ಭಟ್ಕಳದಲ್ಲಿ ಗಾಂಜಾ ಮಾರಾಟ ಹಾಗೂ ಖರೀದಿ ಪ್ರಮಾಣ ಹೆಚ್ಚಾಗಿದೆ. ನಿರಂತರ ಕಾರ್ಯಾಚರಣೆ ನಡೆಸುವ ಪೊಲೀಸರು ಗಾಂಜಾ ವ್ಯಸನಿಗಳ ಜೊತೆ ಮಾರಾಟಗಾರರನ್ನು ಬಂಧಿಸುತ್ತಿದ್ದಾರೆ.
ಭಟ್ಕಳ ಮುಗ್ದುಂ ಕಾಲೋನಿ ಮೌಂಟೆನ್ ಗ್ರೌಂಡ್ ಬಳಿ ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ಮಂಗಳವಾರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೆಬಳೆ ಪಿರ್ದೋಸ್ ನಗರದ ಮಹಮದ್ ಶೇಖ್ ಅವರ ಪುತ್ರ ಅಬ್ರಾರ್ ಶೇಖ್ (24) ಅವರು ಗಾಂಜಾ ಮಾರಾಟ ಮಾಡುವಾಗ ಪಿಸೈ ನವೀನ ನಾಯ್ಕ ಅವರು ದಾಳಿ ಮಾಡಿದ್ದಾರೆ. ಹೊಂಡಾ ಸಿಟಿ ಕಾರಿನಲ್ಲಿದ್ದ 12 ಸಣ್ಣ ಸಣ್ಣ ಪ್ಯಾಕೇಟುಗಳನ್ನು ಅವರು ವಶಕ್ಕೆಪಡೆದಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ.
ಭಟ್ಕಳ ಬದ್ರಿಯಾ ಕಾಲೋನಿಯ ಸರ್ಫರಾಜ್ ಶಬ್ಬೀರ್ ಯಲಗಟ್ಟಿ ಅವರು ಟೈಲ್ಸ ಕೆಲಸ ಮಾಡುವುದನ್ನು ಬಿಟ್ಟು ಗಾಂಜಾ ವ್ಯಸನಿಯಾಗಿದ್ದಾರೆ. ಜೂನ್ 7ರ ರಾತ್ರಿ ಅವರು ಹೆಬಳೆ ಗ್ರಾಮದ ಶೇಮ್ಸ್ ಶಾಲೆಯ ಬಳಿ ವಿಚಿತ್ರವಾಗಿ ವರ್ತಿಸುತ್ತಿದ್ದು, ಪಿಸೈ ಭರಮಪ್ಪ ಬೆಳಗಲಿ ಅವರು ವಿಚಾರಣೆ ನಡೆಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಭಟ್ಕಳ ಉಸ್ಮಾನ ನಗರದ ಮಹಮದ್ ರಯ್ಯಾನ್ ಶಬ್ಬೀರ್ ಸಯ್ಯದ್ ಅವರು ಸಹ ಗುಳ್ಮೆ ಗ್ರಾಮದ ಲಕ್ಕಿ ಪ್ಯಾಕ್ಟರಿ ಬಳಿ ಅಮಲಿನಲ್ಲಿರುವಾಗ ಸಿಕ್ಕಿ ಬಿದ್ದಿದ್ದಾರೆ. ಬಾಯಿಂದ ಘಾಟು ವಾಸನೆ ಬರುವುದನ್ನು ನೋಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಖಚಿತವಾಗಿದೆ.
ಇದರೊಂದಿಗೆ ಬೆಳಲಖಂಡ ಗುಳ್ಮೆಯ ಸೆಲ್ಸಮೆನ್ ಅಮನ ಮಹಮದ್ ಹುಸೇನ್ ಅವರು ಸಹ 18ನೇ ವಯಸ್ಸಿನಲ್ಲಿಯೇ ಹಾದಿ ತಪ್ಪಿದ್ದಾರೆ. ಲಕ್ಕಿ ಪಾಕ್ಟರಿ ಬಳಿ ಅಲೆದಾಡುತ್ತಿದ್ದ ಅಮನ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸರಿಯಾಗಿ ಮಾತನಾಡದ ಕಾರಣ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಿದ್ದು, ಅಲ್ಲಿ ಅಮನ್ ಮಹಮದ್ ಹುಸೇನ್ ಗಾಂಜಾ ಸೇವಿಸಿರುವುದು ಗೊತ್ತಾಗಿದೆ. ಈ ಎಲ್ಲಾ ಪ್ರಕರಣದಲ್ಲಿಯೂ ಆರೋಪಿಗಳ ವಿರುದ್ಧ ಕಾನೂನು ಕ್ರಮವಾಗಿದೆ.