರು ದಾಖಲಿಸಿದ್ದು, ಗಲಾಟೆ ತಡೆಯಲು ವಿಫಲವಾದ ಕಾರಣ ಪಿಸೈ ಬಸವರಾಜ ಮಬನೂರು ಅವರ ವಿರುದ್ಧ ಕಠಿಣ ಕ್ರಮವಾಗಿತ್ತು.
ಈ ಎಲ್ಲಾ ಬೆಳವಣಿಗೆ ಹಿನ್ನಲೆ ಮಂಜುನಾಥ ಬೇಕನಿ ತಲೆಮರೆಸಿಕೊಂಡಿದ್ದರು. ಮೊಬೈಲ್ ಸಹ ಬಳಸದೇ ತಲೆಮರೆಸಿಕೊಂಡು ತಿರುಗುತ್ತಿದ್ದರು. ಅದಾಗಿಯೂ, ಪೊಲೀಸರು ಎರಡು ತಂಡ ರಚಿಸಿ ಹುಡುಕಾಟ ಶುರು ಮಾಡಿದ್ದರು. ವಿವಿಧ ಮಾಹಿತಿ ಆಧಾರದಲ್ಲಿ ಮಹಾರಾಷ್ಟ್ರಕ್ಕೆ ಹೊರಟ ಪೊಲೀಸರು ಸಾಂಗ್ಲಿ ಬಳಿಯ ತಾಸಾಗಂ ಗ್ರಾಮದಲ್ಲಿ ಶೋಧ ನಡೆಸಿದರು. ಅಲ್ಲಿ ಅಡಗಿದ್ದ ಆರೋಪಿಯನ್ನು ವಶಕ್ಕೆಪಡೆದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಪಿಐ ಜೈಪಾಲ್ ಪಾಟೀಲ್, ಪಿಸೈ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್ ಜೊತೆ ಪೊಲೀಸ್ ಸಿಬ್ಬಂದಿ ಎಂಎA ಮುಲ್ಲಾ, ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ, ಬಸವರಾಜ ಹಗರಿ, ಮಂಜುನಾಥ ಬಾಲಿ ಭಾಗವಹಿಸಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.