ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಮಠದ ಮುಂದೆ ಮಲಗಿಸಿದ ಪರಿಣಾಮ ವ್ಯಕ್ತಿಯೊಬ್ಬರ ಸಾವಾಗಿದೆ. ಬೈಕಿನಿಂದ ಬಿದ್ದ ವ್ಯಕ್ತಿ ಗೋಳಾಡುತ್ತಿದ್ದರೂ ಸಹಾಯ ಮಾಡದೇ ಪರಾರಿಯಾದವನ ವಿರುದ್ಧ ಪೊಲೀಸ್ ಪ್ರಕರಣವೂ ದಾಖಲಾಗಿದೆ.
ಬೆಳಗಾವಿ ಬೈಲಹೊಂಗಲದ ಮಂಜು ಕಡಗೋಳ ಅವರು ಜೂನ್ 12ರಂದು ಜೊಯಿಡಾ ಪ್ರವಾಸಕ್ಕೆ ಬಂದಿದ್ದರು. ಅವರು ತಮ್ಮ ಜೊತೆ ಸಿದ್ದಪ್ಪ (ಅಶೋಕ) ಶೀಲವಂತರ್ ಅವರನ್ನು ಕರೆತಂದಿದ್ದರು. ಅವರಿಬ್ಬರು ಆ ದಿನ ಬೈಕ್ ಮೇಲೆ ಎಲ್ಲಡೆ ಸುತ್ತಾಟ ನಡೆಸಿದ್ದರು. ಮಧ್ಯಾಹ್ನದ ವೇಳೆಗೆ ಜೊಯಿಡಾದಿಂದ ದಾಂಡೇಲಿ ಕಡೆ ಮಂಜು ಕಡಗೋಳ ಅವರು ಜೋರಾಗಿ ಬೈಕ್ ಓಡಿಸಿಕೊಂಡು ಬಂದಿದ್ದು, ಆ ಬೈಕು ಪೊಟೋಳಿ ಕ್ರಾಸಿನ ಬಳಿ ಚರಂಡಿ ಹಾರಿತು. ಬೈಕ್ ಅಪಘಾತದ ಪರಿಣಾಮ ಸಿದ್ದಪ್ಪ ಶೀಲವಂತರ್ ಅವರು ಗಂಭೀರವಾಗಿ ಗಾಯಗೊಂಡರು.
ಆ ಅಪಘಾತದಿಂದ ಕಂಗಾಲಾದ ಬೈಕ್ ಚಾಲಕ ಮಂಜು ಕಡಗೋಳ ಅವರು ಗಾಯಾಳುವಿನ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ತಾವು ಪ್ರಾಣಾಪಾಯದಿಂದ ಪಾರಾದ ಕಾರಣ ಗೆಳೆಯನ ಜೀವದ ಬಗ್ಗೆ ಹೆಚ್ಚು ಕಾಳಜಿವಹಿಸಲಿಲ್ಲ. ಗಾಯಗೊಂಡಿದ್ದ ಸಿದ್ದಪ್ಪ ಶೀಲವಂತರ್ ಅವರು ಗೋಗರೆದರೂ ಆಂಬುಲೆನ್ಸಿಗೆ ಫೋನ್ ಮಾಡಲಿಲ್ಲ. ಜೊತೆಗಿದ್ದ ಸ್ನೇಹಿತನನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡಲಿಲ್ಲ. ಬದಲಾಗಿ, ಗಾಯಗೊಂಡಿದ್ದ ಸಿದ್ದಪ್ಪ ಶೀಲವಂತರ್ ಅವರನ್ನು ಮಂಜು ಕಡಗೋಳ ಅವರು ದಾಂಡೇಲಿಗೆ ಕರೆತಂದಿದ್ದು, ಅಲ್ಲಿದ್ದ ಮೃತ್ಯುಂಜಯ ಮಠದ ಮುಂದೆ ಮಲಗಿಸಿದರು. ಗಾಯಗೊಂಡ ಗೆಳಯ ಸಿದ್ದಪ್ಪ ಶೀಲವಂತರ್ ಅವರು `ಆಸ್ಪತ್ರೆಗೆ ಸೇರಿಸು’ ಎಂದು ಕೈ ಮುಗಿದರೂ ಅದನ್ನು ಕೇಳಿಸಿಕೊಳ್ಳದೇ ಮಂಜು ಕಡಗೋಳ್ ಅವರು ಅಲ್ಲಿಂದ ಪರಾರಿಯಾದರು.
ಮೃತ್ಯುಂಜಯ ಮಠದ ಮುಂದೆ ಮಲಗಿದ್ದ ಸಿದ್ದಪ್ಪ ಶೀಲವಂತರ್ ಅವರು ತೀವೃ ಪ್ರಮಾಣದಲ್ಲಿ ಅಸ್ವಸ್ಥರಾಗಿದ್ದರು. ಅವರನ್ನು ನೋಡಿದ ಜನ 108ಗೆ ಫೋನ್ ಮಾಡಿ ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಶಿಫಾರಸ್ಸು ಮಾಡಿದ್ದು, ಸಿದ್ದಪ್ಪ ಶೀಲವಂತರ್ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಲಾಯಿತು. ಒಂದು ದಿನ ಸಾವು-ಬದುಕಿನ ಹೋರಾಟ ನಡೆಸಿದ ಸಿದ್ದಪ್ಪ ಅವರು ಜೂನ್ 13ರಂದು ಸಾವಿನ ಹಾದಿ ಹಿಡಿದರು. ಜೊತೆಗಿದ್ದ ಸ್ನೇಹಿತ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಿದ್ದರೆ ಸಿದ್ದಪ್ಪ ಶೀಲವಂತರ್ ಅವರು ಬದುಕುತ್ತಿದ್ದರು. ಸ್ನೇಹಿತ ಮಾಡಿದ ದ್ರೋಹದ ಬಗ್ಗೆ ಅನಿತಾ ಶೀಲವಂತರ್ ಅವರು ದಾಂಡೇಲಿ ಪೊಲೀಸರಿಗೆ ವಿವರಿಸಿದ್ದು, ಪೊಲೀಸರು ಮಂಜು ಕಡಗೋಳರ ವಿರುದ್ಧ ಕೇಸು ದಾಖಲಿಸಿದರು.